Thursday 24 December, 2009

ಸಾವಿನೊಂದಿಗೆ ನಿಶ್ಚಿತಾರ್ಥ.....


      
       ಕನಸು ನಿಜವಾದಾಗ ಆಗುವ ಸಂಭ್ರಮಕ್ಕಿಂತ ’ಕನಸು ನಿಜವಾದಂತೆ ಕನಸಾಗಿದೆ...’ ಎಂದು ಕನಸು ಕಾಣುವಾಗಲೇ ಸುಖ ಎಂದು ಅನಿಸಿದ್ದು ನಮ್ಮ ಮದುವೆ ಮುಗಿದು, ನೆಂಟರಿಗೆಲ್ಲ ತಮ್ಮ ತಮ್ಮ ಮನೆಗಳ ನೆನಪಾಗಿ, ನಮ್ಮ ಮನೆ ಖಾಲಿಯಾದಾಗ..ಜೊತೆಗೆ ಮನಸ್ಸೂ...
      ಅತ್ತೆಗೆ ಖಿನ್ನಳಾಗಿ ಕುಳಿತಿದ್ದ ಹೊಸ ಸೊಸೆಯನ್ನು ಸಂತೈಸಿ ತಾನೇ ಇನ್ನುಮೇಲೆ ನಿನ್ನ ಅಮ್ಮನಾಗಿ ಪೊರೆಯುತ್ತೇನೆ ಎಂಬುದನ್ನು ಧೃಢಪಡಿಸುವ ತವಕ. ಮದುವೆಯಾಗಿ ಮನೆಗೆ ಬಂದ ಹೊಸದರಲ್ಲಿ ತನಗೂ ಹೀಗೆ ಆಗಿತ್ತು, ತವರನ್ನು ಬಿಟ್ಟು ಬರುವದು ಕಷ್ಟ,ಹೊಸಬರೊಂದಿಗೆ ಹೊಂದಾಣಿಕೆ ಕಷ್ಟ, ಆದರೂ ಹೆಣ್ಣಿಗೆ ಸಾಧ್ಯ, ಎಂದೆಲ್ಲ ಹೇಳಿ ಧೈರ್ಯ ತುಂಬತೊಡಗಿದ್ದರು. ಸಮಾಧಾನ ನನ್ನ ತಲೆಯ ಮೇಲಿಂದ ಹಾದು ಹೋಗುತ್ತಿತ್ತು. ನಾಲ್ಕು ವರ್ಷಗಳಿಂದ ಕಾದು, ಕಾದು, ಪರಿತಪಿಸಿ, ಬಯಸಿ ಮದುವೆ ಆದಮೇಲೆ ಕಷ್ಟವೇನಿದೆ?  ಯಾವಾಗಲೂ ಇದ್ದದ್ದು ಹಾಸ್ಟೇಲುಗಳಲ್ಲೇ. ನನಗೊಂದು ತವರಿದೆ ಎಂಬುದು ನೆನಪಾದದ್ದೇ ಅವರು ಮದುವೆಯ ದಿನವನ್ನು ನಿಶ್ಚಯಿಸುವ ಕೆಲಸವನ್ನು ಮುಂದೂಡುತ್ತಾ ಹೋದಾಗ.ಸಿಟ್ಟು ಬಂದು, ಯಾವಾಗ ಬಿಟ್ಟು ಹೋಗುವೆನೋ ಎನಿಸಿರುವ ತವರನ್ನು ಬಿಟ್ಟು ಹೋಗಲೇನು ಕಷ್ಟ?
       ಊಹುಂ,ನನಗೆ ಯಾರು ಸಮಾಧಾನ ಮಾಡುವುದೂ ಬೇಕಾಗಿರಲಿಲ್ಲ.ನೀನು ಕೂಡ! ಕೇವಲ ನಿನಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿತ್ತು.ನೀನು ನನಗೆ ಹೇಳದೇ ಯಾವ ಕೆಲಸವನ್ನು ಮಾಡುವುದಿಲ್ಲ, ಅಥವಾ ಮಾಡಿದ ಮೇಲಾದರೂ ಹೇಳದೇ ಇರುವುದಿಲ್ಲ ಎಂಬುದು ಗೊತ್ತಿತ್ತು, ಗೊತ್ತಿದ್ದದ್ದು ಅದು.ಭಾವಿಸಿದ್ದಲ್ಲ.ಆದರೆ ಮದುವೆಯ ಮರುದಿನ ನನಗೆ ಗೊತ್ತಿಲ್ಲದೇ ನೀನು ಆಸ್ಪತ್ರೆಗೆ ಹೋಗಿ ಬಂದಿದ್ದೆ. ಅಲ್ಲಿರುವವರೆಲ್ಲ ನನ್ನ ಹಿತೈಷಿಗಳೆಂದು ಹೇಳಿಕೊಳ್ಳುವವರೇ, ನನಗೆ ಸುದ್ದಿ ತಿಳಿಯದೇ ಇರುತ್ತದಾ? ಆದರೆ ನಿನ್ನ ಮುಖದಲ್ಲಿ ತುಂಬಿದ ಅಪರಾಧಿ ಪ್ರಜ್ಞೆಯನ್ನು ನಾನು ಆಶ್ಚರ್ಯದಿಂದ ನೋಡುತ್ತಲೇ ಇದ್ದೆ. ನಿನ್ನ ಮೇಲೆ ಕೋಪ ಅನುಮಾನ ಎಲ್ಲಕ್ಕಿಂತ ಹೆಚ್ಚಾಗಿ ಆಶ್ಚರ್ಯ ಮೂಡಿತ್ತು.  ನೀನು ಎರಡು ದಿನದಿಂದ ನನ್ನ ಕಣ್ಣಿಗೂ ಬೀಳಬಾರದೆಂಬಂತೆ, ಮದುವೆಗೆ ತಂದಿದ್ದ ಕಂಬಳಿ, ಗುಡಾರಗಳನ್ನು ಸಾಗಿಸುವ, ಚಪ್ಪರ ಬಿಚ್ಚಿಸುವ ಕೆಲಸದಲ್ಲಿ ತೊಡಗಿ, ನಾನು ಮಲಗಿದ ಮೇಲೆ ಒಳಗೆ ಬರತೊಡಗಿದ್ದು ನೋಡಿ ತುಂಬ ಆಶ್ಚರ್ಯವಾಗತೊಡಗಿತ್ತು. ನಿನಗೆ ಸಾವಿನ ಮುನ್ಸೂಚನೆ ಸಿಕ್ಕಿಯಾಗಿತ್ತೆಂದು ತೋರುತ್ತದೆ. ನನಗೂ ನೀನು ದೂರವಾಗುತ್ತಿರುವುದರ ಸೂಚನೆ ಸಿಕ್ಕಿಯಾಗಿತ್ತು. ಆದರೆ ಖಂಡಿತ ಹೀಗಾಗುತ್ತದೆಯೆಂದು ಕನಸಿನಲ್ಲೂ ಎಣಿಸಿರಲಿಲ್ಲ.ಕನಸಿನಲ್ಲಿ ಏನು ಎಣಿಸುವುದು? ನೀನು ಮಾತನಾಡದೇ ಉಳಿದ ದಿನಗಳನ್ನು ನಿಜವಾಗಿಯೂ ಎಣಿಸಿ ಎಣಿಸಿ ಸುಸ್ತಾಗಿದ್ದೆ. ಬಾಯಿಬಿಟ್ಟು ಕೇಳಲು ಸ್ವಾಭಿಮಾನ (ಅಹಂಕಾರ ಎಂದರೆ ಸಮಂಜಸವಾಗಬಹುದು). ವಿನಾಕಾರಣ ಹೀಗೆ ಮಾಡುತ್ತಿದ್ದೀಯ ಎನಿಸಿದರೂ ಹಾಗಲ್ಲ ಎಂದು ಗೊತ್ತಿತ್ತು.
    ಪ್ರತಿ ಕ್ಷಣ ನಿನ್ನ ಹೃದಯ ಬಡಿತದೊಂದಿಗೇ ನಾನು ಉಸಿರಾಡಿದ್ದೆ ನಾಲ್ಕು ವರ್ಷಗಳಿಂದ! ಆದರೂ ನೀನು ಹೀಗೆ ಮಾಡಬಹುದೇ? ನೀನು ನನ್ನ ಪಾವಿತ್ರ್ಯತೆಯನ್ನು ಉಳಿಸಿ, ನಾನು ಬೇರಾರನ್ನೋ ಮದುವೆಯಾಗಿ ಸುಖವಾಗಿರಲೆಂದು ಬಯಸಿದ್ದು ತಪ್ಪಲ್ಲ, ಆದರೆ ನನ್ನಿಂದ ಅದು ಸಾಧ್ಯ ಎಂದು ಯೋಚಿಸಲು ಮನಸ್ಸಾದರೂ ಹೇಗೆ ಬಂತು ನಿನಗೆ? ನಿನ್ನ ಜಾಗದಲ್ಲಿ ನಾನಿದ್ದರೂ ಹಾಗೆಯೇ ಮಾಡುತ್ತಿದ್ದೆನೇನೋ. ಆದರೂ...ಅಷ್ಟೆಲ್ಲ ಮಾಡುವ ಅಗತ್ಯವಿರಲಿಲ್ಲ. ನೀನು ನನ್ನನ್ನು ಮುಟ್ಟಿದ್ದರೆ ನಾನು ಖಂಡಿತ ಮತ್ತಷ್ಟು ಪವಿತ್ರಳಾಗುತ್ತಿದ್ದೆ, ರಾಮ ಮುಟ್ಟಿದ ಬಂಡೆ ಅಹಲ್ಯೆಯಾದಂತೆ.ನೀನು ಅಷ್ಟೊಂದು ಅಪರಾಧಿ ಪ್ರಜ್ಞೆ ಇಟ್ಟುಕೊಂಡು ಹೊರಟು ಹೋಗಿದ್ದು ಸರಿಯಾ? ಇಷ್ಟೊಂದು ಪ್ರೀತಿಸಿದ ನನ್ನನ್ನು ಬಿಟ್ಟು ಹೋಗಲು ನಿನಗೂ ಮನಸಿರಲಿಲ್ಲವೆಂದು ಗೊತ್ತು ನನಗೆ. ಆದರೆ ಅದನ್ನು ನೀನು ಮಾಡಿದ ತಪ್ಪೆಂದು ಹೇಗೆ ಅಂದುಕೊಂಡೆ ನೀನು? ಸಾವು ನಮ್ಮ ಕೈಯಲ್ಲಿಲ್ಲ ಎಂದು ನನಗೆ ಗೊತ್ತಿರುವ ಹಾಗೇ ನಿನಗೂ ಗೊತ್ತಿತ್ತು. ’ಕೊನೆವರೆಗೂ ಜೊತೆಗಿರುತ್ತೇನೆ’ ಎಂಬ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲವೆಂದು ನೀನು ಕೊನೆ ಗಳಿಗೆಯಲ್ಲಿ ಎಷ್ಟೊಂದು ನೊಂದುಕೊಂಡೆಯಲ್ಲವೇ? ಹೊಸ ಜೀವನದ ಆರಂಭದ ದಿನವೇ ಜೀವನ ಅಂತ್ಯದ ದಿನವನ್ನು ಕೂಡ ತಿಳಿಸಿಬಿಟ್ಟಿತು. ಅದರಲ್ಲಿ ನಿನ್ನ ತಪ್ಪೇನು?ಬೇರೆಯವರಿಗೆ ಆ ದಿನದ ನಿಶ್ಚಯವಾಗಿರುವುದು ಗೊತ್ತಾಗಿರುವುದಿಲ್ಲ, ನಿನಗೆ ಗೊತ್ತಾಗಿತ್ತು ಅಷ್ಟೇ ತಾನೇ ವ್ಯತ್ಯಾಸ? ನಿಶ್ಚಯವಂತೂ ಆಗಿಯೇ ಇರುತ್ತದೆಯಲ್ಲವೇ?
ನನ್ನ-ನಿನ್ನ ಮದುವೆಯ ಮರುದಿನ ನಿನಗೆ ಇನ್ನೊಬ್ಬರೊಂದಿಗೆ ನಿಶ್ಚಿತಾರ್ಥ. ಅದೂ ಸಾವಿನೊಂದಿಗೆ! ನಾನು ನೊಂದುಕೊಳ್ಳುತ್ತೇನೆ ಎಂದುಕೊಂಡೆ ಅಲ್ಲವೇ?ಅಥವಾ ಸಾವನ್ನು ನನ್ನ ಸವತಿಯಂತೆ ತಿಳಿದು ಅಸೂಯೆ ಪಡುತ್ತೇನೆ ಎಂದುಕೊಂಡೆಯೇನೋ? ಇಲ್ಲ, ನಿನಗೆ ಗೊತ್ತಿತ್ತು ನನಗೆ ’Possessiveness’ ಯಾವತ್ತಿಗೂ ಇರಲಿಲ್ಲವೆಂದು.
    ಒಂದು ಖುಷಿಯ ವಿಷಯ ಹೇಳಬೇಕು ನಿನಗೆ, ನೀನು ನನಗೆ ಕೊಟ್ಟ ಮಾತು, ನಾನು ನಿನಗೆ ಕೊಟ್ಟ ಮಾತು ಎರಡೂ ಉಳಿಯುತ್ತಿದೆ. ಮಾತು ಉಳಿಸುವ ಸಲುವಾಗಿಯಲ್ಲ, ನಿನ್ನನ್ನು ಬಿಟ್ಟು ಹೇಗೆ ಬದುಕುವುದೆಂಬುದು ನನಗೆ ಮರೆತು ಹೋಗಿದೆ ಆದ್ದರಿಂದ ನಿನ್ನ ಹಿಂದೆಯೇ ಬರುತ್ತಿದ್ದೇನೆ. ನೀನು ಹೋರಟು ಒಂದು ಘಂಟೆಯಾಗಿರಬಹುದು ಅಲ್ಲವೇ? ಅದನ್ನು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು.ತಡವಾದದ್ದಕ್ಕೆ ಕ್ಷಮಿಸು ನನ್ನನ್ನು. ನಂಬಲಾಗಲಿಲ್ಲ ನೀನು ನನ್ನನ್ನು ಬಿಟ್ಟು ಹೊರಟುಬಿಟ್ಟೆಯೆಂದು.ಯಾವಾಗಲೂ ಹಾಗೆ ಮಾಡುತ್ತಿರಲಿಲ್ಲ.ಇವತ್ತು ಯಾಕೆ ಅಷ್ಟು ಅವಸರ ಮಾಡಿದೆ? ಯಾವಾಗಲೂ ನಾನು ಸಿಂಗರಿಸಿಕೊಂಡು ಬರಲು ಎಷ್ಟು ತಡವಾದರೂ ಕಾಯುತ್ತಿದ್ದೆ. ನನಗಿಂತ ಸಾವಿನ ಮೇಲೆಯೇ ಹೆಚ್ಚು ಪ್ರೀತಿ ಬಂದಿತಾ ನಿನಗೆ? ಗೊತ್ತು ನನಗೆ, ನಿನಗೂ ಕಷ್ಟವಾಗುತ್ತದೆ ಅಲ್ಲಿ, ಮೊದಲೇ ಆರೊಗ್ಯ ಸರಿಯಿಲ್ಲ ನಿನಗೆ. ನಿನ್ನ ಕೆಲಸಗಳನ್ನು ನಾನಲ್ಲದೇ ಬೇರೆ ಯಾರೋ ಮಾಡುವುದು, ಅದು ಸರಿಯಾಗದೇ ನೀನು ಬೇಸರಿಸಿಕೊಂಡು ಕಣ್ಣಲ್ಲಿ ನೀರು ತುಂಬಿಕೊಳ್ಳುವುದು, ಇದನ್ನೆಲ್ಲ ನನ್ನಿಂದ ಸಹಿಸಲಾಗುವುದಿಲ್ಲ.
    ನೀನು ಮಾಡಿದ್ದರಲ್ಲಿ ಒಂದೇ ಒಂದು ನನಗೆ ತಪ್ಪೆಂದು ಕಂಡಿದ್ದು. ಪ್ರತಿಯೊಂದನ್ನೂ ಹೇಳುತ್ತೇನೆ ಎಂದು ಹೇಳಿ ಸಾವಿನೊಡನೆ ನಿನ್ನ ನಿಶ್ಚಿತಾರ್ಥವಾಗಿ ಒಂದು ವರ್ಷವಾದರೂ ನನಗೆ ಹೇಳಲೇ ಇಲ್ಲ ನೀನು.ಗೊತ್ತಾಗಿದ್ದರೆ ಆವತ್ತೇ ನಾನೂ ಮಾಡಿಕೊಳ್ಳುತ್ತಿದ್ದೆ. ಪರವಾಗಿಲ್ಲ ಬಿಡು, ಅವಸರವಸರವಾಗಿ ನನ್ನ ಮದುವೆಯೇ ಆಗುತ್ತಿದೆ ಅದರೊಂದಿಗೆ.ನನ್ನ ಎರಡನೆಯ ಮದುವೆ ನಿಶ್ಚಿತಾರ್ಥವಿಲ್ಲದೆಯೇ ಆಗುತ್ತಿದೆ! ನೀನು ಹೊರಟಕೂಡಲೇ ಸಿಂಗರಿಸಿಕೊಳ್ಳುತ್ತೇನೆಂದು ಹೇಳಿ ಒಳಗೆ ಬಂದುಬಿಟ್ಟೆ ನಾನು, ಅದನ್ನು ನೋಡಿ, ಅವರೆಲ್ಲ ಭಯಪಟ್ಟರು ಎನಿಸುತ್ತದೆ ಹುಚ್ಚು ಹಿಡಿದಿದೆಯೆಂದು.ಏನೋ... ಗೊತ್ತಾಗುತ್ತಿಲ್ಲ ನನಗೆ, ಇದ್ದರೂ ಇರಬಹುದು ಎನಿಸುತ್ತಿದೆ. ಬೇರೆ ಯಾರಿಗೂ ಸರಿಯಾಗಿ ಗೊತ್ತಾಗುವುದಿಲ್ಲ ನನ್ನ ಮನಸ್ಸಿನಲ್ಲಿ  ಏನಾಗುತ್ತಿದೆಯೆಂದು. ನನಗೆ ಗೊತ್ತಾಗದಿದ್ದರೂ ನಿನಗೆ ಗೊತ್ತಾಗುತ್ತದೆ.ಆದ್ದರಿಂದಲೇ ಬರುತ್ತಿದ್ದೇನೆ. ಹೌದು, ನಾನೂ ಬರುತ್ತಿದ್ದೇನೆ.ದಯವಿಟ್ಟು ಎಲ್ಲಿದ್ದೀಯೋ ಅಲ್ಲಿಯೇ ನಿಲ್ಲು...ಒಂದು ಘಂಟೆ ತಡವಾದದ್ದಕ್ಕೆ ಬೇಸರಿಸಿಕೊಳ್ಳಬೇಡ. ನಿನ್ನ ಕಣ್ಣಲ್ಲಿ ಒಂದು ಹನಿ ನೀರು ಬಂದರೂ ಅದನ್ನು ನಾನೇ ಒರೆಸಬೇಕು.

Monday 21 December, 2009

ಇನ್ನಾದರೂ....



ನಾವಿಕನಂತೆ ನೀನಿರಲು
ನಿನ್ನೆದೆಯ ನೌಕೆಯಲಿ
ನನ್ನುಸಿರ ಪಯಣ
ಬಾರದೆಯೆ ಇರಲೆನ್ನ ನಿಲ್ದಾಣ

ಪಯಣಿಗಳು ನಾನೆಂದು ತಿಳಿದು
ಇಳಿಯೆನ್ನದಿರು ನನ್ನ
ನಿರ್ಜೀವ ನೌಕೆಯಾಗಿಯಾಗಿಯಾದರೂ
ಬಳಿಯಿರುವೆನು.

ಕಣ್ಣೆದುರು ನಾನಿರಲು
ಕಣ್ಣು ಮುಚ್ಚಿ ಮರೆಯಬಹುದು ನೀನು
ಅದೃಶ್ಯವಾಗುವ ದೃಶ್ಯವಾಗಲಾರೆ ನಾನು
ರೆಪ್ಪೆಯೊಳಗಿನ ಕತ್ತಲಾದರೂ ಆಗಿ
ಜೊತೆಗಿರುವೆನು.

ಕಡಲಂತೆ ನೀನಿರಲು
ಬಳಿ ಬಾ ಎನಲಾರೆನು
ನದಿಯಾಗಿ ಹರಿದಿಹೆನು
ಇನ್ನಾದರೂ ಬಂದು ನಿನ್ನ ಸೇರಲೇನು?



Tuesday 8 December, 2009

ಮರೆತಿಹೆನೆ ನಿನ್ನ?



ಕಳೆದು ಹೋದ ಓಲೆ
ನನ್ನೊಲವು....
ಬೇರೆ ಓಲೆ ಬರೆಯಲೋ?
ಹಳೆಯದನ್ನೇ ಹುಡುಕಲೋ?


