Thursday 29 June, 2017

ಎಷ್ಟೊಂದು ಪಾಪ ನೀನು !

     


    ಮಳೆಗಾಲದ ಬೆಳಗಿನಲ್ಲಿ ದನಗಳನ್ನ ಹೊಡೆದುಕೊಂಡು ಬೆಟ್ಟಕ್ಕೆ ಹೋಗುವಾಗ ಎಲ್ಲ ಮನೆಗಳ ಮಾಡಿನಿಂದ ಪದರು ಪದರಾಗಿ ಹೊರಬರುತ್ತಿರುವ ಬಚ್ಚಲೊಲೆಯ ಹೊಗೆಯನ್ನ ನೋಡಿದಾಗೆಲ್ಲ ನನಗೇನು ನಿನ್ನ ಸಿಗರೇಟಿನ ನೆನಪಾಗುತ್ತದೆ ಅಂದುಕೊಂಡಿದ್ದೀಯಾ? ಖಂಡಿತ ಇಲ್ಲ. ನಾನು ನಿನ್ನನ್ನು ಸಂಪೂರ್ಣವಾಗಿ ಮರೆತಿದ್ದೇನೆ. ಸುಮ್ಮನೆ ಹಾಗೆಲ್ಲ ಅಂದುಕೊಂಡು ಹೆಮ್ಮೆಪಡಬೇಡ. ಅಷ್ಟಕ್ಕೂ ಹಾಗೆ ನೆನಪಿಸಿಕೊಳ್ಳುವಂಥದ್ದು ಏನಿದೆ ನಿನ್ನಲ್ಲಿ? ಎಲ್ಲ ಹುಡುಗರಂತೆ ನೀನೂ ಇದ್ದೆ. ಎಲ್ಲ ಹುಡುಗಿಯರಂತೆ ನಾನೂ ಸೋತೆ ಅಷ್ಟೆ. ಊಹುಂ , ಅಷ್ಟೇ ಅಲ್ಲ ಎಲ್ಲ ಹುಡುಗಿಯರಂತೆ ನಾನೂ ನಿನ್ನ ಮರೆತೆ.
         ಅದರಲ್ಲಿ ಏನೂ ವಿಶೇಷವಿಲ್ಲ. ಆದರೆ ಆಗಿನ ನಾನು ತುಂಬ ಮುಗ್ಧಳಾಗಿದ್ದೆನಲ್ಲ. ನೀನೋ ಆಗಲೇ ದೊಡ್ಡ ಪ್ರೊಫೆಸರ್, ಈಗಂತೂ ಡೀನ್ ಅಂತೆ. ನನಗೆ ಈಗಲೂ ಈ ಪ್ರೊಫೆಸರ್ ಗೆ, ಲೆಕ್ಚರರ್ ಗೆ, ಡೀನ್ ಗೆ ಇದ್ಯಾವುದಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ಎಲ್ಲರನ್ನೂ ಸರ್ ಮೇಡಂ ಎಂದು ಕರೆಯುತ್ತಾರೆ ಎಂಬುದು ಮಾತ್ರ ಅರ್ಥವಾಗುತ್ತದೆ. ಆದರೆ ನೀನು ತುಂಬಾ ಜ್ಞಾನ ಸಂಪನ್ನ. ನಾನು ಚಿಕ್ಕಂದಿನಿಂದಲೂ ದನ ಮೇಯಿಸಿಕೊಂಡೇ ಇದ್ದವಳು. ಪುರುಸೊತ್ತಿದ್ದಾಗ ಶಾಲೆಗೆ ಹೋದವಳು. ಹಾಗೇ ಎಲ್ಲರ ಒತ್ತಾಯಕ್ಕೆ ಕಾಲೇಜಿಗೂ ಹೋದೆ ಸಮಯ ಸಿಕ್ಕಾಗ. ಆದರೆ ನೀನು ಎಲ್ಲ ಬಲ್ಲವನಾಗಿದ್ದೆ. ನನಗೆ ನಿನಗೆ ಮದುವೆಯಾಗಲು ಸಾಧ್ಯವಿಲ್ಲ ಎಂಬುದನ್ನು ಕೂಡ!
