Wednesday 4 August, 2010

ಕನಸುಗಳು ಕಾದಿರಲಿ ಕೊಂಚ..


ಕಡುಗಪ್ಪು ರಾತ್ರಿಯಲಿ 
ಭೂತಾಯಿ ಮಡಿಲಲ್ಲಿ
ದಣಿದ ಜನಕೆಲ್ಲ 
ಬೆಚ್ಚಗಿನ ಸುಖನಿದ್ರೆ

ಧೋ ಮಳೆಯ ಜೋಗುಳಕೆ 
ಕಿವಿಯಾಗು ಎಂದೆ
ಸುರಿವ ಧಾರೆಗೆ ನೆನೆವ 
ಮೈಯ್ಯಾದೆ ಏಕೆ?

ಜುಳಜುಳನೆ ಹರಿವ 
ತೊರೆಯ ಗಾನವು ನಿನದು
ಸುಯ್ವ  ಗಾಳಿಯ ಹಾಡು
ನಿನಗೆಂದೇ ಹಾಡಿದ್ದು
ಕೇಳುತ್ತ ಹಿತವಾಗಿ 
ನೀ ಮಲಗು ಎಂದೆ

ತೊರೆಯ ತೀರಕೆ ನಡೆದು
ಕಡಲ ಸೇರುವ ನದಿಗೆ 
ಮೇಲ್ಮೇಲೆ ತಂಪು,
ಒಡಲೆಲ್ಲ ಬೆಂಕಿ 
ವಿರಹದುರಿಯನು ನೀನು ಬಲ್ಲೆಯೇನು?
ಎನುತ ಅಳುವೆಯೇಕೆ?

ಸಾಗರವ ಸೇರುವುದು 
ಸಹಜ ಧರ್ಮವು ಹೌದು
ಹುಟ್ಟಿ ಹರಿಯದೆಯೇ ಸೇರಿದರೆ
ಬದುಕು ಚೆಂದವಾಗುವುದೇನು?

ಆತುರತೆ ಬದಿಗಿರಲಿ
ಕನಸುಗಳು ಕಾದಿರಲಿ
ಸಹಜತೆಯು ಜೊತೆಗಿರಲಿ
ಮನದಾಳ ತಂಪಾಗಿ
ನದಿಯಂತೆ ನಲಿದಾಡಿ
ಸಾಗರದ ಕಡೆ ಪಯಣ ಸಾಗುತಿರಲಿ