ತಿಳಿದಿರುವುದೇನೆಂದು
ತಿಳಿಯದಾಗಿದೆ.
ತಿಳಿಸೆಂದು ನಿನ್ನನ್ನೇ ಕೇಳಲೋ?
ನನ್ನ ತಿಳಿವಿನೊಳವನ್ನೇ ಕೆದಕಲೋ?


ಮಿತಿಮೀರಿದೆಯಂತೆ ಮರೆವು
ಕಾರಣ ಕೇಳಲು ನಸುನಗುತಿದೆ ಮನವು
ನಿನ್ನ ಮರೆಯಲೆತ್ನಿಸಿ ಉಳಿದೆಲ್ಲವನ್ನು
ಮರೆತಾಗಿದೆಯೆಂದು ಕೆಣಕುತಿದೆ ತಿಳಿವು.

Tuesday 1 December, 2009

ಯಾವುದು ಹೆಚ್ಚು ತಪ್ಪು?



         "ಅರ್ಥ ಮಾಡಿಕೊಳ್ಳದೇ ಪ್ರೀತಿಸೋದು ತಪ್ಪು...ಆದರೆ ಆ ತಪ್ಪಿಗಾಗಿ ಜೀವನ ಪೂರ್ತಿ ಶಿಕ್ಷೆ ಅನುಭವಿಸೋದು ನ್ಯಾಯವಾ? ನಾವು ಪ್ರೀತಿ ಅಂತ ಅಂದುಕೊಂಡದ್ದು ಪ್ರೀತಿ ಅಲ್ಲ ಅಂತ ಅರ್ಥ ಆಗಿಯೂ ಜೀವಂತಿಕೆ ಇಲ್ಲದ ಜೀವನವನ್ನು ಅನುಭವಿಸುವುದಕ್ಕಿಂತ,ಈಗ ಅನುಭವಿಸುವ ಅಪರಾಧಿ ಪ್ರಜ್ಞೆ ಗಿಂತ ಹೆಚ್ಚಿನ ಯಾತನೆ ಕಾದಿದೆ ಮುಂದೆ ಅಂತ ಅರಿವಾದ ಮೇಲೂ ಜೊತೆಯಾಗಿರುತ್ತೇನೆ ಎನ್ನುವುದಕ್ಕಿಂತ, ಬಿಟ್ಟು ಬರುವುದು ತುಂಬ ಒಳ್ಳೆಯದು ಎನಿಸುತ್ತಿದೆ ಮರೀ.. ಅಷ್ಟು ದೈರ್ಯ ತಂದುಕೊಳ್ಳಲು ಮನಸ್ಸು ಒಪ್ಪಿದರೆ ಎದ್ದು ಬಂದುಬಿಡು"
       ಊಹುಂ...ಅಮ್ಮ ಹೇಳಿದ ಒಂದೇ ಒಂದು ಮಾತು ಕೂಡ ನನಗಾಗ ತಿಳಿಯಲಿಲ್ಲ. ನನ್ನ ಬದುಕಿನ ಎಲ್ಲ ಸಂತೋಷದ ಕ್ಷಣಗಳನ್ನು ಅವನಿಗಾಗಿ ಬಿಟ್ಟುಕೊಡಬಯಸಿದ್ದೆ, ನಾನೇನೋ ದೊಡ್ಡ ತ್ಯಾಗ ಮಾಡುತ್ತಿದ್ದೇನೆಂದು ನನಗೆಂದಿಗೂ ಅನ್ನಿಸಲಿಲ್ಲ, ಪ್ರೀತಿಯಲ್ಲವೇ? ಎಲ್ಲರೂ ಹೇಳಿದ್ದು ಮಾತ್ರವಾಗಿರಲಿಲ್ಲ, ಸ್ವತಃ ಅರ್ಥವಾಗಿತ್ತು ತನ್ನ ಅಹಂ ತೃಪ್ತಿಗಾಗಿ ನನ್ನನ್ನು ಪ್ರೀತಿಸುತ್ತಿದ್ದಾನೆ ಎಂದು. ಅವನೇ ಬಾಯಿ ಬಿಟ್ಟು ಹೇಳುತ್ತಿದ್ದ, " ಗೊತ್ತು ಕಣೇ, ನೀನು ಯಾವತ್ತೂ ನನ್ನ ಮಾತು ಮೀರುವುದಿಲ್ಲ ಅಂತ". ಅದನ್ನು ಕೂಡ ಅವನು ನನ್ನ ಅದಮ್ಯ ಪ್ರೀತಿಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡ ರೀತಿಯೆಂದೇ ಭಾವಿಸುತ್ತಿದ್ದೆನಲ್ಲವೇ? ಅದು ನನ್ನ ದೊಡ್ಡ ಗುಣವೇನಾಗಿರಲಿಲ್ಲ. ಕಣ್ಣಿಗೆ ಪ್ರೀತಿಯೆಂಬ ಬಣ್ಣದ ಕನ್ನಡಕ ಹಾಕಿಕೊಂಡು ನೋಡಿದಾಗ ಜಗತ್ತು ಕಂಡದ್ದೇ ಹಾಗೆ ನನಗೆ. ಬಣ್ಣ ಬಣ್ಣವಾಗಿ, ರೋಮಾಂಚಕಾರಿಯಾಗಿ! ಅರಿತು ಮಾಡಿದ ತಪ್ಪು ಕೂಡ ಅಲ್ಲ ಅದು. ಆದರೆ ಅರಿಯದೇ ಮಾಡಿದ ತಪ್ಪಿನ ಅರಿವಾದಾಗ ತಿದ್ದಿಕೊಳ್ಳುವ ಅವಕಾಶ ಇನ್ನೂ ಕಳೆದು ಹೋಗಿಲ್ಲವೆಂದಾದರೆ, ತಿದ್ದಿಕೊಳ್ಳುವುದು ತಪ್ಪಾ? ಹೀಗೆಂದು ಕೇಳಿದ ಮನಸ್ಸೇ ಮರುಕ್ಷಣ ಅಪರಾಧಿ ಪ್ರಜ್ಞೆ ಮೂಡಿಸಿ, ಚುಚ್ಚಿ ಕೊಲ್ಲುತ್ತಿತ್ತು ನನ್ನನ್ನು. ಆದ್ದರಿಂದಲೇ ಸುಮ್ಮನಾಗಿಬಿಟ್ಟೆ, ಜೀವನ ಪರ್ಯಂತ ವಿಫುಲವಾಗಿ ದೊರೆಯಲಿರುವ ದುಃಖವನ್ನಾದರೂ ಅನುಭವಿಸಿಯೇನು, ಈ ಅಪರಾಧಿ ಪ್ರಜ್ನೆಯನ್ನಲ್ಲ ಎನಿಸಿದ್ದರಿಂದ. ಅಲ್ಲೇ ಸಂದಿಯಲ್ಲೊಂದು ಆಸೆ ಇಣುಕುತ್ತಿತ್ತು, ನಾನು ಅವನ ಎಲ್ಲ ಭಾವನೆಗಳನ್ನು ಗೌರವಿಸಿದಂತೆ, ಅವನು ನನ್ನ ಕೆಲವೊಂದು ಭಾವನೆಗಳನ್ನಾದರೂ ಕನಿಷ್ಠ ಪಕ್ಷ ಅರ್ಥ ಮಾಡಿಕೊಳ್ಳಬಹುದೇನೋ ಮುಂದೊಂದು ದಿನ ಎಂದು.
           "ಜೀವನ ಬರೀ ಒಣ ಮಾತುಗಳ, ಚಾಕ ಚಕ್ಯತೆಗಳ ವಾಗ್ವಾದವಲ್ಲ ಮರೀ.., ನಿನ್ನ ವಯಸ್ಸು, ಬಿಸಿ ರಕ್ತ, ನಿನ್ನ ಉತ್ಸಾಹ, ಬುದ್ಧಿವಂತಿಕೆಗಳ ಮುಂದೆ ನಾನು ವಾದ ಮಾಡಿದರೆ ಖಂಡಿತ ಗೆಲ್ಲುವುದಿಲ್ಲ ಅಂತ ಗೊತ್ತು. ಸೋತರೂ ನನಗೇನೂ ದುಃಖವಿಲ್ಲ ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ಜೀವನ ನಿನ್ನ ವಾದಗಳಿಗೆ, ಲೆಕ್ಕಾಚಾರಗಳಿಗೆಲ್ಲ ತಲೆಬಾಗುವುದೇ ಇಲ್ಲ.ಅವನು ನನ್ನನ್ನು ವಸ್ತುವಿನಂತೆ ತಿಳಿದರೂ ನಾನು ಮಾತ್ರ ಅವನನ್ನು ಈಗಿನಂತೆಯೇ ಉತ್ಕಟವಾಗಿ ಜೀವನ ಪರ್ಯಂತ ಪ್ರೀತಿಸುತ್ತೇನೆ ಎಂಬುದನ್ನು ಯೋಚಿಸುವುದು ಕೂಡ ಯೌವ್ವನದಲ್ಲಿ ಮಾತ್ರ ಸಾಧ್ಯ.........." ಅಮ್ಮ ಹೇಳುತ್ತಲೇ ಹೋದಳು. ನಾನು ಬುದ್ಧಿಯ ಬಾಗಿಲನ್ನು ಮುಚ್ಚಿಕೊಂಡು ಕೂತಿದ್ದೆ. ನಿಜವಲ್ಲವೇ ಎಂದು ಈಗ ಅನಿಸುತ್ತದೆ. ಪ್ರಯೋಜನವಿಲ್ಲ.
ಈಗಲೂ ಯುವ ಪ್ರೇಮಿಗಳು ಆಡುವ ಆವೇಶದ ಮಾತುಗಳನ್ನು ಕೇಳಿದ್ದೇನೆ."ಪ್ರೀತಿಸಿದ ಮೇಲೆ ಕೊನೆ ಉಸಿರಿರುವವರೆಗೂ ಜೊತೆಯಾಗಿಯೇ ಇರಬೇಕು. ಸತ್ತರೂ ಜೊತೆಯಾಗಿಯೇ ಸಾಯಬೇಕು" ಎಂದು. ಜೊತೆಗಿರುವುದೆಂದರೇನು? ಅವನು ನನ್ನ ಜೊತೆಗಿದ್ದನಾ? ತುಂಬ ಸಲ ಕೇಳಿಕೊಂಡೆ ನನ್ನ ಮನಸ್ಸನ್ನು. ಇಲ್ಲ ಎನ್ನುವಷ್ಟು ಧೈರ್ಯವಿಲ್ಲ, ಹೌದೆನ್ನಲು ಮನಸ್ಸೊಪ್ಪುತ್ತಿಲ್ಲ. ನನ್ನ ಇಡೀ ಜಗತ್ತನ್ನು ಅವನಿಗಾಗಿ ಹಿಂದೆ ಬಿಟ್ಟು, ಅವನೇ ಜಗತ್ತೆಂದುಕೊಂಡು ನಡೆದು ಬಂದಾಗಿತ್ತು ನಾನು. ಅವನ ಮಾನಸಿಕ ಸಾಂಗತ್ಯ ಆ ದಿನಗಳಲ್ಲಿ ತೀರ ಅನಿವಾರ್ಯವಾಗಿತ್ತು ನನಗೆ. ಸಿಗುವುದಿಲ್ಲ ಎಂದು ಗೊತ್ತಿದ್ದರೂ ಎಲ್ಲೋ ಒಂದು ನಿರೀಕ್ಷೆ. ತುಂಬ ವರ್ಷಗಳು ಅರ್ಥಹೀನ ಕಾಯುವಿಕೆಯಲ್ಲಿ ಕಳೆದು ಹೋದವು. "ತಾಳ್ಮೆ" ಎಂಬ ಪದಕ್ಕೆ (ಗುಣಕ್ಕೆ ಎನ್ನಿ ಬೇಕಾದರೆ) ಯಾವುದೇ ಬೆಲೆಯಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ತಲುಪಿದ್ದೆ.
        ಅಮ್ಮ ಹೇಳಿದ ಮಾತು ತುಂಬ ನೆನಪಾಗುತ್ತದೆ. "ಬಿಟ್ಟು ಬರುವಷ್ಟು ಧೈರ್ಯ ತಂದುಕೊಳ್ಳಲು ಮನಸ್ಸು ಒಪ್ಪಿದರೆ ಎದ್ದು ಬಂದುಬಿಡು, ಈಗ ಕಾಡುವ ಅಪರಾಧಿ ಪ್ರಜ್ಞೆ ಗಿಂತ ಜೀವನ ಪೂರ್ತಿ ಅನುಭವಿಸುವ ಯಾತನೆ ದೊಡ್ಡದಿದೆ ಎಂದು ಅರ್ಥವಾದರೆ...."
       ಅರ್ಥ ಮಾಡಿಕೊಂಡೇ ಪ್ರೀತಿಸಬೇಕು ನಿಜ. ಆದರೆ ಪ್ರೀತಿಸಿದ ಮೇಲೆ ಅರ್ಥವಾಗುವ ತುಂಬ ವಿಷಯಗಳಿರುತ್ತವಲ್ಲ.ಆಮೇಲೆ ಅರ್ಥವಾದ ಮುಖವೇ ಬೇರೆ ಆಗಿಬಿಟ್ಟರೆ?ಆವತ್ತು ಹಾಗೆ ಅರ್ಥವಾದೊಡನೆ ಬಿಟ್ಟು ಬಂದಿದ್ದರೆ, ಮನಸ್ಸು ಅಷ್ಟು ಧೈರ್ಯ ಮಾಡಿದ್ದರೆ, ನನ್ನ ನಿರ್ಧಾರ ತಪ್ಪಾಗುತ್ತಿತ್ತಾ? ಆವತ್ತು ಅಮ್ಮನ ಮಾತು ಕೇಳಿದ್ದರೆ ನನ್ನ ಪ್ರೀತಿಗೆ ದ್ರೋಹ ಮಾಡಿದಂತಾಗುತ್ತಿತ್ತಾ? ಅರ್ಥವಾದ ಮೇಲೆ ಬಿಟ್ಟುಬರುವುದು ತಪ್ಪಾ ಅಥವಾ ಜೊತೆಗಿದ್ದು ಇಡೀ ಜೀವನವನ್ನು ವ್ಯರ್ಥಗೊಳಿಸಿಕೊಳ್ಳುವುದು ತಪ್ಪಾ?

Friday 27 November, 2009

ಕ್ಷಮಿಸು ಕನಸಿಗೆ ಬಂದಿದ್ದಕ್ಕೆ...