        ಆದರೂ ನೀನೇಕೆ ಕಡಲ ದಂಡೆಯಲ್ಲಿ ಕಪ್ಪೆ ಚಿಪ್ಪು ಹೆಕ್ಕುವ ಮಗುವನ್ನು "ಬಾ ಇಲ್ಲಿ, ಕಪ್ಪೆಚಿಪ್ಪಿನ ದೊಡ್ಡ ಅರಮನೆಯನ್ನೇ ತೋರಿಸುತ್ತೇನೆ, ನಿನಗೇ ಕೊಡಿಸಿಬಿಡುತ್ತೇನೆ ಅದನ್ನ", ಎಂದು ಕರೆದುಕೊಂಡು ಹೋಗುವ ಮೋಸಗಾರನಂತೆ ನನ್ನನ್ನ ಕರೆದೊಯ್ದೆ? ನಾನು ನಿನ್ನಷ್ಟು ಜ್ಞಾನವಿಲ್ಲದವಳಾದರೂ ನಿನ್ನಷ್ಟೇ ಜೀವವಿರುವವಳು ಎಂದು ಅನ್ನಿಸಲೇ ಇಲ್ಲವಾ ನಿನಗೆ? ನಾನು ಹೆಣ್ಣಾಗಿ ಮತ್ತು ಕೇವಲ ಹೆಣ್ಣು ಮಾತ್ರವಾಗಿ ನಿನಗೆ ಕಂಡೆನಾ ?
       ಆದರೆ ಒಂದು ವಿಷಯ ಗೊತ್ತಾ ನಿನಗೆ? ನಿನಗೆ ಎಷ್ಟೇ ಬುದ್ಧಿಯಿದ್ದರೂ ನನ್ನಷ್ಟು ಸುಂದರ ಕನಸು ಕಲ್ಪನೆಗಳು ನಿನಗೆ ಬರಲಾರವು, ನಾನು ನಿನ್ನನ್ನು ಪ್ರೀತಿಸುವಷ್ಟು ದಿನವೂ ಬೆಟ್ಟದಲ್ಲಿ ಕುಳಿತು ತೇಲುವ ಮೋಡಗಳಲ್ಲಿ, ಕಂಡ ಕಂಡ ಮರಗಳಲ್ಲಿ ,ಅವುಗಳ ನೆರಳುಗಳಲ್ಲಿ ಎಲ್ಲ ಕಡೆ ನಿನ್ನನ್ನು ಕಂಡು ಪಟ್ಟ ಖುಷಿ ನಿನಗೆ ಎಂದಿಗೂ ಸಿಗಲಾರದು. ಎಲ್ಲರನ್ನೂ ಕಳ್ಳರಂತೆ , ಮೋಸಗಾರರಂತೆ ಕಾಣುವ ಮನುಷ್ಯರಿಗೆ ಸಂಪೂರ್ಣ ಸಮರ್ಪಣೆಯ ಖುಷಿ ಹೇಗೆಂದೇ ಗೊತ್ತಿರುವುದಿಲ್ಲ. ನಿಜ ಹೇಳಬೇಕೆಂದರೆ ಅವರಿಗೆ ಯಾವ ಸುಖವೂ ಸುಖವಾಗುವುದೇ ಇಲ್ಲ. ನಿನಗೆ ನೋಡು , ಒಳ್ಳೆಯ ಹೆಂಡತಿ , ಮಕ್ಕಳು , ಸಂಪತ್ತು ಎಲ್ಲವೂ ಇದೆ, ಆದರೆ ಸುಖ ಮಾತ್ರ ಇಲ್ಲ.