 ನನ್ನನ್ನು ಪ್ರೀತಿಸುವ ಹುಡುಗಾ...,
     ಕ್ಷಣ ಕ್ಷಣ ಎದೆಯಿಂದ ಹೊಮ್ಮುವ ಉಸಿರಲ್ಲಿ ನಿನ್ನ ನೆನಪು ಮಾತ್ರವಲ್ಲ, ಪಕ್ಕಾ ನಿನ್ನ ಇರುವಿಕೆಯನ್ನೇ ಕಾಣಲಾರಂಭಿಸಿದಾಗ ಮಾತ್ರ ನಿಜಕ್ಕೂ ಭ್ರಮೆ ಅಂತ ಗೊತ್ತಿದ್ದರೂ ಭಯವಾಯಿತು ನನಗೆ. ಪ್ರಯತ್ನಪೂರ್ವಕವಾಗಿ ಕಿತ್ತು ತಂದು ಮನಸ್ಸನ್ನು ನನ್ನ ಬಳಿಯಿಟ್ಟುಕೊಂಡರೂ, ಇರಲು ನಿರಾಕರಿಸತೊಡಗಿದಾಗ ಕೋಪ ಬರತೊಡಗಿತು.ಹೊಸದಾಗಿ ಶಾಲೆಗೆ ಸೇರಿದ ಮಗುವೊಂದು ನಿನ್ನೆ ಮೊನ್ನೆ ಸಿಕ್ಕ ಗೆಳೆಯ ಬಳಗವನ್ನೇ ಪ್ರಪಂಚವಾಗಿಸಿಕೊಂಡು ಅಮ್ಮನ ಮುಂದೆ ವರ್ಣಿಸುವಂತೆ ನನ್ನ ಮನಸ್ಸೇನು ನಿನ್ನನ್ನು ನನ್ನ ಮುಂದೆ ಹೊಗಳಿದ್ದೇ ಹೊಗಳಿದ್ದು. ಅತಿಯಾಯ್ತು ಸಾಕು ಎಂದರೂ ಕೇಳುವುದೇ ಇಲ್ಲವಲ್ಲ. ನನ್ನ ಮನಸ್ಸಿನ ಮೇಲೆ ನನಗೆ ಎಷ್ಟೊಂದು ಹಿಡಿತವಿದೆ ಎಂದುಕೊಂಡೆನಲ್ಲವೇ? ಬಹುಶಃ ಹಿಡಿತದಲ್ಲಿಟ್ಟಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದೆಯೋ ಏನೋ ಎನ್ನಿಸಿತು.ನಿನ್ನ ಕಂಡೊಡನೆ ಮನ ಹಾಗೆ ಕುಣಿಯುವುದೇಕೋ ಗೊತ್ತಾಗಲಿಲ್ಲ ನನಗೆ.ಆಮೇಲೆ ಅರಿವಾಗಿ ಛೇ! ಎನ್ನಿಸುತ್ತಿತ್ತು, ಅಷ್ಟೊತ್ತು ಬಾಲಿಶವಾಗಿ ವರ್ತಿಸಿದ್ದನ್ನು ನೆನೆ ನೆನೆದು ಅವಮಾನಗೊಳ್ಳುತ್ತಿದ್ದೆ.
     ನಿನ್ನ ಮುಗುಳ್ನಗು ನೋಡಿದೊಡನೆ ಅಪ್ರಯತ್ನಪೂರ್ವಕವಾಗಿ ಬಿರಿಯುವ ತುಟಿಗಳನ್ನು ತಡೆಯುವುದಾದರೂ ಹೇಗೆ?ಅದನ್ನಾದರೂ ಕಷ್ಟಪಟ್ಟು ತಡೆದೇನು. ಇಡೀ ಮೈಯ್ಯ ರಕ್ತವೆಲ್ಲ ಮುಖಕ್ಕೆ ನುಗ್ಗಿ ಕೆನ್ನೆ ಕೆಂಪೇರುವಾಗ ಮುಚ್ಚಿಡುವುದಾದರೂ ಹೇಗೆ ಖುಶಿಯನ್ನ? ನಾಚಿಕೆಯನ್ನ? ಆದರೂ ನಿನ್ನ ತುಂಟ ಕಣ್ಸನ್ನೆ, ಸುಂದರ ಮುಗುಳ್ನಗು ನನಗಿಷ್ಟವಿಲ್ಲ ಹುಡುಗಾ... ಅದು ನನ್ನ ಸೋಲಿನ ಕಟ್ಟಡದ ಅಡಿಪಾಯದಂತೆ ತೋರುತ್ತದೆ ನನಗೆ. ನನಗಿಷ್ಟವಿಲ್ಲ, ನಿಜಕ್ಕೂ ನಿನ್ನಂಥ ಗಂಡಸಿನ ಮುಂದೆ ಸೋಲಲು ನನಗಿಷ್ಟವಿಲ್ಲ.ಆದರೆ ಈ ಇಷ್ಟ-ಕಷ್ಟಗಳನ್ನೆಲ್ಲ ಮೀರಿ ನಿಲ್ಲುತ್ತದೆ ’ಇದು’ ಎಂದುಕೊಂಡಿರಲಿಲ್ಲ. ಏನೆನ್ನಲಿ ಇದನ್ನು? ಪ್ರೀತಿಯಾ? ನಿನ್ನ ಮೇಲಿನ ನಿಸರ್ಗ ಸಹಜ ಆಕರ್ಷಣೆಯಾ?ಗೊತ್ತಿಲ್ಲ. ಒಟ್ಟಾರೆ ನನ್ನಲ್ಲಿ ಗೊಂದಲ ಹುಟ್ಟಿಸಿರುವ ಏನೋ ಒಂದು.ಅದನ್ನೆಲ್ಲ ನಿರ್ಧರಿಸಿ, ವ್ಯಾಖ್ಯಾನಿಸಿ, ಪಂಡಿತಳಾಗಲು ನನಗಿಷ್ಟವಿಲ್ಲ.ನನ್ನ ಮನಸ್ಸು ನಾನು ಈ ಖುಷಿಯನ್ನ ಅನುಭವಿಸಲಿ ಅಂತ ಆಸೆಪಡುತ್ತಿದೆಯಾ ಅದನ್ನು ಕೂಡ ನಾನು ನಿರ್ಧರಿಸಲಾರೆ. ಏಕೆಂದರೆ ನಿರ್ಧಾರ ನನ್ನನ್ನು ನಿನ್ನೆದುರು ಸೋಲಿಸುತ್ತದೆ.
     ಏನೇನೋ ನಿರ್ಧರಿಸಿ, ಎಲ್ಲೆಲ್ಲೋ ಸೋತು, ಕೊನೆಗೆ ಎಲ್ಲವೂ ಸುಳ್ಳೆನಿಸಿ, ಇಷ್ಟೆಲ್ಲ ಅನುಭವಕ್ಕೊದಗಿ ಆಗಿದೆ.ಒಂದು ಕಾಲದಲ್ಲಿ ಇವಳ ನೆರಳನ್ನಾದರೂ ಮುಟ್ಟಬೇಕೆಂದು ಬಯಸಿದವರೇ ಇಂದು ಎದುರಿಗೆ ಹೋಗಿ ನಿಂತರೂ 'ಅಯ್ಯೋ ಇವಳಾ..ಇಲ್ಲೇ ಬಿದ್ದಿರ್ತಾಳೆ ಬಿಡು, ಆಮೇಲೆ ನೋಡಿಕೊಂಡರಾಯಿತು’ ಎಂದು ಮನಸ್ಸಿನಲ್ಲಾಡಿಕೊಂಡದ್ದನ್ನ ಕೇಳಿಸಿಕೊಂಡಿದ್ದೇನೆ. ಅದು ಕೂಡ ಸಹಜವೇ ಅಂತ ಗೊತ್ತು.ಒಂದು ವಸ್ತುವಿಗೆ ಸಾಯುವಷ್ಟು ಹಂಬಲಿಸಿ ಪಡೆದ ನಂತರ ಅದು ಅಸಲಿಗೆ ಅಗತ್ಯವಿತ್ತಾ ನಮಗೆ? ಎಂಬ ಪ್ರಶ್ನೆ ತಲೆ ಎತ್ತಿಬಿಡುತ್ತದೆ. ಆದರೆ ಮತ್ತೆ ಅಂಥ ಸಹಜತೆಯ ಸುಳಿಯಲ್ಲಿ ಸಿಲುಕುವ ಮನಸ್ಸಿಲ್ಲ ನನಗೆ. ಪೆಟ್ಟು ತಿಂದ ಮನಸ್ಸು ಭಯಪಡುವುದು ಕೂಡ ಸಹಜವೇ ಅಲ್ಲವೇ! 'ಬಿಸಿ ಹಾಲಲ್ಲಿ ಬಾಯಿ ಸುಟ್ಟುಕೊಂಡವನು ಮಜ್ಜಿಗೆಯನ್ನೂ ಆರಿಸಿಕೊಂಡು ಕುಡಿಯಹೋಗುತ್ತಾನೆ.ಆದರೆ ಅದರ ಅಗತ್ಯವಿಲ್ಲ ಎನಿಸುತ್ತದೆ’ ಎಂದು ಹೇಳಿದೆ ನೀನು. ನಿನ್ನ ಮಾತುಗಳು ಯಾವಾಗಲೂ ಅಷ್ಟೇ ಆ ಕ್ಷಣಕ್ಕೆ ಹೌದೆನಿಸಿಬಿಡುತ್ತವೆ. ಅದು ನನ್ನ ಬಲಹೀನತೆಯೋ ಅಥವಾ ನಿನ್ನ ಸಾಮರ್ಥ್ಯವೋ ನನಗೆ ಗೊತ್ತಿಲ್ಲ. ಆದರೆ ಎದುರಿಗಿರುವುದು ಬಿಸಿ ಹಾಲೋ,ತಂಪು ಮಜ್ಜಿಗೆಯೋ ಎಂದು ಕೂಡ ಅರ್ಥ ಮಾಡಿಕೊಳ್ಳಲು ಸಮರ್ಥವಲ್ಲದ ಮನಸ್ಸನ್ನು ಹೊತ್ತು ಕೂತಿರುವಾಗ, ಖಂಡಿತವಾಗಿಯೂ ನಿರ್ಧರಿಸದೇ ಇರುವುದು ಒಳ್ಳೆಯದಲ್ಲವೇ?
     ಪ್ರತೀ ಸಲ ನೀನು ನನ್ನೊಡನೆ ಮಾತನಾಡಿದಾಗ ನಿನಗೆ ನನ್ನ ಸೂಕ್ಷ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲ ಎಂಬುದು ಧೃಡಪಡುತ್ತಲೇ ಹೋಗುತ್ತದೆ. ಆದರೂ ಮತ್ತೆ ಮತ್ತೆ ನೀನು ಅರ್ಥ ಮಾಡಿಕೊಂಡಂತೆ ಕಲ್ಪಿಸಿಕೊಳ್ಳುತ್ತೇನೆ. ನಿನ್ನ ಪ್ರತಿಯೊಂದು ವರ್ತನೆಯನ್ನು ನಾನು ಅರ್ಥಮಾಡಿಕೊಳ್ಳುವ ರೀತಿಯೇ ಬೇರೆ. ಹೀಗೆ ಹೇಳಿದರೆ ನಿನಗೆ, ಕ್ಷಮಿಸು, ನಿನ್ನ 'ಅಹಂ'ಗೆ ದುಃಖವಾಗಬಹುದೇನೋ. ಆದರೆ ನಿನ್ನ ಅಹಂ ತೃಪ್ತಿಗಾಗಿ ನನ್ನನ್ನು ಪ್ರೀತಿಸುವ ನಿನ್ನನ್ನು ಮೆಚ್ಚಿಸುವ ಅಗತ್ಯ ನನಗಿಲ್ಲ ಗೆಳೆಯ. ಹೇಳಿದರೆ ಹೆಚ್ಚಾಗುತ್ತದೆ, ಹೇಳದಿದ್ದರೆ ಅರ್ಥವಾಗುವುದಿಲ್ಲ ಆದ್ದರಿಂದಲೇ ಹೇಳುತ್ತಿದ್ದೇನೆ. ಖಂಡಿತವಾಗಿಯೂ ನಾನಿದ್ದಂತೆ ನನ್ನನ್ನು ಪ್ರೀತಿಸಲು ನಿನ್ನಿಂದ ಸಾಧ್ಯವಿಲ್ಲವೆಂದು ಮನವರಿಕೆಯಾಗಿದೆ ನನಗೆ. ಸ್ವಲ್ಪ ಸ್ವಲ್ಪವಾಗಿ ಪೂರ್ತಿ ಬದಲಾಯಿಸಿ ನಿನಗೆ ಬೇಕಾದಂತೆ ರೂಪಿಸಿಕೊಂಡು ಒಂದು ಹೆಣ್ಣನ್ನು ಪ್ರೀತಿಸಬಲ್ಲ ಬುದ್ಧಿವಂತ,ಚತುರ ಗಂಡಸು ನೀನು.ಬುದ್ಧಿಗಿಂತ ಹೆಚ್ಚಾಗಿ ನನಗೆ ಹೃದಯದೊಂದಿಗೆ ಬದುಕಬೇಕಿದೆ ಗೆಳೆಯ. ತಾನು ಅರ್ಜುನನಂತವನು ಎಂಬ ಹೆಮ್ಮೆ ನಿನಗಿದೆ ಎಂದು ಗೊತ್ತು, ಆದರೆ ನನಗೆ ನಿನ್ನ ಚತುರತೆ, ತೋಳ್ಬಲ, ರೂಪ ಯಾವುದೂ ಬೇಕಾಗಿಲ್ಲ. ನನಗೆ ನನ್ನತನವನ್ನು ಉಳಿಸಿಕೊಳ್ಳಲು ಬಿಡಬಲ್ಲ ಹೃದಯ ಬೇಕು. ನನ್ನ ವ್ಯಕ್ತಿತ್ವವನ್ನು ಗೌರವಿಸಬಲ್ಲ ವ್ಯಕ್ತಿಗೆ ನನ್ನ ಬದುಕನ್ನು ಪೂರ್ತಿಯಾಗಿ ಒಪ್ಪಿಸಿಕೊಂಡುಬಿಡಬೇಕು ಎಂಬಾಸೆಯಿದೆ.ಖಂಡಿತವಾಗಿಯೂ ನೀನು ಅಂಥವನಲ್ಲ ಅಂತ ಗೊತ್ತು.
      ಆದರೂ ನಾನೇಕೆ ನಿರಾಯಾಸವಾಗಿ ಹಾಗೆ ನಿನ್ನ ಕಾಲ ಬುಡದಲ್ಲಿ ಬಂದು ಬಿದ್ದೆ ಎಂಬುದು ನನಗೆ ಈಗಲೂ ಗೊತ್ತಿಲ್ಲ.ನಾನು ಆಗ ಬಯಸದೇ ದೊರೆತ ಅಗ್ಗದ ವಸ್ತುವಾಗಿದ್ದೆ ನಿನ್ನ ಪಾಲಿಗೆ. ಬಹುಶಃ ಅದಕ್ಕಾಗಿಯೇ ನಿನಗೆ ನನ್ನ ಬೆಲೆ ತಿಳಿದೇ ಇರಲಿಲ್ಲ.ಆದರೆ ಈಗೇಕೆ ಹೀಗೆ? ಬೆಂಬಿಡದೆ ಒಪ್ಪಿಸುವ ಯತ್ನ ನಿನ್ನದು, ನಾನು ಒಪ್ಪಿಯೇ ಒಪ್ಪುತ್ತೇನೆಂಬ ಭರವಸೆಯಿದೆಯಲ್ಲವೇ ನಿನಗೆ? ಈಗ ನಾನು ಒಪ್ಪಿದರೂ ಮತ್ತದೇ ಹಳೇ ದಿನಗಳು ಮರಳಲು ತುಂಬ ಸಮಯ ಹಿಡಿಯುವುದಿಲ್ಲ. ನಾನು ಮತ್ತೆ ನಿನಗೆ 'ಓಹ್..ಇವಳಾ..'ಎನಿಸಿಬಿಡುತ್ತೇನೆ.ಇದು ನನ್ನ ಕಲ್ಪನೆ ಮಾತ್ರವಲ್ಲ, ಅನುಭವಿಸಿದ ಸತ್ಯ. ಆದ್ದರಿಂದಲೇ ಈಗ ನೀ ಕರೆದರೂ ನಾನು ಬರುವುದಿಲ್ಲ.ಬರುವುದೇ ಇಲ್ಲ ನಿನ್ನ ಬಳಿಗೆ, ನಿನ್ನ ಕನಸಿನ ಅರಮನೆಗೆ...
     ಕ್ಷಮಿಸು ಹುಡುಗಾ ನನ್ನನ್ನು, ಒಮ್ಮೆ ನಿನ್ನ ಅಹಂಕಾರವನ್ನುಬ್ಬಿಸಿ ಈಗ ಮತ್ತೆ ದುಃಖ ಕೊಡುತ್ತಿರುವುದಕ್ಕೆ ಕ್ಷಮಿಸು ನನ್ನನ್ನು.ಸತತ ಎರಡು ವರ್ಷಗಳು ನಿನ್ನ ಕನಸಿಗೆ ಬಂದಿದ್ದಕ್ಕೆ ದಯವಿಟ್ಟು ಕ್ಷಮಿಸು ನನ್ನನ್ನು...

Saturday 21 November, 2009

ಅಮ್ಮನಿಗೂ ಒಂದು ಮನಸ್ಸಿತ್ತು




       ಪ್ರತೀಸಲವೂ ಹೀಗೇ ಆಗುತ್ತದೆ.ದಿನಚರಿ ಪುಸ್ತಕದಲ್ಲಿ ೩-೪ ದಿನಗಳ ಹಿಂದೆ ಬರೆದ ಪುಟ ಇಂದು ತೀರ ಕ್ಷುಲ್ಲಕ ಎನಿಸಿಬಿಡುತ್ತದೆ. ಇಂದಿನ ನಾನು ತುಂಬ ದೊಡ್ಡವಳಂತೆ ಭಾವಿಸಿ ನಗುತ್ತೇನೆ ನನ್ನ ನಿನ್ನೆಯನ್ನು ನೋಡಿ! ನನ್ನ ಮಗಳಲ್ಲಿ ನಾನೀಗ ನನ್ನ ನಿನ್ನೆಯನ್ನು ಕಾಣ ಬಯಸುತ್ತೇನೆ. ಅದನ್ನು ಹೇಳಿದರೆ ಅವಳಿಗರ್ಥವಾಗುವುದಿಲ್ಲ. ನನಗೂ ನನ್ನ ಅಮ್ಮ ಹೇಳಿದಾಗ ಅರ್ಥವಾಗಿರಲಿಲ್ಲ. ಆದರೆ ಮಗಳು ಹೀಗೆ ಮಾಡಿದಾಗ ಅದನ್ನು ಆ ಕ್ಷಣಕ್ಕೆ ಅರಗಿಸಿಕೊಳ್ಳಲಾಗುವುದಿಲ್ಲ ನನಗೆ.ಬಹುಶಃ ನನ್ನ ಅಮ್ಮನಿಗೂ ಹೀಗೆ ಆಗಿರಬೇಕು.ಅದೂ ನನಗರ್ಥವಾಗಿರಲಿಲ್ಲ.
          ತುಂಬ ತಲೆ ಕೆಡಿಸಿಕೊಂಡು ಕುಳಿತಿದ್ದಳು ಮಗಳು. ಕೇಳಿದರೆ ಸಿಟ್ಟು, ಮುಜುಗರ ಎಲ್ಲ ಒಟ್ಟೊಟ್ಟಿಗೆ ಬರುತ್ತದೆ. ಮಳೆಗಾಲದಂತವಳು ಇವಳು. ತುಂಬ ಸಮೃದ್ಧ, ಪ್ರಬುದ್ಧ ಎಂದುಕೊಳ್ಳುತ್ತೇನೆ.ಸುರಿದರೆ ಹಾಗೆ ಸುರಿಯುತ್ತಾಳೆ. ಮನೆ ತುಂಬಾ ಕೇಕೆ ಹಾಕಿಕೊಂಡು ತುಂಬಿ ತುಳುಕುತ್ತಾಳೆ. ಇಲ್ಲದಿದ್ದರೆ ಪರ್ಜನ್ಯ ಮಾಡಿ ಬೇಡಿದರೂ ಬರದೇ ಹಠ ಹಿಡಿದು ಮೋಡದಲ್ಲೇ ಕೂರುವ ಮಳೆಯಂತೆಯೇ ಕೂರುತ್ತಾಳೆ ಮುಖ ಬಿಗಿದುಕೊಂಡು. ಇವಳನ್ನು ತಬ್ಬಿ ಮುದ್ದಾಡುವ ಆಸೆಯಾದರೂ ಮುದ್ದಾಡುವಂತಿಲ್ಲ. ಕೆಲವೊಮ್ಮೆ ಮೌನವಾಗಿರಬೇಕೆನಿಸಿದರೂ ಮಾತಾಡಲೇಬೇಕು, ದೂರ ತಳ್ಳುವಂತಿಲ್ಲ. ತೀರ ಅಪ್ಪ-ಅಮ್ಮನ ಹೋಲಿಕೆಯೇ ಇರದಂಥ ವ್ಯಕ್ತಿತ್ವ. ತಾನಾಗಿಯೇ ಬಂತೋ, ಬೆಳೆಸಿಕೊಂಡಳೋ ಗೊತ್ತಾಗಲಿಲ್ಲ. ನನ್ನ ಯೌವ್ವನವನ್ನು ನಾನು ಅವಳಲ್ಲಿ ಕಾಣಲು ಬಯಸಿ ಬಯಸಿ ಸೋಲುತ್ತಿರುವುದಕ್ಕೆ ನನಗೆ ಅವಳು ತುಂಬ ಸ್ವತಂತ್ರ ವ್ಯಕ್ತಿತ್ವದವಳೆಂದು ಭಾಸವಾಗುತ್ತದೋ ಅಥವಾ 'ಜನರೇಶನ್ ಗ್ಯಾಪ್' ಕಾರಣವೋ ಗೊತ್ತಿಲ್ಲ.
ಬಹುಶಃ ಪ್ರತೀ ಮನುಷ್ಯನೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹೀಗೊಂದು ಆಸೆಯ ಮೂಟೆಯನ್ನು ಹೊತ್ತುಕೊಂಡೇ ತಿರುಗುತ್ತಾನೇನೋ ಎನಿಸುತ್ತದೆ. ತನ್ನ ನಂತರವೂ ತಾನು ಉಳಿಯಲಿ ಮಕ್ಕಳ ರೂಪದಲ್ಲಿ ಎಂಬ ಆಸೆ ಏಕೆಂಬುದು ನನಗೂ ಗೊತ್ತಾಗಲಿಲ್ಲ!ಅವಳು ನನ್ನಂತಾಗುವುದಿರಲಿ, ತೀರ ನನ್ನದೇ ಮಗಳೊಂದಿಗೆ ನಾನೇ ಮಾತಾಡಲೋ ಬೇಡವೋ ಎಂದು ಯೋಚಿಸಬೇಕೆಂದಾದಾಗ ನನ್ನ ಮನಸ್ಸು ರೋಧಿಸತೊಡಗುತ್ತದೆ. ಎಲ್ಲರ ಹೃದಯದಲ್ಲೂ ನನಗೊಂದು ವಿಶೇಷ ಸ್ಥಾನವಿರಲೆಂದು ಬಯಸುವ ಮನಸ್ಸು, ಸುಲಭವಾಗಿ, ಜನ್ಮಸಿದ್ಧ ಹಕ್ಕಾಗಿ ದೊರೆಯಲೇಬೇಕಾದ ಮಗಳ ಹೃದಯದಲ್ಲಿನ ವಿಶೇಷ ಸ್ಥಾನವನ್ನು ಬಯಸಿ ಕೊರಗುತ್ತದೆ. ಛೇ! ಈ ಮನಸ್ಸನ್ನು ಮುದ್ದಿಸುವುದೋ, ಗದರಿಸುವುದೋ ಅರ್ಥವೇ ಆಗದೇ ಒದ್ದಾಡಿಬಿಡುತ್ತೇನೆ. ತೀರ ಇನ್ನು ಇದರ ತಾಳಕ್ಕೆ ಕುಣಿಯಲಾರೆನೆಂದು ಗಟ್ಟಿಯಾಗಿ ಕುಳಿತರೆ, ಸ್ವಲ್ಪ ಹೊತ್ತು, ಮತ್ತೆ ಬರುತ್ತದೆ ಲಲ್ಲೆಗರೆಯುತ್ತಾ...ಬಿಟ್ಟು ಹೋದ ಪ್ರೇಯಸಿಯು 'ಮಿಸ್ ಕಾಲ್ 'ಕೊಟ್ಟಂತೆ ಭಾಸವಾಗುತ್ತದೆ.ಮರಳುತ್ತೇನೆ.ಆಮೇಲೆ ಯಥಾಪ್ರಕಾರ ಮತ್ತದೇ ಹಳೇ ರಾಗ.
            ಹೇಳಿಕೊಂಡರೆ ತಪ್ಪಾಗುತ್ತದೆಂದು ಗೊತ್ತು. ಆದರೂ ನಾನು ಪೂರ್ತಿ ವ್ಯಕ್ತಿತ್ವವನ್ನು ಕಳೆದುಕೊಂಡು, ಇವರನ್ನ, ಮಗಳನ್ನ ಅವರೆಂದರೆ ನಾನೇ ಎಂಬಂತೆ ಪ್ರೀತಿಸಿಕೊಂಡು ಬಂದಿದ್ದೆಲ್ಲ ಲೆಕ್ಕಕ್ಕಿಲ್ಲವಾ ಹಾಗಾದರೆ? ನೆನೆಸಿಕೊಳ್ಳತೊಡಗಿದರೆ ಕಣ್ತುಂಬಿ ಬರುತ್ತದೆ. ಬೇರೆ ಏನೂ ಉಪಯೋಗವಿಲ್ಲ. ಇವರೆಲ್ಲ ಆಡಿಕೊಂಡು ನಗುತ್ತಾರೆ ಪ್ರವಾಹ ಬರುತ್ತದೆ ಅಳಬೇಡ ಎಂದು. ಮೂರು ಹೊತ್ತು ಕೂಳು ಬೇಯಿಸಿಕೊಂಡು,ಇವರೆಲ್ಲ ನನ್ನನ್ನು ಒಂಟಿ ಮಾಡಿ ಹೊರಟಾಗಿನಿಂದ ಮನೆಗೆ ಮರಳುವವರೆಗೂ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಾಯುದಿಲ್ಲವೇ? ಸೌಖ್ಯವಾಗಿ ಮನೆಗೆ ಮರಳಿದರೆ ಸಾಕು ಎಂದುಕೊಳ್ಳುತ್ತಾ, ನನ್ನ ಪ್ರತೀ ಕೆಲಸದೊಂದಿಗೆ ಇವರ ಒಳಿತನ್ನೇ ತಳುಕು ಹಾಕಿಕೊಂಡು ಕುಳಿತಿರುತ್ತೇನಲ್ಲ ಇದೆಲ್ಲ ಇವರಿಬ್ಬರಿಗೂ ಅರ್ಥವೇ ಆಗುವುದಿಲ್ಲ.
ನಾನೇನೋ ಮಗಳನ್ನು ಸ್ನೇಹಿತೆಯಂತೆ ಕಾಣಬೇಕೆಂದೇ ಬಯಸುತ್ತೇನೆ. ಆದರೆ ಅಮ್ಮ ಕೂಡ ನನ್ನ ವಯಸ್ಸನ್ನು ದಾಟಿ ಬಂದಿದ್ದಾಳೆ ಎಂದು ಅವಳಿಗೆ ಅನಿಸುವುದಿಲ್ಲವೋ ಏನೋ. ಅಥವಾ ಅವಳಿಗೂ ಅನಿಸಿರಬಹುದು, ನಮ್ಮಿಬ್ಬರದು ಹೋಲಿಕೆಯಿಲ್ಲದ ವ್ಯಕ್ತಿತ್ವ ಹೇಳಿಕೊಂಡರೂ ಉಪಯೋಗವಿಲ್ಲವೆಂದು. ಅಸಲಿಗೆ ನನಗೊಂದು ವ್ಯಕ್ತಿತ್ವವಿದೆ ಎಂಬುದೇ ಅವಳಿಗೆ ಆಶ್ಚರ್ಯದಾಯಕ ವಿಷಯವೆನಿಸಬಹುದು.ಇನ್ನು ಅವಳು ನನ್ನನ್ನು ಹೋಲುವುದು ಸಾಧ್ಯವಿದೆಯೇ? ಯಾಕೆ ಹೀಗಾಗುತ್ತದೋ ಗೊತ್ತಿಲ್ಲ. ಅವರಿಗೊಂದು ಸ್ವಂತಿಕೆ ಅಂತ ಬರುವ ಮೊದಲೇ,ಅಥವಾ ಅದು ಬರದೆಯೇ ಇದ್ದರೂ ಪ್ರೀತಿಸಿದ, ಪ್ರೀತಿಸುತ್ತಲೇ ಇರುವ ತಾಯಂದಿರ ವ್ಯಕ್ತಿತ್ವದ ಇರುವಿಕೆ ಅವರ ಅರಿವಿಗೆ ಬರುವುದೇ ಇಲ್ಲವೇಕೆ?! ಅಪ್ಪನ ಬಗ್ಗೆ ಭಯವಾದರೂ ಇದೆ. ಹಿಂದಿನಿಂದ ಬೈದರೂ, ಎದುರೆದುರೇ ಆಡಿ ನೋಯಿಸುವುದಿಲ್ಲ. ನನಗಾದರೆ ಹಾಗಲ್ಲ, ಬಂದವರೆದುರು ಕೂಡ ನನ್ನ ಬಲಹೀನತೆಗಳನ್ನು ಆಡಿಕೊಳ್ಳಬಹುದು.ಅದನ್ನು ಸಲಿಗೆಯೆನ್ನುವುದೋ ಅಥವಾ ನಾನಷ್ಟು ಹಗುರವಾಗಿ ಹೋಗಿಬಿಟ್ಟೆ ಎಂದುಕೊಳ್ಳಲೋ ಗೊತ್ತಾಗುವುದಿಲ್ಲ. ನನಗಂತೂ ಸಕಾರತ್ಮಕವಾಗಿ ಯೋಚಿಸಲು ಪ್ರಯತ್ನಿಸಿ ಸಾಕಾಗಿ ಹೋಯಿತು. ಸ್ವಂತದ್ದು ಅಂತ ಒಂದು ಜೀವನ ಬದುಕದೇ ಕಳೆದುಬಿಟ್ಟೆ ಎನಿಸಿದಾಗೆಲ್ಲಾ ಸಂಕಟವಾಗುತ್ತದೆ. ಆಗೆಲ್ಲ ಇವರಿಗಾಗಿ ಬದುಕುವುದೇ ಒಂದು ಸಂಭ್ರಮವೆನಿಸುತ್ತಿತ್ತು.ಇವರಿಗಾಗಿ ಮಾಡಿದ ಯಾವ ಕೆಲಸವನ್ನೂ ಕರ್ತವ್ಯವೆಂದು ಮಾಡಿಲ್ಲ ನಾನು. ತುಂಬ ಪ್ರೀತಿಯಿಂದ, ಇಷ್ಟಪಟ್ಟುಕೊಂಡೇ ಮಾಡಿದೆ.ಆದರೆ ಈಗೀಗ ಎಲ್ಲರ ದಿವ್ಯ ನಿರ್ಲಕ್ಷ್ಯದ ಮಧ್ಯೆ ಹಾಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ ನನಗೆ.
           ನಾನೂ ಮನುಷ್ಯಳಲ್ಲವೇ ಎಲ್ಲರಂತೆ! ತಾಯಿಯೆಂದರೆ ಎಲ್ಲವನ್ನೂ ಮಕ್ಕಳ ಒಳಿತಿಗಾಗಿ ಮುಡಿಪಿಡಬೇಕು, ಹೆಂಡತಿಯೆಂದರೆ ತನ್ನ ಸುಖವನ್ನು ಗಂಡನ ಸಂತೋಷದಲ್ಲೇ ಕಾಣಬೇಕು ಎಂಬುದೆಲ್ಲ ಸರಿ. ಆದರೆ ಇಷ್ಟೆಲ್ಲ ಮಾಡಿದ ಮೇಲೆಯೂ ಗಂಡನಿಗೆ ಮಕ್ಕಳಿಗೆ ಇಂಥ ಪ್ರೀತಿಯ ಬೆಲೆಯೇ ತಿಳಿಯದೇ ಹೋದರೆ, ನನಗೂ ಒಂದು ಮನಸ್ಸಿದೆ ಎಂಬುದು ಕೂಡ ಅವರ ಊಹೆಗೆ ನಿಲುಕಲಾರದು ಎಂದಾದರೆ ಇನ್ನು ಮೇಲೆಯೂ ನಾನು ಎಲ್ಲವನ್ನೂ ಕರ್ತವ್ಯವೆಂದಲ್ಲದೇ ಪ್ರೀತಿಯಿಂದ ಮಾಡಲಾದೀತೆ ಎನಿಸುತ್ತದೆ.
       ಬಹುಶಃ ನನ್ನ ಮತ್ತು ನನ್ನ ಅಪ್ಪನ ಬಗ್ಗೆ ನನ್ನ ಅಮ್ಮನಿಗೂ ಹೀಗೆಯೇ ಅನಿಸಿದ್ದಿರಬೇಕು. ಅಮ್ಮನಿಗೂ ಒಂದು ಮನಸ್ಸಿತ್ತು ಎನ್ನಿಸಿದಾಗ,ನನ್ನ ದುಃಖಕ್ಕಿಂತ ಅಮ್ಮನಿಗೆ ನಾನು ಕೊಟ್ಟ ದುಃಖವೇ ಹೆಚ್ಚೆಂದು ಅರಿವಾಗಿ ಇನ್ನಷ್ಟು ದುಃಖವಾಗುತ್ತದೆ.

Saturday 14 November, 2009

ಇವರಿಲ್ಲದ ಮೇಲೆ...


     ಬೆಳಗಾದರೆ ಇವರ ಕಾಟ.ಇತ್ತೀಚೆಗೆ ಯಾಕಾದರೂ ಬೆಳಗಾಗುತ್ತದೋ ಎನಿಸುತ್ತಿದ್ದದ್ದು ಸುಳ್ಳಲ್ಲ. ದೇವರ ಮುಖ ನೋಡಬೇಕು ಎಂದೆಲ್ಲ ಹಿರಿಯರು ಹೇಳಿಕೊಟ್ಟಿದ್ದನ್ನ ಎಂದಿಗೂ ಪಾಲಿಸಿಲ್ಲ. ಆದರೂ ನನಗೆ ಇವರ ಮುಖ ನೋಡಲು ಇಷ್ಟವಿರುತ್ತಿರಲಿಲ್ಲ. ಎನೇನೋ ನೆನಿಸಿಕೊಳ್ಳುತ್ತ ಮಜವಾಗಿ ಏಳಬೇಕೆಂದು ಆಸೆ.ನನ್ನಾಸೆ ಬಾಲಿಶ ಎಂದು ತಿಳಿದವರು ಹೇಳಬಹುದೇನೋ,ಆದರೆ ನಾನು ಅದರ ಬಗ್ಗೆಯೆಲ್ಲ ಯೋಚಿಸುವುದೇ ಇಲ್ಲ, ಅಂಥವರನ್ನು ತಿಳಿದವರೆಂದು ಒಪ್ಪಿಕೊಳ್ಳಲು ನನ್ನ ಮನಸ್ಸು ಬಿಡುವುದೂ ಇಲ್ಲ.       
        ನಮ್ಮವರಿಗೆ ಅದರ ಬಗ್ಗೆಯೆಲ್ಲ ಕಾಳಜಿ ಜಾಸ್ತಿ. ಅದೇ ವಿಷಯಕ್ಕೆ ಆಗಾಗ ಒಂದು ಚಿಕ್ಕ ಬೆಂಕಿ ಹತ್ತಿ ಉರಿದು ರಾತ್ರಿಯೊಳಗೆ ಆರಿ ಹೊಗುತ್ತಿದ್ದುದು ನಿಜ. ಆಗೆಲ್ಲ ಬೆಂಕಿ ಆರಿಸುತ್ತಿದ್ದುದು ಇವರೇ ಅಲ್ಲವೆ? ನನಗೆ ತುಂಬ ಅಹಂಕಾರವಿತ್ತು. ಪಾಪ! ಚಿಕ್ಕಂದಿನಿಂದ ಬೆಳೆಸಿಕೊಂಡು ಬಂದ "ನಾನು ಗಂಡಸು" ವನ್ನು ಹೆಂಡತಿಯ ಮುಂದೆ ಬಿಡಬೇಕಾಗಿ ಬಂದಾಗ ಇವರಿಗೆ ಎಷ್ಟು ಅವಮಾನವಾಗಿರಬಹುದು? ನಾನು ಅದನ್ನೆಲ್ಲ ಯೋಚಿಸಲೇ ಇಲ್ಲ. ನಾನಾಯಿತು, ನನ್ನ ಕನಸಾಯಿತು ಎಂದು ಇದ್ದು ಬಿಡುತ್ತಿದ್ದೆ. ನನ್ನ ಉದಾಸೀನವನ್ನು ಇವರು ಪ್ರಶ್ನಿಸುವಂತಿರಲಿಲ್ಲ. ವಾದಕ್ಕೆ ನಿಂತರೆ ಅವರ ಜನ್ಮ ಜಾಲಾಡಿ, ಅವರ ಚಿಕ್ಕ ಚಿಕ್ಕ ಗುಟ್ಟುಗಳನ್ನೆಲ್ಲ ಬಟ್ಟ ಬಯಲು ಮಾಡಿ, ಎಂದೋ ಮಾಡಿದ, ಯಾರಿಗೂ ಹೇಳದ ತಪ್ಪುಗಳನ್ನೆಲ್ಲ ನಿಂತ ನಿಲುವಿನಲ್ಲೇ ಗಾಳಿಗೆ ತೂರಿ ಬಿಡುತ್ತಿದ್ದೆ. ಅದಕ್ಕೆ ಹೆದರುತ್ತಿದ್ದರೋ ಅಥವಾ ’ಸಗಣಿಯವನೊಡನೆ ಗುದ್ದಾಟ....’ ಎಂಬ ನಿಲುವೋ ಗೊತ್ತಾಗಲಿಲ್ಲ ಕೊನೆಗೂ...
     ಅವರು ನನ್ನನ್ನು ಮಗುವಿನಂತೆ ನೋಡಿಕೊಂಡದ್ದೇನೋ ಸತ್ಯ. ನಾನು ಮಾಡಿದ್ದಾದರೂ ಕಮ್ಮಿ ಇತ್ತಾ?ಹಿಂದಿನ ವರ್ಷ ಇವರಿಗೆ ಮಲಗಿದಲ್ಲಿಂದ ಏಳಲೇಬಾರದೆಂದು ಅಧಿಕಾರಯುತ ದನಿಯಲ್ಲಿ ಡಾಕ್ಟರ್ ಹೇಳಿದಾಗ ಇವರೂ ಅಷ್ಟೇ ಅಧಿಕಾರಯುತವಾಗಿ ಅಮೋಘ ೫ ತಿಂಗಳು ನನ್ನಿಂದ ಸೇವೆ ಪಡೆದಿಲ್ಲವೇ? ಆಮೇಲೂ ಅದನ್ನೇ ನನ್ನಿಂದ ಬಯಸಿದಾಗ ಮಾತ್ರ ನಾನು ಸಿಡುಕಾಡತೊಡಗಿದ್ದು. ನಾನು ಹಾಗೆ ಮಾಡಬಾರದಿತ್ತೋ ಎನೋ... ಈಗ ಯೋಚಿಸಿ ಫಲವಿಲ್ಲ. ಅಪರೂಪಕ್ಕೆ ಸಿಗುವ ವಿಶ್ರಾಂತಿ ಖುಶಿ ಕೊಡುತ್ತದೆ. ಆದರೆ ತೀರ ಕೆಲಸವಿಲ್ಲದೇ ೫ ತಿಂಗಳು ಮಲಗುವುದು ಅವಿರತ ದುಡಿಮೆಗಿಂತ ಕಷ್ಟವಲ್ಲವೇ? ಆದರೂ ಇವರು ಮಲಗಿರಲು ಬಯಸುತ್ತಿದ್ದರೆಂದರೆ ಅವರಿಗೆ ಮುರಿದ ಕಾಲು ಅಷ್ಟು ತೊಂದರೆ ಕೊಡುತ್ತಿತ್ತೋ ಏನೋ. ಅದನ್ನೆಲ್ಲ ನಾನು ನಾಟಕ ಎಂದುಕೊಂಡುಬಿಟ್ಟೆ. ತುಂಬ ದುಃಖವಾಗುತ್ತಿದೆ. ಹೇಳಿಕೊಳ್ಳಲು ಇವರಿಲ್ಲ. ದುಃಖವನ್ನೆಲ್ಲ ಸಿಟ್ಟಾಗಿಸಿ ಅಡಿಗೆ ಮನೆಯಲ್ಲಿ ಪಾತ್ರೆಗಳ ಮೇಲೆ ನನ್ನ ಪೌರುಷ ತೋರಿಸಿದರೂ ಸಾಕಿತ್ತು, ಇವರು ಅರ್ಥ ಮಾಡಿಕೊಂಡು ನನ್ನನ್ನು ತಣ್ಣಗಾಗಿಸಲು ಏನೇನು ಮಾಡಬೇಕೊ ಅದನ್ನೆಲ್ಲ ಮಾಡುತ್ತಿದ್ದರು. ನಾನು ""Do the needful" ಎಂದು ಹೇಳುವುದೂ ಬೇಕಿರಲಿಲ್ಲ.
     ಅಸಲಿಗೆ ಇವರು ಈಗ ಮನೆ ಬಿಟ್ಟು ಹೋಗಿದ್ದು ನನ್ನ ಕಾಟ ತಡೆಯಲಾಗದೆಯೆ? ಅಥವಾ ಬೇರೆ ಏನಾದರೂ ಕಾರಣವಿರಬಹುದಾ? ನನಗೇಕೆ ಇಷ್ಟು ಅಪರಾಧಿ ಪ್ರಜ್ಞೆ ಕಾಡಬೇಕು? ಅಷ್ಟಕ್ಕೂ ಸಂಸಾರವೆಂದ ಮೇಲೆ ಒಂದು ಮಾತು ಬರುತ್ತದೆ ಒಂದು ಮಾತು ಹೋಗುತ್ತದೆ. ಅದೆಲ್ಲ ಸಹಜವೆಂದು ಸ್ವೀಕರಿಸಲೇಬೇಕಲ್ಲವೆ? ನನ್ನೊಂದಿಗೆ ೩೬ ವರ್ಷ ಸಂಸಾರ ಮಾಡಿದ ಇವರಿಗೆ ನನ್ನನ್ನು ಅಷ್ಟು ಅರ್ಥ ಮಾಡಿಕೊಳ್ಳಲೂ ಆಗಲಿಲ್ಲವೇ ಹಾಗಾದರೆ? ಒಂದು ಮಾತು ಬಂದು ಒಂದು ಮಾತು ಹೋಗಿದ್ದರೆ ಹೀಗಾಗುತ್ತಿರಲಿಲ್ಲವೇನೋ. ಅವರಿಂದ ಬಂದ ಮಾತಿಗಿಂತ ನನ್ನ ಕಡೆಯಿಂದ ಹೋದ ಮಾತುಗಳೇ ಹೆಚ್ಚಾಗಿದ್ದಕ್ಕೆ ಹೀಗಾಯಿತೋ ಏನೋ... ಮನಸ್ಸು ಚುಚ್ಚುತ್ತಿದೆ. ಕಾರಣ ಏನಾದರೂ ಇರಲಿ. ನನಗೆ ನಮ್ಮವರು ಬಂದರೆ ಸಾಕಾಗಿದೆ. ಇಷ್ಟು ವರ್ಷಗಳಲ್ಲಿ ಇರುತ್ತಿದ್ದ ಅಗತ್ಯಕ್ಕಿಂತ  ಈಗ ಮುಪ್ಪಿನಲ್ಲೇ ಅವರ ಆಸರೆ ತುಂಬ ಅನಿವಾರ್ಯ ಎನಿಸುತ್ತಿದೆ.
      ಮಗಳು ನನ್ನ ಹೊಟ್ಟೆಯಲ್ಲೇ ಹುಟ್ಟಿದವಳು, ಆದರೂ ಅವಳು ಇವರಷ್ಟು ಹತ್ತಿರವೆನಿಸುವುದಿಲ್ಲ. ಅದೂ ಮದುವೆಯಾಗಿ ಹೋದ ಮೇಲಂತೂ ನಮ್ಮದು ಬೇರೆ ಸಂಸಾರ, ಅವಳದು ಬೇರೆ ಎನಿಸಿಬಿಟ್ಟಿದೆ. ಪ್ರೀತಿಯೇನೂ ಕಡಿಮೆಯಾಗಿಲ್ಲ. ಆದರೆ ಮೊದಲಿನಂತೆ ಅವಳನ್ನು ಬೈಯ್ಯಲಾಗುವುದಿಲ್ಲ. ’ಅಪರೂಪಕ್ಕೆ ಬಂದರೂ ಅಮ್ಮ ಬೈಯ್ಯುತ್ತಾಳಲ್ಲ’ ಎಂದುಕೊಂಡಾಳೆಂದು ಸಂಕೋಚವಾಗುತ್ತದೆ. ಮನಸು ಬಿಚ್ಚಿ ಮಾತನಾಡಲಾಗುವುದಿಲ್ಲ. ಅವಳು ತನ್ನ ಗಂಡ ಮಗುವಿನೊಂದಿಗೆ ಬೇರೆಯದೇ ಲೋಕದಲ್ಲೆಂಬಂತೆ ಇರುತ್ತಾಳೆ. ಮೊದಲಿನಿಂದಲೂ ಅವಳಿಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ.ತಡವಾಗಿ ಮನೆಗೆ ಬರಬೇಡ ಎನ್ನುತ್ತೇನಲ್ಲ, ಯಾವಗಲೂ ಫೊನಲ್ಲೇ ಇರಬೇಡ ಎನ್ನುತ್ತೇನಲ್ಲ. ಗೊತ್ತು, ಕಹಿ ಮಾತಿನಿಂದ ಒಳ್ಳೆಯದನ್ನು ಹೇಳುವವರು ಯಾರಿಗೆ ತಾನೆ ಇಷ್ಟವಾಗುತ್ತಾರೆ ಹೇಳಿ? ಅಪ್ಪನೇ ತುಂಬ ಒಳ್ಳೆಯವರು, ಅಮ್ಮ ಎಷ್ಟು ಬೈದರೂ ತಿರುಗಿ ಬೈಯ್ಯುವುದಿಲ್ಲ, ತುಂಬ ಸಹನೆಯಿದೆ ಎಂದೆಲ್ಲ ನನ್ನ ಮುಂದೆ ಹೇಳಿ ನನ್ನಿಂದ ಬೈಯ್ಯಿಸಿಕೊಂಡಿದ್ದಾಳೆ ಕೂಡ! ಅಷ್ಟು ಒಳ್ಳೆಯ ಅಪ್ಪ ಮನೆ ಬಿಟ್ಟು ಹೋಗಿದ್ದಾರೆಂದರೆ ಅವಳು ಬೈಯ್ಯುವುದು ನನ್ನನ್ನೇ.
     ನನಗೇನೋ ಅನುಮಾನವಾಗುತ್ತಿದೆ, ಇವರು ಮಗಳ ಮನೆಯಲ್ಲೇ ಇರಬಹುದಾ ಅಂತ? ಅದನ್ನು ಕೇಳುವುದಾದರೂ ಹೇಗೆ? ಅಹಂ ಬಿಟ್ಟು ಮಗಳನ್ನು ಕೇಳಲೂ ಮನಸ್ಸು ಒಪ್ಪುತ್ತಿಲ್ಲ. ಆಗಲೇ ೩ ದಿನ ಆಗಿದೆ. ಎಂದಿಗೂ ಇವರನ್ನು ಬಿಟ್ಟು ೨ ದಿನ ಕೂಡ ಇದ್ದದ್ದೇ ಇಲ್ಲ ನಾನು. ತವರಿಗೆ ಹೋದರೂ ಇವರಿಗೆ ಅಡಿಗೆ ಊಟಕ್ಕೆ ತೊಂದರೆ ಆಗುತ್ತದೆಯೆಂದು ತವರಿನವರನ್ನೇ ಇಲ್ಲಿಗೆ ಕರೆಯುತ್ತಿದ್ದೆ. ಇಲ್ಲದಿದ್ದರೆ ಇವರನ್ನೂ ಕರೆದುಕೊಂಡೇ ಹೋಗುತ್ತಿದ್ದೆ.ಆಗೆಲ್ಲ ನನ್ನ ಮನಸ್ಸು ಎಷ್ಟು ಖುಷಿಪಡುತ್ತಿತ್ತು.ನಾನು ಒಬ್ಬರಿಗೆ ಅನಿವಾರ್ಯ ಎಂಬ ಭಾವ ಎಷ್ಟು ಹಿತ ಕೊಡುತ್ತದೆ ಅಲ್ಲವೆ? ಎಲ್ಲರ ಬಳಿ ಅದನ್ನೇ ಹೇಳಿಕೊಂಡು ಬೀಗುತ್ತಿದ್ದೆ. ಇವರಿಗೆ ನಾನಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂಬಂತೆ ಮಾತಡುತ್ತಿದ್ದೆ.ಈಗ! ಎಲ್ಲಿ ಹುಡುಕುವುದು ಇವರನ್ನ? ನಾನು ಬುದ್ಧಿ ಕಲಿತಿರುತ್ತೇನೆ ಇಷ್ಟೊತ್ತಿಗೆ ಎಂಬುದು ಇವರ ಮನಸ್ಸಿಗೆ ಹೇಗಾದರೂ ಗೊತ್ತಾಗಿ ಮರಳಿ ಬರಬಾರದೇ? ನನ್ನನ್ನು ಬಿಟ್ಟಿರಲು ಮನಸ್ಸಾದರೂ ಹೇಗೆ ಬಂದೀತು ಇವರಿಗೆ? ಬಹುಶಃ ಮಗಳು ಚೆನ್ನಾಗಿ ಉಪಚರಿಸಿ ನನ್ನನ್ನು ಮರೆಸಿಬಿಟ್ಟಿರಬಹುದೇನೊ? ಛೇ! ಈ ಮುದಿ ಮನಸ್ಸಿಗೆ ಯಾಕದರೂ ಇಷ್ಟು ಅಹಂಕಾರವೋ ಗೊತ್ತಿಲ್ಲ. ಗಂಡ ಮಕ್ಕಳ ಮುಂದೆಯೂ ಸೋಲಲಾರದು.
   ನಾನೇನೂ ಕೇಳದೇಯೇ ಮರಳಿ ಬರುತ್ತಾರಲ್ಲ ನಮ್ಮವರು? ಇವರಿಲ್ಲದ ಮೇಲೆ... ನಾನು ಯಾರೊಡನೆ ಜಗಳವಾಡಬೇಕು? ಇವರಿಲ್ಲದ ಮೇಲೆ... ನಾನು ಯಾರಿಗಾಗಿ ತವರಿಗೆ ಹೋಗದೇ ಉಳಿಯಬೇಕು? ಇವರಿಲ್ಲದ ಮೇಲೆ... ನಾನು ಯಾರಿಗಾಗಿ ಬದುಕಬೇಕು?