     ನೀನು ಹಾಸಿ ಹೊದ್ದಿರುವ ಸಂಪತ್ತಿನ ಅರ್ಧದಷ್ಟನ್ನು ಕೂಡ ನಾನು ಹುಟ್ಟಿದಾಗಿನಿಂದ ಇದುವರೆಗೂ ಕಂಡಿಲ್ಲ. ಆದರೆ ದನಗಳ ಮೈಯ ಕಂಪು ಕೂಡ ನನಗೆ ಸುಖ ಕೊಡುತ್ತದೆ. ನೀನು ಮೋಸಮಾಡಿಬಿಟ್ಟೆ ಎಂಬ ಕಾರಣಕ್ಕೆ ನನ್ನ ಗಂಡನೂ ಹೀಗೆ ಮಾಡಬಹುದಾ ಅಂತ ಅನುಮಾನದಿಂದ ನೋಡುವ ಕಲ್ಪನೆಯೇ ಬರುವುದಿಲ್ಲ ನನಗೆ. ನಿನ್ನನ್ನು ಎಷ್ಟು ಪ್ರೀತಿಸಿದೆನೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗೇ ನನ್ನ ಗಂಡನನ್ನ ಪ್ರೀತಿಸಲು ಆಗುತ್ತದೆ ನನ್ನಿಂದ. ನಿನ್ನ ಪ್ರೀತಿಸುವ ಮೊದಲೂ ನಾನು ಸುಖವಾಗಿದ್ದೆ. ಪ್ರೀತಿಸುವಾಗಲೂ ಸುಖವಾಗಿದ್ದೆ. ನೀನು ಬಿಟ್ಟ ಮೇಲೆ ಮಾತ್ರ ಸ್ವಲ್ಪ ದಿನ ಮಾತ್ರ ನಾನು ದುಃಖಪಟ್ಟಿದ್ದು . ಮತ್ತೆ ಈಗಲೂ ಸುಖವಾಗಿಯೇ ಇದ್ದೇನೆ.
      ಎಲ್ಲೋ ಅಪರೂಪಕ್ಕೆ ಹೀಗೆ ನೀನು ನೆನಪಾಗುತ್ತೀಯ . ಆದರೆ ನನಗೆ ದುಃಖವಾಗುವುದಿಲ್ಲ. ನಿನ್ನ ಬಗ್ಗೆ ಕರುಣೆ ಮೂಡುತ್ತದೆ. ನನಗಿರುವ ಸುಖ ನಿನಗಿಲ್ಲವಲ್ಲ ಅಂತ..
    ಈಗಲೂ ನನಗೆ ನೀನು ಎಲ್ಲಾದರೂ ಸಿಕ್ಕಿದರೆ ನಾನು ಖುಷಿಯಿಂದಲೇ ಮಾತನಾಡಿಸಬಲ್ಲೆ. ಆದರೆ ನಿನಗೆ ಆ ಭಾಗ್ಯವಿಲ್ಲ. ನೀನು ಕಂಡರೂ ಕಾಣದಂತೆ ಹೋಗುತ್ತೀಯಲ್ಲ ಕಣ್ತಪ್ಪಿಸಿಕೊಂಡು. ಎಷ್ಟು ದುಃಖಿ ನೀನು. ಮೋಸ ಮಾಡುವವರ ಮನಸ್ಸಿನಲ್ಲಿ ಎಷ್ಟು ನಿರಂತರ ಲೆಕ್ಕಾಚಾರಗಳು, ಯಾರ್ಯಾರ ಹತ್ತಿರ ಏನೇನು ಸುಳ್ಳು ಹೇಳಿದ್ದೇನೆ ಎಂದೆಲ್ಲ ನೆನಪಿಟ್ಟುಕೊಳ್ಳಬೇಕಾದ ಕಷ್ಟ, ಇನ್ನೂ ಏನೇನೆಲ್ಲ ಇರುತ್ತದೋ ಏನೋ ಅಲ್ಲವಾ? ಪಾಪ ನೀನು!




     







Sunday 5 August, 2012

ಮೌನ ಉಳಿಯಿತು ಕವಿತೆಯಲ್ಲಿ...













ಆಹಾ! ಕಡಲ ತೀರದಲ್ಲಿ
ಜೊತೆಯಾಗಿ ಕುಳಿತಾಗ
ಮೌನ ಮಾತಾಡಿತು,
ನಿನ್ನ ಕೈಯ ಬಿಸುಪು
ಜಗವ ಮರೆಸಿತು
ಎಂಬುದೆಲ್ಲ ಕವಿತೆಯಲ್ಲಿನ
ಸಾಲಾಗಿ ಉಳಿಯಲಷ್ಟೇ

ಕಡಲ ತೀರವೋ,
ಹಸಿರು ಬೆಟ್ಟವೋ,
ವ್ಯತ್ಯಾಸವೇನಿಲ್ಲ
ಮೌನ ಮಾತನಾಡುವುದಿಲ್ಲ

ಕಂಡಕಂಡವರ ಬಗೆಗೆಲ್ಲ ಮಾತಾಡಿ
ಅವರಿವರ ವಿವರಗಳ ಹಂಚಿಕೊಂಡು
ಮುಂದಿನ ಸುಖಗಳ ಕನಸು ಕಂಡು
ಇರುವ ದುಃಖಕ್ಕೆ ಮತ್ತಷ್ಟು ಸೇರಿಸಿ
ಪರಸ್ಪರ ಕರುಣೆಯನ್ನು ಬೇಡಿ,
ಇಬ್ಬರೂ ಭಿಕ್ಷುಕರು......
ಅಬ್ಬಾ! ಮನಸು ಹಗುರಾಯಿತು ಎನುವಾಗ,

ಮೌನಕ್ಕೆ ಜಾಗವೆಲ್ಲಿ?
ಉಳಿಯಲೇಬೇಕು ಅದು ಕವಿತೆಯಲ್ಲಿ......

Saturday 17 September, 2011

ಅವಳಿಗೂ ಅವನ ಜೊತೆ ಹೀಗೆಲ್ಲ ಆಗಿತ್ತಾ?