Monday 9 November, 2009

ಬಿಟ್ಟು ಹೋದವರ ದುಃಖ




         ಉರಿ ಬಿಸಿಲ ಮಧ್ಯಾಹ್ನ ಸ್ಮಶಾನಕ್ಕೆ ಹೋಗಿ ಹೆಣದ ಖಮಟು ವಾಸನೆ ತಿಳಿಯುತ್ತಲೇ ಇಲ್ಲ ಎಂಬಂತೆ ಕೂತವನ ಮುಖದಲ್ಲಿ ಪೂರ್ತಿ ಬತ್ತಿ ಹೋದ ದುಃಖ ಪ್ರೇತ ಕಳೆಯನ್ನು ತಂದಿತ್ತು. ಇವನು ಹುಟ್ಟಿದ ಮೇಲೆ 'ವಿಷಾದ’ ಹುಟ್ಟಿತೇನೋ ಎಂಬಂತೆ ಭಾಸವಾಗುತ್ತಿತ್ತು. ಅವಳು ನೆನಪಾಗುತ್ತಿದ್ದಳು ಮರೆಯಲೆತ್ನಿಸಿದಷ್ಟೂ ನೆನಪಾಗುವ ಗಾಯದಂತೆ! ಆದರೂ ಇವನು ಅವಳನ್ನು ಹಾಗೆಂದು ದೂರಲಾರ.ಅದು ಪ್ರೀತಿ! ಅವನು ಅವಳನ್ನು ಪ್ರೀತಿಸಿದ...
       ನನ್ನನ್ನು ಜೀವಂತ ಸುಡುತ್ತಿರುವ ದುಃಖಕ್ಕಿಂತ ಇಲ್ಲಿ ಹೆಣಗಳನ್ನು ಸುಡುತ್ತಿರುವ ಬೆಂಕಿಯೇ ಪ್ರಾಣಕ್ಕೆ ಪ್ರಿಯವೇನೋ, ದಹಿಸುವ ಬೆಂಕಿಯನ್ನಾದರೂ ಸಹಿಸಿಯೇನು ಈ ದುಃಖವನ್ನಲ್ಲ ಎಂದುಕೊಂಡವನ ಕರುಳನ್ನ ಯಾರೋ ಕಿವುಚಿದಂತಾಯಿತು. ಮತ್ತೆ ಮತ್ತೆ ಉಕ್ಕಿ ಬರುವ ದುಃಖದ ಬಗ್ಗೆ ಆಶ್ಚರ್ಯವೋ, ಅಸಹ್ಯವೋ ಏನೋ ಗೊತ್ತಾಗದ ಭಾವ ಅವನಿಗೆ... ಎಷ್ಟು ಅತ್ತರೂ ಮುಗಿಯುವುದೇ ಇಲ್ಲವೇಕೆ ಈ ಕಣ್ಣೀರು? ಬಹುಶಃ ಒರತೆಯಿರಬೇಕು ಹೃದಯದಲ್ಲೊಂದು ಎನಿಸಿ ಜೀವವಿಲ್ಲದ ನಗುವೊಂದು ಸುಳಿದಾಡಿತು ಸ್ಮಶಾನದಲ್ಲಿ, ಸ್ಮಶಾನ ಮೌನದ ನಡುವೆ ಆರಲಿರುವ ದೀಪವೊಂದು ಜೋರಾಗಿ ಉರಿದಂತೆ...!
       ಬದುಕೆಂಬುದು ಭ್ರಮೆಯಲ್ಲವೆಂಬುದು ಅವನಿಗೂ ಗೊತ್ತಿತ್ತು. ಒಂದೇ ಕಡೆಯಿಂದ ಹರಿಯುತ್ತಿರುವ ಪ್ರೀತಿಗೆ ಅರ್ಥವಿಲ್ಲವೆಂದಲ್ಲ, ಆದರೂ ಸಾಗರವೇ ಇಲ್ಲದಿದ್ದರೆ ನದಿಯ ಹರಿಯುವಿಕೆಗೆ ಸಾರ್ಥಕತೆ ಇದೆಯೆ? ಆದರೂ ತನ್ನ ಹರಿಯುವಿಕೆಯನ್ನು ತಡೆಯಲು ನದಿಗಾದರೂ ಸಾಧ್ಯವಾದೀತೆ? ಬುದ್ಧಿ ಹೇಳುತ್ತದೆ. ಹೃದಯ ನಿಲ್ಲಬೇಕಲ್ಲ! ಗಟ್ಟಿ ಮನಸ್ಸು ಮಾಡಿಕೋ ಎನ್ನುತ್ತಾರೆ. ಮೃದುತ್ವವೇ ಅದರ ಗುಣ. ಗಟ್ಟಿಯಾಗೆಂದರೆ...? ಅವಳು ಇವನೆಡೆಗೆ ಹರಿವ ನದಿಯಾಗಲೂ ಇಲ್ಲ. ನದಿಯಾಗಿ ಹರಿದು ಹೋದರೂ ಇವನನ್ನು ಸೇರಿಸಿಕೊಳ್ಳುವ ಸಾಗರವಾಗಲೂ ಇಲ್ಲ.ಇವರಿಬ್ಬರ ನಡುವೆಯೇ ಹುಟ್ಟಿದ ಪ್ರೀತಿಗೆ ಇವನು ಹೆತ್ತಮ್ಮ. ಅವಳು ಮಲತಾಯಿ. ಪ್ರೀತಿಯನ್ನು ಇವನು ಪ್ರೀತಿಸಿದಷ್ಟು ಅವಳು ಪ್ರೀತಿಸಲಾಗಲಿಲ್ಲ.ಅದು ಅವಳ ತಪ್ಪಾ? ಹಾಗೆಂದು ಅವನಂತೂ ಎಂದಿಗೂ ಹೇಳಲಾರ.ಅದು ಪ್ರೀತಿ! ಕೊನೆಗೂ ತನ್ನದೇ ತಪ್ಪೇನೋ ಎಂದು ನೊಂದುಕೊಳ್ಳುತ್ತದೆ ಪ್ರೀತಿ.
       ತಾಯಿಯಂಥ ಹೆಣ್ಣೊಂದು ಬಂದು ಇವನನ್ನು ಮಡಿಲಿಗೆ ಹಾಕಿಕೊಂಡು ಮಲಗಿಸುವವರೆಗೆ ಇರಬಹುದು ಇಷ್ಟೊಂದು ದುಃಖ. ಆದರೆ ಹಾಗೆಲ್ಲ ಯೋಚಿಸಲಾದರೂ ಸಾಧ್ಯವೇ ಈಗ?ಗೊತ್ತು, ಕಾಲ ಎಲ್ಲಕ್ಕೂ ಮದ್ದೆಂದು.ಆದರೆ ಈ ಕ್ಷಣ ಹೃದಯ ಒಡೆದು ಹೋಗುತ್ತಿದೆ ಎಂದೆನಿಸುವಾಗ ಏನು ಮಾಡುವುದು?ಅದಕ್ಕೇ ಸ್ಮಶಾನಕ್ಕೆ ಬಂದಿದ್ದು. ದುಃಖವಾದಾಗ ಮರೆಯುವುದಕ್ಕಾಗಿ ವಾಸಸ್ಥಳ ಬದಲಿಸಬಯಸಿ ಪ್ರವಾಸಕ್ಕೆಲ್ಲ ಹೋಗುತ್ತಾರಲ್ಲ ಹಾಗೆ! ಎಲ್ಲಿಗೇ ಹೋದರೂ ಹಿಂಬಾಲಿಸುವ ನಾಯಿಯಂಥಹದು ತನ್ನ ಮನಸ್ಸು ಎನಿಸಿತವನಿಗೆ. ನೆರಳಾದರೂ ಕತ್ತಲಲ್ಲಿ ಬಿಟ್ಟು ಹೋಗುತ್ತದೆ.ಈ ಮನಸ್ಸು? ಊಹುಂ...
       ಅಪರಾಧಿ ಪ್ರಜ್ಞೆ ಇವನಿಗೆ.ಅವಳು ಬಿಟ್ಟು ಕೂಡ ಹೋಗಲಿಲ್ಲ. "ಹೋಗು, ನೀನು ಬೇಡ ನನಗೆ" ಎಂದು ಹೇಳುವಷ್ಟು ಗಮನ ಅವಳಿಗಿದ್ದಿದ್ದರೆ ಇವನು ಅವಳನ್ನು ಕನಸಲ್ಲೂ ಪೂಜಿಸುತ್ತಿದ್ದ.ಅವಳಿಗೆ ಅವನು ತನ್ನ ಜೀವನದ ಎಷ್ಟು ದೊಡ್ಡ ಪಾತ್ರ ಎಂಬುದು ಗೊತ್ತೇ ಆಗಲಿಲ್ಲ. ಎಲ್ಲರಿಗೂ ಆಗಿ ಉಳಿದರೆ ಅವಳ ಸಮಯದಲ್ಲಿ ಇವನಿಗೆ ಕೊಂಚ ಪಾಲು.ಅವಳ ಪ್ರಪಂಚದಿಂದ ಎಲ್ಲರೂ ಎದ್ದು ಹೋಗಿ ”ಬಿಕೋ’ ಎನಿಸತೊಡಗಿದಾಗ ಇವನಿಗೆ ಸ್ವಾಗತ. ಇವನ ಜಗತ್ತು ಅವಳಿಲ್ಲದೇ ಯವಾಗಲೂ”ಬಿಕೋ’ ಎನ್ನುತ್ತದೆ ಅವಳಿಗೆ ಅದೆಂದಿಗೂ ಅರ್ಥವಾಗುವುದೇ ಇಲ್ಲ. ಅರ್ಥವಾಗುವುದು ಇವನಿಗೂ ಬೇಕಿಲ್ಲ. ಏಕೆಂದರೆ ಅದು ಅರ್ಥವಾದ ದಿನ ಅವಳಿಗೆ ಖಂಡಿತ ನೋವಾಗುತ್ತದೆ ಎಂಬುದು ಇವನಿಗೆ ಗೊತ್ತು. ಅದೆಲ್ಲ ಅರ್ಥವಾಗದೆಯೇ, ಅವಳಿಗೆ ನೋವಾಗದೆಯೇ ಜೀವನ ಮುಗಿದು ಹೋಗಲೆಂದು ಆಶಿಸುತ್ತದೆ ಪ್ರೀತಿ.
        ಇವನು ಅವಳ ಜೀವನದಿಂದ ಎದ್ದು ಹೋದಾಗ ಅವಳಿಗೆ ಎಷ್ಟು ನೋವಾಗಬಹುದೆಂದು ಊಹಿಸಿಕೊಂಡು ಕರುಳು ಕಿತ್ತು ಬರುವಂತೆ, ನೆನೆ ನೆನೆದು ಅತ್ತಿದ್ದೆಲ್ಲ ಅವಳಿಗೆ ಎಂದಿಗೂ ಅರ್ಥವಾಗಲೇ ಇಲ್ಲ. ಯಾರು ಎಷ್ಟೇ ಸಲಹೆ ಕೊಟ್ಟರೂ, ನಾನೇ ಅವಳೆಂದುಕೊಂಡು ಪ್ರೀತಿಸಿದವನಿಗೆ ಅವಳನ್ನು ಬೇರೆಯಾಗಿ ನೋಡುವುದು ಒಂದು ಹಂತದಲ್ಲಿ ಸತ್ತೇ ಹೋಗುವಷ್ಟು ಸಂಕಟ ಕೊಟ್ಟಿತ್ತು. ಅದೆಲ್ಲ ಅವಳಿಗೆ ಎಂದಿಗೂ ತಿಳಿಯುವುದಿಲ್ಲ.ಅವಳಿಗೆ ತಾಯಾಗಿ, ಮಗುವಾಗಿ , ಪ್ರತಿಯಾಗಿ ಏನನ್ನೂ ಬಯಸದೇ ಪ್ರೀತಿಸಿದವನ ಪ್ರೀತಿಯ ಅಗಲುವಿಕೆ ಕೂಡ ಅವಳನ್ನು ಬದಲಾಯಿಸಲಾರದೆಂದರೆ, ಅವಳ ಬದುಕಿನಲ್ಲಿ ಇವನಿಗೆ ಇದ್ದ ಸ್ಥಾನವಾದರೂ ಎಷ್ಟಾಗಿತ್ತು? ಅವನು ಸತ್ತಾಗ ಅವಳಿಗೆ ನೋವಾಗುವುದಿಲ್ಲವೆಂದರೆ, ಬದುಕಿದ್ದಾಗ ಖುಷಿಯೂ ಆಗುವುದಿಲ್ಲವೆಂದು ತಾನೇ ಅರ್ಥ?! ಆದರೂ ಒಪ್ಪಲಾರದು ಪ್ರೀತಿ. ಇಲ್ಲ, ಅವಳಿಗೆ ನೋವಾಗುತ್ತದೆ ಎಂದೇ ಸುಳ್ಳಾಡುತ್ತದೆ ಮನಸು. ’ಪ್ರೇಮ ಕುರುಡು’ ತುಂಬ ಸತ್ಯವೆನಿಸಿತು ಮೊತ್ತ ಮೊದಲ ಬಾರಿಗೆ!
        ಆದರೂ ತನ್ನದೇ ತಪ್ಪಿರಬಹುದೆಂದು ಕೊರಗಿ ಮುದುಡಿಕೊಳ್ಳುತ್ತದೆ ಮನಸ್ಸು ಪದೇ ಪದೇ. ಅವಳು ತನ್ನ ಭಾವನೆಗಳು ಹೇಳದೆಯೇ ಅರ್ಥವಾದೀತೆಂದು ಭಾವಿಸಿರಬಹುದೆಂದು ಅವಳನ್ನು ಸಮರ್ಥಿಸುತ್ತದೆ ಮನಸ್ಸು. ಹೆತ್ತ ತಾಯಿ ತಂದೆಯ ಸಮಾಧಿಯ ಮೇಲಾದರೂ ಸರಿ, ಇವಳೊಡನೆ ಸಂಸಾರ ಕಟ್ಟಲೇಬೇಕೆಂದು ಹಾತೊರೆಯುತ್ತಿದ್ದ ಮನಸ್ಸು, ಕರುಳ ನಂಟಿಗೆ ದ್ರೋಹವೆಸಗಿದ್ದಕ್ಕೆ ಕೊರಗುತ್ತಿರಲೇ ಇಲ್ಲ. ಈಗ...ಅವಳಿಗೆ ನೋವಾದೀತೆಂದು,ಅವಳಿಗೆ ಆಗದಿರುವ ನೋವನ್ನು ತಾನೇ ಕಲ್ಪಿಸಿಕೊಂಡು ಸುಟ್ಟು ಸುಟ್ಟು ಸುಣ್ಣವಾಗುತ್ತಿದೆ ಹುಚ್ಚು ಮನಸ್ಸು. ಏನೆನ್ನುವುದು ಇದನ್ನ? ಪ್ರೀತಿಯಾ? ಅದನ್ನೇ ಏಕೆ ತಾಯ್ತಂದೆಗೆ ಕೊಡಲಾರೆಯೆಂದರೆ ಉತ್ತರ ಕೊಡಲಾರದೇ ಕಣ್ಣೀರಾಗುವ ಅಸಹಾಯಕ ಮನಸ್ಸನ್ನು ಬೈಯ್ಯುವುದಾದರೂ ಹೇಗೆ? ಆಕರ್ಷಣೆಯೆಂದರೆ ದೇವರು ಮೆಚ್ಚಲಾರನೇನೋ? ಅದು ದೇವರಿಗೆ ಬಿಟ್ಟ ವಿಷಯ. ಆದರೆ ಇವನ ಮನಸ್ಸಂತೂ ಒಪ್ಪಲಾರದು. ಆ ಪರಿ ಮೊಗೆಮೊಗೆದು ಕೊಟ್ಟ ಪ್ರೀತಿಗೆ ಇಟ್ಟ ಹೆಸರು ಯೌವ್ವನದ ಆಕರ್ಷಣೆಯೆಂದೇ? ಎಂದಿಗೂ ಸಹಿಸಲಾರದು ಮನಸ್ಸು. ಅದು ನಿಜವೋ ಸುಳ್ಳೋ ಯಾರಿಗೆ ಗೊತ್ತು? ಯಾರಿಗೆ ಬೇಕು?
       ಪ್ರೀತಿಯನ್ನು ಕಳೆದುಕೊಂಡವರಿಗೆ ಎಲ್ಲರಿಂದಲೂ ಒಂದು ಸಾಂತ್ವನವಾದರೂ ಸಿಗುತ್ತದೆ. ತೀರ ಅಸಹಾಯಕವಾಗಿ, ಅನಿವಾರ್ಯವಾಗಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರೀತಿಯನ್ನು ಬಿಟ್ಟು ಹೋದವರ ಸಂಕಟ ಯಾರಿಗೆ ಅರ್ಥವಾಗುತ್ತದೆ? ಜೊತೆಗೆ ಕಾಡುವ ಅಪರಾಧಿ ಪ್ರಜ್ಞೆ ಬೇರೆ. ನಾವು ಬಿಟ್ಟು ಬಂದವರ ಬದುಕನ್ನು ಯೋಚಿಸಿ ಮನಸ್ಸೆಷ್ಟು ಕೊರಗುತ್ತದೆಂಬುದು, ’ದ್ರೋಹಿ’ ಎಂದು ಕೈ ತೋರಿಸಿ ಚುಚ್ಚುವ ಗೆಳೆಯ ಬಳಗಕ್ಕೆ ತಿಳಿಯುವುದಾದರೂ ಹೇಗೆ?
      ಮಿಡಿವ ತಂತಿ ಹರಿದಾಗ ವೈಣಿಕನಿಗೆ ಮಾತ್ರ ನೋವಾಗುತ್ತದೆಯೇ?ನುಡಿವ ವೀಣೆಯ ನೋವು ಏಕೆ ಯಾರಿಗೂ ತಿಳಿಯುವುದೇ ಇಲ್ಲ?
 
   

Thursday 29 October, 2009

ಭಯಪಡುವರೇನು ಬಲ್ಲರು ಭರವಸೆಯ ಸುಖವ?




ದಟ್ಟ ಕಾನನದ ನಡುವೆಯೂ
ತೆರೆಯುವುದು ಕಾಲು ದಾರಿ ನನಗಾಗಿ.
ಹೆದ್ದಾರಿಯಲಿ ನಡೆವರೇನು ಬಲ್ಲರು
ಕಾಲು ದಾರಿಯಲಿ ಜಿಗಿವ ಸುಖವ?

ಆಸರೆಯಿಲ್ಲದೆಯೇ ಹಾಯಾಗಿ
ನಿಲ್ಲುವುದು ಸೇತುವೆ ನನಗಾಗಿ.
ಭಯಪಡುವವರೇನು ಬಲ್ಲರು
ಭರವಸೆಯ ಸುಖವ?

ಕಡುಗಪ್ಪನೆಯ ರಾತ್ರಿಯಲ್ಲೂ
ಬಾನ ಬೆಳಕೊಂದು ಮಿನುಗುವುದು ನನಗಾಗಿ
ಇರುಳಿಗಂಜಿ  ಕಣ್ಮುಚ್ಚಿದವರೇನು ಬಲ್ಲರು
ಕತ್ತಲು ಸುರಿವ ಸುಖವ?

ಅಲೆಗಳು ಕೂಡ ಕುಣಿಕುಣಿದು
ಬಂದು ಅಪ್ಪಿ ಮುದ್ದಾಡುವವು ನನ್ನ
ದೂರ ದಡದಲಿ ನಿಂತವರೇನು ಬಲ್ಲರು
ಅಲೆಗಳಪ್ಪುವ ಸುಖವ?

ಸುಳಿಗೆ ಸಿಲುಕಿ ಮುಳುಗಿದರೂ
ನಾನಿರುವಲ್ಲಿಗೆ ಬರುವುದು.
ಸೂರ್ಯರಶ್ಮಿ ಎಳೆಯಾಗಿ
ಕರೆತರಲು ನನ್ನ ಕಡಲಾಳದಿಂದ.


ಭಯಪಡುವರೇನು ಬಲ್ಲರು
ಭರವಸೆಯ ಸುಖವ?
 



Wednesday 28 October, 2009

ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ....




"ಅಮ್ಮಾ....
ಮನುಷ್ಯರ ಥರಹ ನಮಗೇಕೆ ಕೈಗಳಿಲ್ಲ?"
ಗೂಡು ಹೆಣೆಯುತ್ತಿರುವ ಅಮ್ಮನನ್ನು ಕೇಳಿತು ಮರಿ ಹಕ್ಕಿ.
ತಾಯಿ ಹಕ್ಕಿಗೆ ದಿಗಿಲಾಯಿತು. ಮರಿ ಮನುಷ್ಯರ ಹಾಗೆ ಬಯಕೆಗಳ ಹಿಂದೆ ಬೀಳುವುದೇನೋ ಎಂದು.
ತಾಯಿ ಹಕ್ಕಿ ಹೇಳಿತು, " ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಏನೇನು ಬೇಕೋ ಅದನ್ನ ನಿಸರ್ಗ ನಮಗೆ ಕೊಟ್ಟಿದೆ ಮಗು.ಇಲ್ಲದ್ದನ್ನು ಬಯಸುವುದು, ಇದ್ದಿದ್ದನ್ನು ಮರೆಯುವುದು ಮನುಷ್ಯರ ಕರ್ಮ.ಅವರ ಬಯಕೆಗಳು ಎಂದಿಗೂ ಮುಗಿಯುವುದೇ ಇಲ್ಲ. ಕೊಟ್ಟ ಕೈಗಳನ್ನು ಅವರು ಉಣ್ಣಲು, ದುಡಿಯಲು ಮಾತ್ರ ಬಳಸುವುದಿಲ್ಲ, ಕೊಲ್ಲಲು, ಕಡಿಯಲು ಕೂಡ ಬಳಸುತ್ತಾರೆ.ಅವರಂತೆ ನಾವು ಆಗದಿರಲೆಂದು ದೇವರು ನಮಗೆ ಕೈ ಕೊಟ್ಟಿಲ್ಲ."

ಆದರೂ ಮರಿ ಹಕ್ಕಿಗೆ ಸಮಾಧಾನವಾಗಲಿಲ್ಲ.ನಮಗೂ ಕೈ ಬೇಕಾಗಿತ್ತು ಎನಿಸಿತು.ನಾವು ಅವರಂತೆ ಕೆಟ್ಟ ಉದ್ದೇಶಕ್ಕೆ ಬಳಸುತ್ತಿರಲಿಲ್ಲ ಎನಿಸಿತು. ಮರಿಯ ಮುಖದ ತುಂಬಾ ಅಸಮಾಧಾನ. ತಾಯಿ ಹಕ್ಕಿ ಗಮನಿಸದಿರಲಿಲ್ಲ.ಅದಕ್ಕೆ ಗೊತ್ತು, ನಿಸರ್ಗ ತಮಗೆ ಕೊಟ್ಟ ಅದ್ಭುತ ದೇಹದ ಬಗ್ಗೆಯಾಗಲಿ, ಸೌಕರ್ಯದ ಬಗ್ಗೆಯಾಗಲಿ, ಅಸಂತೃಪ್ತಿ ವ್ಯಕ್ತಗೊಂಡರೆ ವಿನಾಶ ಕಾಲ ಹತ್ತಿರ ಬಂದಂತೆ ಎಂದು. ಬುದ್ಧಿ ಹೆಳೋಣವೆಂದರೆ ಅಂಥಹ ಅತೃಪ್ತ ಮನಸ್ಸು ಯಾರ ಬುಧ್ಧಿವಾದವನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ ಎಂದು ಕೂಡ ಅದಕ್ಕೆ ತಿಳಿದಿತ್ತು. ಆದರೂ ತನ್ನದೇ ಮರಿಯನ್ನು ತಿದ್ದದಿರಲಾದೀತೆ?
ಅಂದು ಇಡೀ ರಾತ್ರಿ ಮರಿಗೆ ನಿದ್ದೆಯೇ ಇಲ್ಲ.ಹಾಗೆಯೇ ಅಲ್ಲವೇ, ಬಯಕೆಯ ಹುಚ್ಚು ಹತ್ತಿದ ಮನಸ್ಸು ತನಗೆ ಸಿಕ್ಕಿದ ಯಾವ ಸುಖವನ್ನೂ ಪರಿಗಣಿಸುವುದೇ ಇಲ್ಲ. ಮರಿಗೆ ತನ್ನ ಮೆತ್ತನೆಯ ಹಾಸಿಗೆ, ಬೆಚ್ಚನೆಯ ತಾಯ್ಮಡಿಲು ಯಾವುದನ್ನೂ ಅನುಭವಿಸಲಾಗಲೇ ಇಲ್ಲ ಅಂದು ರಾತ್ರಿ.ತಾಯಿ ಹಕ್ಕಿ ನೋಡುತ್ತಲೇ ಇತ್ತು. ಸಮಯ ಪಕ್ವವಾಗಲೆಂದು ಕಾಯುತ್ತಿತ್ತು.

ಸಿಗದೇ ಇರುವುದನ್ನು ಬಯಸುತ್ತ ಕಳೆದುಕೊಂಡ ಕ್ಷಣಗಳು ಮತ್ತೆ ಮರಳಿ ಬರುವುದಿಲ್ಲವೆಂಬುದನ್ನು ತಾಯಿ ಹಕ್ಕಿ ಮಗುವಿಗೆ ತಿಳಿಸಬಯಸಿತ್ತು. ಆದರೆ ಮರಿಗೆ ತಾಯಿ ಹಕ್ಕಿ ಪ್ರಯತ್ನಪಡದೆ ಕುಳಿತ ಸೋಮಾರಿಯಂತೆ ಕಾಣುತ್ತಿತ್ತು. ಸಹಜವೇ ಅಲ್ಲವೇ? ಬಿಸಿ ರಕ್ತಕ್ಕೆ ಅನುಭವದ ಮಾತುಗಳು ಅರ್ಥಹೀನವಾಗಿ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಅಮ್ಮಂದಿರು ಹಾಗೆಲ್ಲ ಸುಲಭವಾಗಿ ಬಿಡುವುದಿಲ್ಲವಲ್ಲ.
ತಾಯಿ ಹಕ್ಕಿ ನಿರ್ಧರಿಸಿತು. ಹೇಗಾದರೂ ಮಾಡಿ ಮರಿಗೆ ಬಯಕೆ ಮತ್ತು ಅಗತ್ಯಕ್ಕೆ ಇರುವ ವ್ಯತ್ಯಾಸವನ್ನು ತಿಳಿಸಬೇಕು ಮತ್ತು ಅವಶ್ಯಕತೆಗಳು ಪೂರೈಸಿದ ಮೇಲೆ ತನ್ನ ಅಂತರಂಗದ ಕರೆಗೆ ಓಗೊಡಬೇಕು ಎಂದು. ಅವುಗಳನ್ನೇ ಜೀವನದ ಗುರಿಯಾಗಿಸಿಕೊಂಡು ಹಿಂದೆ ಬಿದ್ದವರ ಬದುಕು ಅಟ್ಟ ಹತ್ತಲು ಹೋಗಿ ಏಣಿಯ ಮೋಹಕ್ಕೆ ಬಿದ್ದವನಂತಾಗುತ್ತದೆ ಎಂದೆಲ್ಲ ಹೇಳಬಯಸಿತು ತಾಯಿ ಮನಸ್ಸು. ಆದರೆ ತನ್ನ ಮಾತನ್ನು ಅರಗಿಸಿಕೊಳ್ಳುವ ಶಕ್ತಿ ಇನ್ನೂ ಬಂದಿಲ್ಲ ಮರಿಗೆ ಎಂಬುದರ ಅರಿವಿತ್ತು ತಾಯಿ ಹಕ್ಕಿಗೆ.ಅಸಮರ್ಥರ ಮುಂದೆ ಆಡಿದ ಮಾತುಗಳು ವ್ಯರ್ಥವಾಗುವವು, ಅಥವಾ ದುರುಪಯೋಗವಾಗುವವು ಎಂಬುದು ಕೂಡ ಗೊತ್ತಿತ್ತು ಹಕ್ಕಿಗೆ!

ಮರುದಿನ ಕೂಡ ಮರಿಯ ಮನಸ್ಸು ಏನನ್ನೋ ಯೋಚಿಸುತ್ತಿತ್ತು.ಗೊಂದಲದಲ್ಲಿತ್ತು. ಹಾರಲು ಕಲಿಯಬೇಕೆಂಬ ಹಂಬಲವೇ ಇಲ್ಲದಂತೆ ಕುಳಿತಿತ್ತು ಮರಿ. ತಾಯಿ ಹಕ್ಕಿ ಪ್ರೀತಿಯಿಂದ ಹತ್ತಿರ ಬಂದು, ಮರಿಯನ್ನು ತಬ್ಬಿಕೊಂಡಿತು. ಮರಿಗೆ ತಡೆ ಹಿಡಿದಿದ್ದ ದುಃಖವೆಲ್ಲ ಉಮ್ಮಳಿಸಿ ಬಂದಂತಾಯಿತು.ಬಿಕ್ಕಿ ಬಿಕ್ಕಿ ಅಳಲಾರಂಭಿಸಿತು ಮರಿ.ತಾಯಿ ಹಕ್ಕಿ ನಿಧಾನವಾಗಿ ಮರಿಯನ್ನು ಸಮಾಧಾನಗೊಳಿಸುತ್ತ, ಬುದ್ಧಿ ಹೇಳಲಾರಂಭಿಸಿತು.
"ನೋಡು ಮರೀ..,ನಿನಗೆ ಕೈಯ್ಯ ಬದಲಾಗಿ ರೆಕ್ಕೆಗಳಿಲ್ಲವೇ? ಇಲ್ಲದ ಕೈಗಳ ಬಗ್ಗೆ ಯೋಚಿಸುತ್ತ ಸಮಯ ವ್ಯಯ ಮಾಡಿಕೊಳ್ಳುತ್ತೀಯೇಕೆ? ಹಾರಬೇಕೆಂಬ ಬಯಕೆ ಇಲ್ಲವೇ ಮನಸ್ಸಿನಾಳದಲ್ಲಿ?ಕೈ ಏಕೆ ನಿನಗೆ? ನೀನೇನು ಮನುಷ್ಯರಂತೆ ಆಹಾರ ಸಂಗ್ರಹಿಸಿ ಗುಡ್ದೆ ಹಾಕಬೇಕೆ? ಆ ದಿನದ ಕೂಳನ್ನು ದೇವರು ಆ ದಿನವೇ ಕೊಡುತ್ತಾನೆಂಬ ಭರವಸೆಯಿಲ್ಲವೇ ನಿನಗೆ?ಅವರಂತೆ ಗುಡ್ದದಷ್ಟು ದೊಡ್ಡ ಮರಗಳನ್ನು ಕಡಿದು ಮನೆ ಕಟ್ಟಬೇಕೆ? ನಾವು ಕೊಕ್ಕಿನಿಂದ, ಕಾಲಿನಿಂದ ಕಟ್ಟುವಷ್ಟು ಚೆಂದದ ಮನೆಗಳನ್ನು ಕೈಯಿರುವ ಮನುಷ್ಯರು ತಲೆ ಕೆಳಗಾಗಿ ನಿಂತರೂ ಕಟ್ಟಲಾರರು. ಅವರೆಷ್ಟೆ ಮುಂದುವರಿದರೂ ನಮ್ಮಂತೆ ಸ್ವಚ್ಚಂದವಾಗಿ ಎಂದಿಗೂ ಹಾರಲಾರರು."
"ನಿಸರ್ಗದ ದೃಷ್ಟಿಯಲ್ಲಿ ಎಲ್ಲರೂ ಒಂದೇ ಮಗೂ, ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಮ್ಮಿ ಕೊಡುವ ಗುಣ ನಿಸರ್ಗಕ್ಕಿಲ್ಲ.ಒಂದಿಲ್ಲೊಂದು ರೀತಿಯಲ್ಲಿ ಸೃಷ್ಟಿಯ ತಕ್ಕಡಿ ಸರಿದೂಗಲೇಬೇಕು. ಇಲ್ಲದ್ದಕ್ಕೆ ಕೊರಗಬೇಡ. ಅದಕ್ಕೆ ಬದಲಾಗಿ ನಿನಗೆ ಇನ್ನೇನೋ ಸಿಕ್ಕಿರುತ್ತದೆ. ಹಾರಬೇಕೆಂಬುದು ನಿನ್ನ ಅಂತರಾಳದ ಕರೆ. ಅದನ್ನು ಕೇಳಿಸಿಕೋ...

ಅಗತ್ಯಕ್ಕಿಂತ ಹೆಚ್ಚು ಬಯಸುವುದು ಹೇಗೆ ತಪ್ಪೋ ಹಾಗೇ ಅವಶ್ಯಕತೆಗಳಿಗೇ ಅಂಟಿಕೊಂಡಿರುವುದೂ ತಪ್ಪು,ಅತಿಯಾದರೆ ಅವಶ್ಯಕತೆಗಳೇ ಬಯಕೆಗಳಾಗಿ ಹೋಗುತ್ತವೆ.ಮನುಷ್ಯರಂತೆ ನೀನು ಅವುಗಳ ಹಿಂದೆ ಬೀಳುತ್ತೀಯ... ಅಗತ್ಯಪೂರೈಸಿದೊಡನೆ ನಿನ್ನ ಅಂತರಾಳದ ಆಗಸದಲ್ಲಿ ಗರಿ ಬಿಚ್ಚಲೇಬೆಕೆಂಬುದನ್ನೂ ಮರೆಯಬಾರದು".
ಮರಿಗೆ ಸತ್ಯದ ಅರಿವಾಗಿ ಕಣ್ಣು ತುಂಬಿ ಬಂತು.ತಾಯಿಗೆ ಕೂಡ...
"ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ"
ಕೊನೆಗೂ "ಮರದ ಹಕ್ಕಿ ಮರಿ ರೆಕ್ಕೆ ಬೀಸಿತು, ಅದರ ಗರಿ ಮುಕ್ತವಾಯಿತು"


Wednesday 21 October, 2009

ನಾನು ಸಾಯುವ ಮುನ್ನಾ ದಿನ...



    
     ಮುದ್ದಿನ ಮಗಳಾಗಿ,ಅಕ್ಕರೆಯ ಅಕ್ಕನಾಗಿ, ತುಂಟ ತಂಗಿಯಾಗಿ, ಒಲುಮೆಯ  ಪತ್ನಿಯಾಗಿ, ಪ್ರೀತಿಯ ಅಮ್ಮನಾಗಿ ಒಟ್ಟಾರೆ ಎಲ್ಲ ಪಾತ್ರಗಳನ್ನೂ ಚೆನ್ನಾಗಿ ನಿರ್ವಹಿಸಿ, ಆದರೂ 'ನಾನು' ಎಲ್ಲೂ ಕಳೆದು ಹೋಗದಂತೆ ಕಾಪಾಡಿಕೊಂಡು ಬರಬೇಕೆಂಬ ಇರಾದೆಯಿತ್ತು. ಈಗ ಒಮ್ಮೆ ಹಿಂದಿರುಗಿ ನೋಡಿದರೆ... ನಾನು ಏನೇನು ಮಾಡಿದೆ? ಏನೇನಾದೆ? ಛೆ!

   ಬದುಕಿನ ಇಳಿಸಂಜೆಯ ಹೊಸ್ತಿಲಲ್ಲಿ ನಿಂತು ನೋಡಿದರೆ ದೊಡ್ಡ ಸದ್ದು ಗದ್ದಲದೊಂದಿಗೆ ಒಂದು ಸಂತೆಯೇ ಇದೆ ಬೆನ್ನ ಹಿಂದೆ. ತಿರುಗಿ ನೋಡಲು ಮನಸ್ಸೇ ಆಗುತ್ತಿಲ್ಲ. ಇಷ್ಟು ದಿನದಲ್ಲಿ ನಾನು ಸಾಧಿಸಿದ್ದೇನು ಎಂದು ಕೇಳಿಕೊಂಡರೆ ಮನಸ್ಸು ಬಿದ್ದು ಬಿದ್ದು ನಗುತ್ತಿದೆ, ಅಪಹಾಸ್ಯ ಮಾಡುತ್ತಿದೆ. ಬೇರೆ ಯಾರಾದರೂ ಕುಹಕವಾಡಿದಾಗ ಕಾಡುವ ನೋವಿಗೆ ಮನಸ್ಸು ಮದ್ದು ಕೊಟ್ಟು, ಮುದ್ದಿಸಿ, ತನ್ನಲ್ಲಿರುವ positive ಅಂಶಗಳನ್ನೋ, ಮಣ್ಣೋ, ಏನೋ ಒಂದು ಹೇಳಿ ಸಮಾಧಾನ ಮಾಡುತ್ತಿತ್ತು. ಇನ್ನೊಬ್ಬರಾಡಿದ ಅಣಕ ಎಲ್ಲಿಂದಲೋ ತಂದು ನೆಟ್ಟ ಗುಲಾಬಿ ಗಿಡದಂತೆ, ಎಲ್ಲೋ ಒಂದು ಕಡೆ ಮುಳ್ಳಿನಡಿಯಿ೦ದ ಹೂವು ಹುಟ್ಟುವ ಸಂಭವವಿದೆ. ನನ್ನ ಮನಸ್ಸೇ ನನಗಾಡಿದರೆ ಅಲ್ಲೇ ಗಟ್ಟಿ ಬೇರು ಬಿಟ್ಟ ಪಾರ್ಥೇನಿಯಂ ಗಿಡದಂತೆ.


   ಕಪ್ಪೆ ಚಿಪ್ಪಿನಲ್ಲಿ ಮುತ್ತಿದೆಯೆಂದು ಇಷ್ಟು ದಿನ ಜೋಪಾನ ಮಾಡಿದೆ, ಈಗ ಚಿಪ್ಪಿನೊಳಗೆ.. ಮುತ್ತಿದೆಯಾ? ಎಂದು ಇಣುಕಿದರೆ ಮುತ್ತಿಲ್ಲ ಹುಳುವಿದೆ ಎಂದು ತಿಳಿಯಿತು. ಎಷ್ಟು ದೊಡ್ಡ ಆಘಾತ! ಇದಕ್ಕೂ ಮನಸ್ಸು ನನ್ನನ್ನೇ ಅಣಕಿಸಿ ನಗುತ್ತದೆ. ಜಗತ್ತಿನಲ್ಲಿ ತುಂಬ ಎಚ್ಚರಿಕೆಯಿಂದ ಬಾಳುವವರು ತುಂಬ ಕಡಿಮೆ ಜನ, ಅಂಥವರಲ್ಲಿ ನಾನೂ ಒಬ್ಬಳು ಎಂದುಕೊಂಡೇ ಬಾಳಿದವಳ ಬಾಳು ಇಂದು ಕೊನೆಯ ಘಟ್ಟ ತಲುಪಿದೆ. ಇಂಥ ಪರಿಸ್ಥಿತಿಯಲ್ಲಿ ನನ್ನ ಮನಸ್ಸು ನಾನು ಯಾವುದಕ್ಕೂ ಕಾರಣವೇ ಅಲ್ಲ, ನಿನಗೆ ಕೊಟ್ಟ ಜೀವನವನ್ನು ನೀನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎನ್ನುತ್ತಾ, ತಪ್ಪುಗಳನ್ನೆಲ್ಲ ಬೊಟ್ಟು ಮಾಡಿ ತೋರಿಸುತ್ತಾ , ವ್ಯಂಗವಾಗಿ ನಗುತ್ತಿದ್ದರೆ, ಆಸರೆಯಿಲ್ಲದೇ ಬದುಕಿನ ಮುಸ್ಸಂಜೆಯ ಕೊನೇ ಕ್ಷಣಗಳನ್ನು ಕಂಬನಿ ತುಂಬಿಕೊಂಡು ಮಸುಕಾದ ಕಣ್ಣುಗಳಿಂದ ನೋಡುತ್ತಾ ನಿಂತವಳಿಗೆ ಹೇಗಾಗಬೇಡ? 

      
      ತೀರ ಅಸಹಾಯಕತೆಯ ಕ್ಷಣದಲ್ಲಿ ನಮ್ಮ ಮನಸ್ಸಾದರೂ ನಮ್ಮ ಜೊತೆಗಿರುತ್ತದೆ ಎಂಬ ಭರವಸೆಯಿಂದಲೇ ಅಲ್ಲವೇ ಜೀವನದುದ್ದಕ್ಕೂ ಮನಸಿನ ತಾಳಕ್ಕೆ ಹೆಜ್ಜೆ ಹಾಕಿದ್ದು. ಒಮ್ಮೆ ಕೊಂಚ ಗದರಿಸಿದರೂ ಮತ್ತೆ ನನ್ನದೇ ಮಗು ಎಂಬಂತೆ ಅದು ಹೇಳಿದ್ದನ್ನೆಲ್ಲ ನಡೆಸಿ ಕೊಟ್ಟಿಲ್ಲವೆ? ಅಷ್ಟಾಗಿಯೂ ಕೊನೇ ಘಳಿಗೆಯಲ್ಲಿ 'ನಿನ್ನ ಪಾಪ ಪುಣ್ಯಗಳಿಗೆ ನಾನು ಜವಾಬ್ದಾರನಲ್ಲ' ಎಂದು ಮನಸ್ಸು ಘೋಷಿಸಿಬಿಟ್ಟರೆ ಅದು ಮರಣ ಘಂಟೆಯ ಸದ್ದಿನಂತೆ ತೋರದೇ ಇರುವುದೇ?

     ಇಂದು ಮೊತ್ತ ಮೊದಲ ಬಾರಿಗೆ ಅನಿಸುತ್ತಿದೆ, ತೃಪ್ತಿಯ ಹೊರತಾಗಿ ನನಗೆ ಉಳಿದೆಲ್ಲವೂ ಸಿಕ್ಕಿವೆ ಎಂದು. ಅದೇಕೆ ತೃಪ್ತಿ ಸಿಗಲಿಲ್ಲವೆಂಬುದು ನನಗೂ ಗೊತ್ತಿಲ್ಲ. ಅವನನ್ನು ತುಂಬ ಇಷ್ಟಪಟ್ಟೆ, ಅವನನ್ನೇ ಮದುವೆಯಾದೆ. ನಾವು ಇಷ್ಟಪಟ್ಟವರು ನಮಗೆ ಸಿಗಲೇಬೆಕೆ೦ದೇನಿಲ್ಲ, ಅವರು ನಮ್ಮನ್ನು ಪ್ರೀತಿಸಲೇಬೇಕೆ೦ದೇನಿಲ್ಲ, ಎಂದೆಲ್ಲ ಹೇಳುವುದು ಕೇಳಿದ್ದೇನೆ. 'ಸಿಕ್ಕಿದರೆ ಅದೃಷ್ಟ' ಎನ್ನುತ್ತಾರಲ್ಲ. ಆ ಅದೃಷ್ಟ ನನ್ನದಾಯಿತು. 'ಸಿಗುವುದು' ಎಂದರೇನೆಂದು ನನಗೂ ಗೊತ್ತಿಲ್ಲ. ಆದರೂ ಅವನು ನನಗೆ ಸಿಕ್ಕಿದ್ದಾನೆ ಎಂದುಕೊಂಡೇ ಬದುಕಿಬಿಟ್ಟೆ. 

     
    ಬಹುಶಃ ಹತ್ತಿರವಿದ್ದ ಎನ್ನುವುದು ಸೂಕ್ತವಾದಿತೇನೋ.ಎಲ್ಲಿ ಹತ್ತಿರ? ಮನಸ್ಸಿಗೆ ಹತ್ತಿರವಿದ್ದನಾ? ಅವನ ಬಳಿ ನಾನು ಏನನ್ನೂ ಹೇಳಿಕೊಂಡಿಲ್ಲ. ಹೇಳಿಕೊಂಡದ್ದೂ ಅವನಿಗೆ ಅರ್ಥವೇ ಆಗಲಿಲ್ಲ ಕೊನೆಯವರೆಗೂ... ಕೊನೆಗೂ! ದೇಹಕ್ಕೆ ಹತ್ತಿರವಿದ್ದನಾ? ವರ್ಷದಲ್ಲಿ ೩ ತಿಂಗಳು ಮನೆಯಲ್ಲಿದ್ದರೆ ಹೆಚ್ಚಾಗಿತ್ತು. ಪಾಪ ನನಗೋಸ್ಕರ ತುಂಬ ಕಷ್ಟಪಟ್ಟು ದುಡಿಯುತ್ತಿದ್ದ. ಆದ್ದರಿಂದಲೇ ನನ್ನ ಜೊತೆಗಿರಲು ಅವನಿಗೆ ಎಂದೂ ಸಮಯ ಉಳಿಯಲೇ ಇಲ್ಲ! ಆದರೂ ಅವನು ನನಗೆ ಸಿಕ್ಕಿದ ಎಂದುಕೊಂಡು ನಾನು ಬದುಕಿದೆ!

     ಇಷ್ಟೆಲ್ಲಾ ಆದರೂ ನಾನು ಮಾತ್ರ ನಾನು ಬಯಸಿದವನು ನನಗೆ ಸಿಕ್ಕಿದನೆಂಬ ಖುಷಿಯಲ್ಲಿ ಬದುಕಿದೆನೆಂಬ ಧನ್ಯತೆಯಿತ್ತು ಇಷ್ಟು ದಿನ. ಇಂದೇಕೆ ಮನಸ್ಸು ಅತೃಪ್ತಿಯ ಕಡಲಲ್ಲೇ ಹುಟ್ಟಿ ಬೆಳೆದ ಮೀನಿನಂತೆ ಮಿಡುಕಾಡುತ್ತಿದೆ? ತಿಳಿಯುತ್ತಿಲ್ಲ ನನಗೆ. ಬಹುಶಃ ಇಷ್ಟು ದಿನವೂ ಮುಖವಾಡದ ಹಿಂದೆ ಬೆಚ್ಚಗೆ ಮುಚ್ಚಿಟ್ಟುಕೊ೦ಡಿದ್ದಿರಬೇಕು ನಾನು. ಪ್ರತಿ ದಿನವೂ ನಿನ್ನೆಯ ಮುಂದುವರಿದ ಭಾಗ ತಾನೇ? 'ಇವತ್ತು' ಎಂಬುದು ಯಾವುದೋ ಬೇರೆ ಗ್ರಹದಿಂದ ಉದುರಿ ಬೀಳುವುದಿಲ್ಲವಲ್ಲ. 

    
       ಇಷ್ಟು ದಿನ ತುಂಬ ಚೆನ್ನಾಗಿ ಬದುಕಿದೆ. ಆದರೂ ಕೊನೆಯೇಕೆ ಇಷ್ಟು ದಾರುಣವಾಗಿದೆ ಎಂದುಕೊಂಡರೆ ನಾನು ಇನ್ನೂ ನನ್ನನ್ನು ಪೂರ್ತಿಯಾಗಿ ತೆರೆದುಕೊಂಡಿಲ್ಲ ಎಂದೇ ಅರ್ಥ ಎ೦ದು ನಿರ್ಧರಿಸಿ ನನ್ನನ್ನು ನಾನು ಪೂರ್ತಿಯಾಗಿ ತೆರೆದಿಟ್ಟ ಪುಸ್ತಕದಂತಾಗಿಸ ಬಯಸಿದೆ. ಏನೂ ಬರೆಯದ ಸು೦ದರ ಪುಟಗಳು, ದೇವರು ನನಗಾಗಿ ಕೊಟ್ಟದ್ದು. ಅದನ್ನು ಅತ್ಯಂತ ಜತನದಿಂದ ಸಿಂಗರಿಸಿ ಮರಳಿಸಬಯಸಿದ್ದೆ. ಸಿಂಗರಿಸಲಂತೂ ಆಗಲಿಲ್ಲ. ಆದರೆ 'ಬದುಕಿನ ಕೊನೆ' ಎಂಬುದು ಅದನ್ನು ಮತ್ತಷ್ಟು ಬರಿದಾಗಿಸುತ್ತದೆ ಎಂದುಕೊಂಡಿರಲಿಲ್ಲ. ಪೂರ್ತಿ ಖಾಲಿಯಾಗಿಬಿಟ್ಟಿದ್ದೇನೆ ಎಂದು ಭಾಸವಾಗುತ್ತಿದೆ.

     ಸಾವಿನ ಭಯವಾ? ಇನ್ನು ಬದುಕಲು ಏನಿದೆ ನನಗೆ? ಜೀವನದಲ್ಲಿ ಒಂದು ಹೆಣ್ಣು ಏನೇನು ಅನುಭವಿಸಿ ಪರಿಪೂರ್ಣಳಾಗಬೇಕು ಎಂದು ಎಲ್ಲರೂ ಹೇಳುತ್ತಾರಲ್ಲ ಅದೆಲ್ಲ ನನಗೆ ಸಿಕ್ಕಿದೆ. ಇನ್ನಿಲ್ಲದಷ್ಟು ಸಂಭ್ರಮದಿ೦ದ ಬದುಕಿದ್ದೇನೆ ಎ೦ದುಕೊಡ್ಡಿದ್ದೆ. ಇನ್ನು ಮುಂದೆ ನಾನು ಬದುಕಿದರೆ ಬದುಕು ತುಂಬ ನೀರಸವಾಗಿ ಕೊನೆಗೊಳ್ಳುತ್ತದೆಯೆಂದೆನಿಸಿಯೇ ದೇವರು ನನ್ನನ್ನು   ತನ್ನ ತೆಕ್ಕೆಗೆ ತೆಗೆದುಕೊಳ್ಳಬಯಸಿದ್ದಿರಬೇಕು. 


      ಬದುಕಿನ ಪ್ರತಿಯೊ೦ದು ತಿರುವಿನಲ್ಲೂ, ಎ೦ಥ ಘೋರ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿಯೇ ಯೋಚಿಸುತ್ತ ಬಂದವಳು, ಸಾವೆಂಬ ಸುಂದರ ಘಟನೆಯನ್ನು ಅಲ್ಲಗಳೆಯುತ್ತೇನಾ? ಖಂಡಿತ ಇಲ್ಲ ಎಂದುಕೊಂಡಿದ್ದೆ. ನಾನು ನನ್ನ ಬಗ್ಗೆ ಅಂದುಕೊಂಡಿದ್ದೇ ಸುಳ್ಳಾಗಬಹುದಾದರೆ ಇನ್ನೊಬ್ಬರಿಂದ ನಿರೀಕ್ಷಿಸಿದ್ದು ಸುಳ್ಳಾಗುವುದರಲ್ಲಿ ಆಶ್ಚರ್ಯವೇನಿದೆ? ಜೀವನವೆಂಬುದು ಎಷ್ಟು ದೊಡ್ಡ ಪಾಠ ಕಲಿಸುತ್ತದೆ. ಕೊನೇ ಪಕ್ಷ ಅಷ್ಟೊಂದು ಕಲಿತೆ ಎಂಬ ತೃಪ್ತಿಯಾದರೂ ಉಳಿಯುತ್ತದೆಂದುಕೊಂಡಿದ್ದೆ. ಅದೂ ಉಳಿಯಲಿಲ್ಲ. ಆದರೂ ನಾನು ಇಷ್ಟು ಅತೃಪ್ತಿಯಿಂದ ನನ್ನ ಬದುಕನ್ನು ಮುಗಿಸುತ್ತೇನೆಂದು ಯಾವತ್ತೂ ಭಾವಿಸಿರಲಿಲ್ಲ. 

    ಬದುಕನ್ನು ಮುಗಿಸಿದವರೆಲ್ಲ ಎಲ್ಲಿ ಹೋಗುತ್ತಾರೆಂದು ಗೊತ್ತಿಲ್ಲ ನನಗೆ. ಎಲ್ಲೆಲ್ಲೋ ಹೋಗುತ್ತಾರೆಂದು ಕೇಳಿದ್ದೇನೆ. ಅಲ್ಲಿಗೆ ಹೋಗಿ ನೋಡುತ್ತೇನೆ, ಅಲ್ಲಾದರೂ ಅವನು ನನಗೆ ಸಿಗುತ್ತಾನಾ?(ಸಿಗಬೇಕಾ?) ತೃಪ್ತಿ ಸಿಗುತ್ತದಾ? ನೋಡಿ ನಿಮಗೆ ಹೇಳುತ್ತೇನೆ ಸಾಧ್ಯವಾದರೆ!

Tuesday 13 October, 2009

ದುಃಖವಾಗಿದೆ ಎನ್ನುತಿದೆ ದುಃಖ



ಜಲಪಾತವಾಗಬಯಸಿದೆ ದುಃಖ
ಹರಿವ ನದಿಯಾಗಬಯಸಿದೆ ದುಃಖ
ಕಾನನದೊಡಲಿನ
ತರಗೆಲೆಯ೦ತಿದೆ ದುಃಖ

ಹರಿದರೆ ಸೇರಲು ಸಾಗರವಿಲ್ಲ
ಬಿಕ್ಕಳಿಸಲಿಕೊ೦ದು ತೆಕ್ಕೆಯಿಲ್ಲ
ದುಃಖವೇಕೆ೦ದು ಕೇಳಲಾರಿಲ್ಲವೆ೦ದೂ
ದುಃಖಪಡುತಿದೆ ದುಃಖ

ಬೀದಿಯೆ೦ಬ ಭಯವಿಲ್ಲದೇ
ಎಲ್ಲೆ೦ದರಲ್ಲಿ ಬೆತ್ತಲಾಗಬಯಸಿದೆ ದುಃಖ
ನಿರ್ಲಜ್ಜ ಹೆಣ್ಣಿನ೦ತೆ!

ಕಡಲ ಕಿನಾರೆಯಲ್ಲೊಮ್ಮೆ
ಬಿದ್ದು ಹೊರಳಾಡಬಯಸಿದೆ ದುಃಖ
ತ್ಸುನಾಮಿಯ ಹೊಡೆತಕ್ಕೆ
ಅನಾಥವಾದ ಮಗುವಿನ೦ತೆ!

ಕಾರಣೀಕರ್ತ ಜಗತ್ತಿನ ವಿರುದ್ಧ
ಮುಷ್ಕರ ಹೂಡುತ್ತದ೦ತೆ ದುಃಖ
ಜಗತ್ತನ್ನೇ ಜಗತ್ತಿನಿ೦ದ
ಬಹಿಷ್ಕರಿಸಬೇಕೆ೦ದಿದೆ ಈ ದುಃಖ!


Thursday 8 October, 2009

ಮಗುವಾಗುವೆನೊಮ್ಮೆ ನಿನ್ನ ಮಡಿಲಲ್ಲಿ...




 ಇರಿಯದಿರೆನ್ನ ಹೃದಯವ 
ನಿನ್ನ ಕಣ್ಣ ರೆಪ್ಪೆಯಿಂದ
ಬಾನೊಡಲ ಇರಿದ೦ತೆ
ಮಿ೦ಚೊ೦ದು

ಬಾನು ಸುರಿಸಿದ ಕಣ್ಣೀರು
ಭರಿಸಲು ಭುವಿಯು೦ಟು
ನನ್ನ ಕಣ್ಣೊರೆಸಲು
ಯಾರಿಲ್ಲವೆ೦ಬ ದಿಗಿಲು


ತಾಯ೦ತೆ ಹಗಲು
ಮಡದಿಯ೦ತೆ ಇರುಳು
ಬಾನು-ಭುವಿಯ ಸ೦ಸಾರ
ಇಷ್ಟವಾಗಿದ್ದು ತಪ್ಪೇನೆ ಗೆಳತಿ?

ಭುವಿಯ ಮಡಿಲಲ್ಲಿ ಮುಗಿಲು
ಹಾಯಾಗಿ ಮಲಗಿರಲು
ಜೋಗುಳಕೊ೦ದು ಚ೦ದ್ರ
ಕನಸಿಗೊ೦ದಿಷ್ಟು ನಕ್ಷತ್ರ
ಬಯಸಿದ್ದು ತಪ್ಪೇನೆ ಗೆಳತಿ?

ತಪ್ಪಾದರಾಗಲಿ ಬಿಡು
ಜೀವನಪರ್ಯ೦ತ ಸರಿಯಾಗಿಯೇ
ಇರಬಯಸಿಲ್ಲ ನಾನು...

ನನಗೊಮ್ಮೆ ಮಡಿಲು ಕೊಡು
ಮಗುವಾಗುವೆನು
ಬೆಚ್ಚನೆಯ ಹೆಗಲು ಕೊಡು
ಅತ್ತು ಹಗುರಾಗುವೆನು


Wednesday 7 October, 2009

ಹೀಗೊ೦ದು ಪ್ರೇಮವಿಲ್ಲದ ಪ್ರೇಮಪತ್ರ



ನನ್ನ ಪ್ರೀತಿಯ (?) .....,

      'ನೀನು ಹೇಗಿದ್ದೀಯ' ಅಂತ ಕೇಳುವುದೇ ಇಲ್ಲ ನಾನು.. ಏಕೆಂದರೆ ನಿನ್ನ ಬದುಕು ಚಲಿಸುವುದೇ ಇಲ್ಲ. ನಿಂತ ನೀರಿನಂತೆ ಬದುಕೋದು ನಿನಗೆ ಮಾತ್ರ ಸಾಧ್ಯ ಅಂತ ತುಂಬಾ ಸಲ ಅನ್ನಿಸುತ್ತದೆ. ಯಾವಾಗಲೂ ಸತ್ತವರಂತೆ ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಹೇಳಿಬಿಡಬೇಕು ಅನ್ನಿಸಿದೆ ತುಂಬಾ ಸಲ.. ಆದರೆ ನಾನು ನಿನ್ನಲ್ಲಿ ಇಲ್ಲದ ಗುಣಗಳನ್ನೆಲ್ಲ ಕಲ್ಪಿಸಿಕೊಂಡು ಒಂದು ಸಲ ನಿನ್ನ ಪ್ರೀತಿಸಿಬಿಟ್ನಲ್ಲ, ಅದೊಂದೇ ಕಾರಣಕ್ಕೆ ನಿನ್ನ (ಇಲ್ಲದ - ಒಲ್ಲದ) ಮನಸ್ಸನ್ನ ನೋಯಿಸಲಾರೆ ಗೆಳೆಯಾ!!
     ಇವತ್ತು ಕೂಡ ನೀನು ಮುಂಜಾನೆಯ ಸೂರ್ಯನನ್ನು ನೋಡಿಲ್ಲಾ ಅಂತ ನಂಗೆ ಚೆನ್ನಾಗಿ ಗೊತ್ತು. ಈಗೀಗ ನಿನ್ನ ಬಗ್ಗೆ ನನಗೆ ಆಶ್ಚರ್ಯವಾಗುವುದೇ ಇಲ್ಲ. ಆದರೆ ಕೆಲವೊಮ್ಮೆ ಅಸಹ್ಯವಂತೂ ಆಗುತ್ತದೆ. ಇವತ್ತು ಕೂಡ ಅದೇ ಹೊಗೆ ಹಿಡಿದ ಮಾಡು ನೋಡುತ್ತಾ, ವರ್ಷಗಟ್ಟಲೆ ತೊಳೆಯದೇ ಗಬ್ಬು ನಾರುತ್ತಿರುವ ಹಳೆಯ ಚಾದರ ಹೊದ್ದು ಮಲಗಿದ್ದೀಯಾ? ನಿನ್ನ ಜೀವನದಲ್ಲಿ ಒಂದೇ ಒಂದು ದಿನ ಬೇಗ ಎದ್ದು, ಮಂಜು ಮುಸುಕಿದ ಮುಂಜಾನೆಯನ್ನು ನೋಡು, "ಅಹಹಹಾ" ಎಂದು ನಡುಗುತ್ತ ಒಂದು round walk ಹೋಗಿ ಬಾ.. ಮರುದಿನದಿಂದ ನಿನ್ನ ಬದುಕು ಖಂಡಿತ ಬದಲಾಗತ್ತೆ..
      'ಎಲ್ಲ ಪುಸ್ತಕದ ಬದನೇಕಾಯಿ' ಅಂತ ಗೊಣಗಬೇಡ. walk ಹೋಗಿದ್ದಕ್ಕೆ, ಅಥವಾ ಇಬ್ಬನಿಯ ನಸುಕು ನೋಡಿದ್ದಕ್ಕೆ ನಿನ್ನ ಬದುಕು ಬದಲಾಗುತ್ತದೆ ಅಂತ ನಾನು ಹೇಳುತ್ತಿಲ್ಲ . ನಿನ್ನಲ್ಲಿ ಅದಕ್ಕೆಲ್ಲ ಸ್ಪಂದಿಸುವ, ಸವಿಯುವ ಮನಸ್ಸು ಇಲ್ಲವೇ ಇಲ್ಲ ಅನ್ನೋದನ್ನ ಎಲ್ಲರಿಗಿಂತ ಚೆನ್ನಾಗಿ ಅರಿತವಳು ನಾನು. ಯಾಕೆ ಅಂದ್ರೆ ಅದನ್ನ ಎಲ್ಲರಿಗಿಂತ ಹೆಚ್ಚಾಗಿ ಬಯಸಿದ್ದು ನಾನು. ಯಾಕೆ ಬದಲಾಗಬಹುದು ನಿನ್ನ ಬದುಕು ಅಂತ ಊಹಿಸ್ತಿದಿನಿ ಅಂದ್ರೆ, ನೀನು walk ಮುಗಿಸಿ ಹಿಂದಿರುಗುವಾಗ ಒಂದೇ ಒಂದು ಸಲ Bus Stop ಕಡೆಗೆ ತಿರುಗಿ ನೋಡು. ಮುಂಜಾನೆಯ ಸೂರ್ಯ, ಇಬ್ಬನಿ ಎಲ್ಲವನ್ನು ನಾಚಿಸುವಷ್ಟು ಚೆಂದದ ಕಾಲೇಜು ಹುಡುಗಿಯರು ನಿಂತಿರುತ್ತಾರೆ ಕಣೋ.. ನಕ್ಷತ್ರ, ಬೆಳದಿಂಗಳು ಅಂತ ಸ್ವಲ್ಪ ಚೆನ್ನಾಗಿ ಮಾತಾಡು.. ದರಿದ್ರ ಭಾಷೆಯಲ್ಲಿ ಮಸ್ತ್ figure ಅಂತೆಲ್ಲ ಹೇಳಬೇಡ ಅಲ್ಲಿ.. ಪಾಪ ಕೆಲವರು ನೊಂದ್ಕೋತಾರೆ.
      ಯಾಕೆ ಇದನ್ನೆಲ್ಲಾ ಹೇಳ್ತಿದೀನಿ ಅಂದ್ರೆ ನೀನು ಎಳೋವಾಗಲೇ ಸುಮಾರು ಮಧ್ಯಾಹ್ನ ಆಗಿರತ್ತೆ. ಯಥಾ ಪ್ರಕಾರ ನಿನ್ನ ಆಲಸ್ಯ ಸಂಜೆಯ ತನಕ ಮುಂದುವರೆಯಲೇಬೇಕು. ಸಂಜೆ ಪಾಪ ಎಲ್ಲರು ಬಸವಳಿದು ಹಿಂತಿರುಗುವಾಗ ಹೋಗಿ ನೋಡಿ ಏನು ಮಾಡುತ್ತೀಯಾ ಮಾರಾಯ!!
ತಡವಾಗಿ ಹಿಂತಿರುಗುತ್ತಿರುವುದಕ್ಕೆ ಬಾಗಿಲಲ್ಲೇ ನಿಂತು ಗುರುಗುಟ್ಟುವ ಅಪ್ಪನಿಗೆ ಇವತ್ತು ಏನು ಕಾರಣ ಹೇಳಲಿ ಅಂತ ಹುಡುಗಿಯರು ತಲೆ ಕೆಡಿಸಿಕೊಂಡು ಅವಸರದಲ್ಲಿ ಬರುತ್ತಿರುತ್ತಾರೆ. ಜೋರಾಗಿ ನಡೆಯುತ್ತೇನೆಂದರೂ ನಡೆಯಲು ಬಿಡದ ಒಂದೊಂದು ಗೇಣೆತ್ತರ ಚಪ್ಪಲಿಯ ಮೇಲೆ ಕೋಪ, ಮುಖದ ಮೇಲೆ ನೇರವಾಗಿ ಬಿದ್ದು ಬೆಳಗಿನ ಮೇಕಪ್ ಪೂರ್ತಿ ಕರಗಿ ಹೋಗಿರುವುದನ್ನೇ ಎಲ್ಲರಿಗೂ ಎತ್ತಿ ತೋರಿಸುತ್ತಿರುವ ಬೀದಿ ದೀಪದ ಮೇಲೆ ಕೋಪ, ಇದೆಲ್ಲದರ ಮಧ್ಯೆ ನೀನು ಅವರ ಕಣ್ಣಿಗೆ ಬೀಳುವುದಿಲ್ಲ ಗೆಳೆಯಾ. 

      ಇಷ್ಟೆಲ್ಲಾ ಹೇಳಿ ನಿನ್ನನ್ನ ಸರಿಪಡಿಸಿ ನನಗೇನೂ ಆಗಬೇಕಿಲ್ಲ. ಮೊದಲಿನಂತೆ ಈಗ ನಿನ್ನ ಮೌನಕ್ಕೆ, ಮಾತಿಗೆ ಎಲ್ಲಕ್ಕೂ ಹೊಸ ಹೊಸ ಅರ್ಥ ಕಲ್ಪಿಸಿಕೊಂಡು ಖುಷಿಪಡುವ ಮುಗ್ಧ ಹುಡುಗಿಯಾಗಿ ಉಳಿದಿಲ್ಲ ನಾನು. ನೀನಲ್ಲದೆ ಬೇರೆ ಯಾರೇ ನಿನ್ನಂತೆ ಬದುಕುವುದನ್ನ ನೋಡಿದರೂ ಸಹಿಸೋದು ಕಷ್ಟವೇ ನನಗೆ. ಆದ್ದರಿಂದ ಹೇಳುತ್ತಿದ್ದೇನೆ.
      ಭಾವನೆ ಎಂಬ ಶಬ್ದವೇ ಇಲ್ಲದ ಶಬ್ದಕೋಶ ನಿನ್ನದು.ಭಾವನೆಯೇ ಬದುಕು ಎನ್ನುವವಳು ನಾನು. 'ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ' ಎಂಬುದು ನನಗೆ ಪ್ರೀತಿಯ ಉತ್ತುಂಗದಂತೆ ಕಂಡರೆ, ನಿನಗೆ ಬಲಹೀನತೆಯಾಗಿ ಕಾಣುತ್ತದೆ. ಆದರೆ ನಿನ್ನ ಅಸಡ್ಡೆಗಳಿಗೆ ನನ್ನದೊಂದು ಧನ್ಯವಾದ. ಆವತ್ತಿನ ನಿನ್ನ ತಿರಸ್ಕಾರವೇ ಇವತ್ತಿನ ನನ್ನ ಉತ್ತಮ ಸ್ಥಿತಿಗೆ ಕಾರಣ ಅಂತ ಕೆಲವೊಂದು ಸಲ ಅನ್ನಿಸುತ್ತದೆ ನನಗೆ. ಇದನ್ನೆಲ್ಲಾ ಹೇಳ್ತಿದಾಳೆ ಅಂದ್ರೆ ಮನಸ್ಸಲ್ಲಿ ಏನೋ ಇದೆ ಅಂತೆಲ್ಲ ಊಹಿಸಿಕೊಂಡು ಖುಷಿಪಡಬೇಡ. ಹೆಣ್ಣೆಂದರೆ ಹಾಗೇ..! ಭಾವನೆಗಳನ್ನೆಲ್ಲ ಜಲಪಾತದಂತೆ ಭೋರ್ಗರೆಸಲೂ ಗೊತ್ತು, ಬತ್ತಿದ ಮರುಭೂಮಿಯಂತಿರಲೂ ಗೊತ್ತು.
ಸಾಧ್ಯವಾದರೆ ಸಾಯುವ ತನಕ ಜೀವಂತಿಕೆಯಿಂದ ಬದುಕಲಿ ನೀನು ಎಂದು ಆಶಿಸುತ್ತೇನೆ..


ಇಂತಿ ನಿನ್ನ ಪ್ರೀತಿಯ (?)......

Wednesday 30 September, 2009

ನಾನು ಕಾಯುತ್ತೇನೆ....



           ನಾನು ನನ್ನ ಇನಿಯನಿಗಾಗಿ ಕಾಯುತ್ತಲೇ ಇದ್ದೆ.ಬಾಗಿಲನ್ನು ತೆರೆದಿಟ್ಟಿದ್ದೆ,ಮನೆಯದು - ಮನಸಿನದು. ಬಿಟ್ಟ ಕಣ್ಣು ಬಿಟ್ಟ೦ತೆ ಕುಳಿತಿದ್ದೆ. ಮೈಮರೆತೇನೆ೦ದುಕೊ೦ಡು ಮಲಗದೇ ಎಚ್ಚರವಾಗಿಯೇ ಇದ್ದೆ.
            ವಸ೦ತಗಳೆಷ್ಟುರುಳಿದವೆ೦ದು ತಿಳಿಯಲಿಲ್ಲ.ನಾನು ಅವನನ್ನು ಪ್ರೀತಿಸಲಾರ೦ಭಿಸಿದಾಗ ನನ್ನದು ಬಾಲ್ಯವಾಗಿತ್ತಾ? ನೆನಪಾಗುತ್ತಿಲ್ಲ ನನಗೆ! ಬಾಲ್ಯ ಕಳೆದು ಯೌವ್ವನ ಬ೦ದದ್ದು ನನಗೆ ಗೊತ್ತಾಗಲೇ ಇಲ್ಲ.ಯೌವ್ವನ ಕಳೆದು ಮುಪ್ಪು ಬ೦ದದ್ದೂ ನನಗೆ ಅರಿವಾಗಲಿಲ್ಲ. ಕಣ್ಣು ಮ೦ಜಾಗಿದ್ದು ದುಖಃಕ್ಕೊ ಅಥವಾ ಮುಗಿಯುತ್ತಿರುವ ಆಯುಷ್ಯದ ಮುನ್ಸೂಚನೆಯೋ ತಿಳಿಯುವ ಅಗತ್ಯವಿಲ್ಲ ನನಗೆ.ಏಕೆ೦ದರೆ ಕಣ್ಣಿ೦ದ ನೋಡಿ ಗುರುತಿಸುವಷ್ಟು ದೂರವಿಲ್ಲ ನನ್ನಿನಿಯ!         

       ಎಲ್ಲರೂ ಹೇಳಿದರು ನನ್ನ ಯೌವ್ವನ ವ್ಯರ್ಥವಾಯಿತೆ೦ದು.ಮತ್ತೆ ಕೆಲವರು ನನ್ನ ಜೀವನವೇ ವ್ಯರ್ಥವಾಯಿತೆ೦ದರು.ಇಲ್ಲ! ನನಗೆ ಒ೦ದು ಕ್ಷಣಕ್ಕೂ ಹಾಗನ್ನಿಸಿಲ್ಲ. ನಾನು ಬಾಲ್ಯದಲ್ಲಿ ಅವನಿಗಾಗಿ ಕಾಯುವಾಗ ಕಾಯುವಿಕೆಯಲ್ಲೊ೦ದು ತು೦ಟತನವಿತ್ತು, ಹುದುಗಾಟವಿತ್ತು ಮತ್ತು ಭರವಸೆಯಿತ್ತು.ನಾನು ಯೌವ್ವನದಲ್ಲಿ ಅವನಿಗಾಗಿ ಕಾಯುವಾಗ ಕಾಯುವಿಕೆಯಲ್ಲೊ೦ದು ನಾಚಿಕೆಯಿತ್ತು, ಉನ್ಮಾದವಿತ್ತು ಮತ್ತು ಭರವಸೆಯಿತ್ತು.ಮುಪ್ಪಿನಲ್ಲಿ ನಾನು ಅವನಿಗಾಗಿ ಕಾಯುವಾಗ ಕಾಯುವಿಕೆಯಲ್ಲೊ೦ದು ಪ್ರೌಢತೆಯಿದೆ,ಪೂರ್ಣತೆಯಿದೆ ಮತ್ತು ಭರವಸೆಯಿದೆ. ನೋಡಿ, ಇಷ್ಟೊ೦ದು ಬಣ್ಣಗಳ ಭಾವನೆಗಳು ನನ್ನ ಬದುಕನ್ನು ಸ೦ಪೂರ್ಣತೆಯೆಡೆಗೆ ಕೊ೦ಡೊಯ್ದಿವೆ. ಆದರೂ ನಿಮಗನ್ನಿಸುತ್ತದೆಯೇ ನನ್ನ ಬದುಕು ವ್ಯರ್ಥವಾಯಿತೆ೦ದು? ಈ ಬದುಕಿನ ತು೦ಬಾ ಬದಲಾಗದೇ ಉಳಿದದ್ದು ಅವನು ಬ೦ದೇ ಬರುವನೆ೦ಬ ಭರವಸೆಯೊ೦ದೆ!          

       ನಾನು ಅವನನ್ನು ದೇವರೆ೦ದುಕೊ೦ಡೇ ಪ್ರೀತಿಸಿದ್ದೇನೆ.ಆದ್ದರಿ೦ದಲೇ ನಾನು ಭಾವಿಸುತ್ತೇನೆ, ಅವನು ಏನು ಮಾಡಿದರೂ ಸರಿಯಾಗಿಯೇ ಮಾಡುತ್ತಾನೆ ಮತ್ತು ಯಾವಾಗ ಏನು ಮಾಡಬೇಕೆ೦ಬುದು ಅವನಿಗೆ ಸರಿಯಾಗಿ ಗೊತ್ತು ಎ೦ದು.        

      ಎಲ್ಲರೂ ಹೇಳುತ್ತಾರೆ ನಾನು ಹುಚ್ಚಿಯಾಗಿದ್ದೇನ೦ತೆ, ನಾನು ಮೂರ್ಖಳ೦ತೆ, ಅವನ ಪ್ರಪ೦ಚದಲ್ಲಿ ನಾನಿಲ್ಲವೇ ಇಲ್ಲವ೦ತೆ, ನಾನು ಅವನಿಗೆ ಏನೂ ಅಲ್ಲವ೦ತೆ. ನಾನು ಜನರ ಮಾತಿಗೆಲ್ಲ ಉತ್ತರಿಸುವುದಿಲ್ಲ. ಅವನ ಪ್ರಪ೦ಚದಲ್ಲಿ ನಾನಿಲ್ಲದಿದ್ದರೇನ೦ತೆ, ನನಗೆ ಅವನ ಹೊರತು ಪ್ರಪ೦ಚವೇ ಇಲ್ಲ. ಅವನಿಗೆ ನಾನು ಏನೂ ಅಲ್ಲದಿದ್ದರೇನ೦ತೆ, ನನಗೆ ಎಲ್ಲವೂ ಅವನೇ. ಅವನ ವಿನಃ ನನಗೆ ಏನೂ ಇಲ್ಲ. ಅವನು ಕೂಡ ನನ್ನನ್ನು ಪ್ರೀತಿಸಲೇಬೇಕು ಎ೦ದುಕೊ೦ಡು ನಾನು ಅವನನ್ನು ಪ್ರೀತಿಸಲಿಲ್ಲ.ಅವನು ಈ ಜನ್ಮದಲ್ಲಿ ನನ್ನ ಕಡೆಗೆ ತಿರುಗಿಯೂ ನೋಡಲಾರನ೦ತೆ.ಬೇಡ! ನಾನು ಎಲ್ಲ ಜನ್ಮದಲ್ಲೂ ಕಾಯುತ್ತೇನೆ. ಬೇಸರವಿಲ್ಲ ನನಗೆ. ದಣಿವಾಗುವುದಿಲ್ಲ ನನಗೆ. ಏಕೆ೦ದರೆ ನನಗೆ ಭರವಸೆಯಿದೆ ಅವನು ಬ೦ದೇ ಬರುವನೆ೦ದು.
       ಆದರೆ...    


       ನನಗಾಗಿ ಈ ಜಗತ್ತಿನಲ್ಲಿ ಯಾವುದೋ ಒ೦ದು ಜೀವ ಕಾಯುತ್ತಿದೆ ಎ೦ದು ನಾನು ಇ೦ದಿನವರೆಗೂ ಊಹಿಸಿರಲಿಲ್ಲ.ನಾನು ಯಾರಿಗೋ ಕಾಯುತ್ತಿದ್ದೆನೆ. ನನಗಾಗಿ ಇನ್ಯಾರೋ ನನ್ನ೦ತೆಯೇ ಕಾಯುತ್ತಿದ್ದಾರೆ. ಎ೦ಥ ವಿಪರ್ಯಾಸ! ಅದೆಷ್ಟು ದಶಕಗಳಿ೦ದ ಕಾಯುತ್ತಿದ್ದಾನೋ ಇವನು ನನಗಾಗಿ?! ನನಗೆ ಅರ್ಥವೇ ಆಗಲಿಲ್ಲ ಇವನ ಪ್ರೀತಿ. ಅರ್ಥವಾಗಿದ್ದರೂ ಕೊಡಲು ನನ್ನ ಬಳಿ ಇನ್ನೊ೦ದು ಹೃದಯವಿರಲಿಲ್ಲ. ಇವನು ಯಾವತ್ತಿಗೂ ನಿನ್ನ ಹೃದಯ ಕೊಡೆ೦ದು ಕೇಳುವ ಭಿಕ್ಷುಕನಾಗಲೇ ಇಲ್ಲ ನನ್ನ ಮು೦ದೆ.ಇವನದು ಧ್ಯಾನಿಯ ಮೌನ.ತಪಸ್ಸಲ್ಲ ಇದು. ಒಲಿದು ಬ೦ದರೂ ಆ ದೇವರನ್ನ್ನು ಕೇಳಲು ಏನೂ ಇಲ್ಲ. ಕ್ಷಣ ಕ್ಷಣಕ್ಕೂ ಧನ್ಯತೆಯಿ೦ದ ತು೦ಬಿಹೋಗುವ ಧ್ಯಾನದ೦ತೆ ಇದು!      


       ಬಾರದೇ ಹೋದ ಇನಿಯನಿಗಾಗಿ ಜೀವನಪೂರ್ತಿ ಕಾದ ನಾನು.ತನ್ನ ಪ್ರೀತಿ ಅರ್ಥವೇ ಆಗದವಳನ್ನು ’ಬದುಕೆ೦ದರೆ ಇವಳೇ’ ಎ೦ದು ಪ್ರೀತಿಸಿಕೊ೦ಡ ಇವನು. ನಮ್ಮಿಬ್ಬರಲ್ಲಿ ಏನಿದೆ ವ್ಯತ್ಯಾಸ? ನನ್ನವನು ಏನು ಮಾಡಿದರೂ,ಬ೦ದರೂ,ಬಾರದಿದ್ದರೂ ನಾನು ಅವನನ್ನು ಪ್ರೀತಿಸುತ್ತೇನೆ.ಇವನೂ ಅಷ್ಟೇ, ನಾನು ಇವನನ್ನು ಕಣ್ಣೆತ್ತಿ ನೋಡದೆಯೇ ಇದ್ದರೂ ನನ್ನನ್ನು ಪ್ರೀತಿಸುತ್ತಾನೆ.ಇವನಿಗಾಗಿ ಇನ್ನ್ಯಾರೋ ಜನ್ಮಜನ್ಮಾ೦ತರ ಕಾದ ರೂ ಇವನು ಯಾರಿಗೂ ಒಲಿಯಲಾರ.ನನಗಾಗಿ ಇವನು ಅಥವಾ ಬೇರೆ ಯಾರು ಎಷ್ಟು ಕಾದರೂ ನಾನು ನನ್ನವನಿಗಾಗಿಯೇ ಕಾಯುವುದು.ಬೇರೆ ಯಾರಿಗೂ ಪ್ರವೆಶವಿಲ್ಲ ಹೃದಯ ಕೋಟೆಯೊಳಗೆ.
        ನಾವು ಮಾಡುತ್ತಿರುವುದು ಸರಿಯಾ?ತಪ್ಪಾ? ಇದು ಹಠವಾ? ಪ್ರೀತಿಯಾ? ನಿರ್ಧರಿಸುವವರಾರು? ಯಾರೇನೇ ಅ೦ದರೂ ಅದು ಅವರವರ ಅಭಿಪ್ರಾಯವಷ್ಟೆ!