             
             ಮಧ್ಯ ರಾತ್ರಿಯಲಿ ಮುದ್ದಾಗಿ ಮಲಗಿರುವ ನಿನ್ನ ಕರೆದೆಬ್ಬಿಸಿ, ಒಮ್ಮೆ ಪ್ರೀತಿಸಬೇಕೆನಿಸಿದೆ ಎಂದು ನಾ ಬಿಕ್ಕುವಾಗ ನನ್ನ ಸಂತೈಸಿದ ನಿನ್ನೊಲವು ಎಷ್ಟೊಂದು ಚೆಂದವಿತ್ತು. ಯಾವ ದುಃಸ್ವಪ್ನ ಕಾಡಿತೋ ನನ್ನವಳ ಎಂದು ನನ್ನ ಸ್ವಪ್ನವ ಮನದಲ್ಲೇ ನೀ ಶಪಿಸಿದ ರೀತಿ ಎಷ್ಟು ಚೆಂದವಿತ್ತು. ನಿನ್ನೆದೆಗೆ ಕಿವಿಗೊಟ್ಟು ಮಲಗಿದ್ದೆ ಇನಿಯ, ನನಗೆ ಆ ದನಿ ಕೇಳಿಸಿತ್ತು. ನನ್ನ ತಲೆ ನೇವರಿಸುತ್ತಿದ್ದ ಆ ಕೈಗಳ ಬಿಸುಪಲ್ಲಿ ಜನ್ಮಕ್ಕಾಗುವಷ್ಟು ಒಲವಿತ್ತು.
              ನಮ್ಮ ಪ್ರೇಮವ ಕದ್ದು ನೋಡಲೆಂದೇ ಸೊಳ್ಳೆ ಪರದೆಯ ಒಳಗೆ ಕಳ್ಳನಂತೆ ಸೇರಿಕೊಂಡ ಖದೀಮ ಸೊಳ್ಳೆಯನ್ನು ಸದ್ದಾಗದಂತೆ ಹೊಡೆಯಲೆತ್ನಿಸುವಾಗ ನನ್ನ ನಿದ್ರೆಗೆ ಭಂಗವಾದೀತೆಂಬ ನಿನ್ನ ಕಾಳಜಿಯಲ್ಲಿ ಎಷ್ಟೊಂದು ಒಲವಿತ್ತು.
              ಯಾರೋ ಪ್ರೀತಿಸಿ ಮದುವೆಯಾದವರು ಹೆಂಡತಿಯನ್ನು ಕಳೆದುಕೊಂಡದ್ದನ್ನು ನೆನೆದು ಅರೆನಿದ್ರೆಯಲ್ಲಿದ್ದು ಕುಳಿತು ನಾನು ಅಳುವಾಗ, ನಮ್ಮಿಬ್ಬರನ್ನು ಯಾರೂ ಬೇರೆ ಮಾಡಲಾರರು, ಸಾವು ಕೂಡ....ಎಂದು ನೀ ಸಂತೈಸುವಾಗ ನಿನ್ನ ಕಂಗಳ ಕೊಳದ ಹನಿಯಲ್ಲಿ  ಹೃದಯಾಂತರಾಳದ ಪ್ರೇಮವೆಷ್ಟು ಚೆಂದವಾಗಿ ಪ್ರತಿಫಲಿಸಿತ್ತು. 
              ಜೀವಗಳು ದೇವರೇ ಬೆಸುಗೆ ಹಾಕಿದಂತೆ ಬೆಸೆದುಕೊಂಡ ಕ್ಷಣಗಳಲ್ಲಿ ಜಗತ್ತಿನ ಪರಿವೆಯೇ ಇಲ್ಲದೇ, ಒಬ್ಬರಿಗೊಬ್ಬರು ಸಂಪೂರ್ಣ ಸಮರ್ಪಿತರಾಗಿ ಪ್ರೀತಿಸುವಾಗಲೂ ನನ್ನ ಪ್ರೀತಿಗಿಂತ ನಿನ್ನ ಪ್ರೀತಿಯೇ ಚೆಂದವಿತ್ತೇನೋ ಎಂದೆನಿಸಿದಾಗ ನಿನ್ನ ಪ್ರೀತಿಯ ಮೇಲೆ ನನ್ನ ಪ್ರೀತಿಗೆ ಸಣ್ಣಗೆ ಹೊಟ್ಟೆ ಕಿಚ್ಚಾಗಿತ್ತು. 
               ಯಾರೋ ಯಾರನ್ನೋ ಪ್ರೀತಿಸಿಕೊಳ್ಳುತ್ತ ಬರೆದ ಸಾಲುಗಳಲ್ಲಿ ಭಾವಗಳು ತುಂಬಿ ತುಳುಕಿದ್ದು ಗೊತ್ತಾದದ್ದು ನಿನ್ನ ಪ್ರೀತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಓದಿದಾಗಲೇ. ನಿನ್ನ ಪ್ರೀತಿಯೇ ಈ ಜಗತ್ತನ್ನು ಇಷ್ಟು ಸುಂದರವಾಗಿಸಿದ್ದು ಅಂತ ಅರ್ಥವಾದಾಗ, ಖುಷಿಯ ಬೆನ್ನಲ್ಲೇ ನಿನ್ನ ಹೊರತು ಜಗತ್ತು ಬರಡು, ಭಾವರಹಿತ ಕಲ್ಲು ಮಣ್ಣುಗಳ ಸಂಗ್ರಹಣಾಲಯ ಎನ್ನಿಸಿ, ಮರುಭೂಮಿಯಲ್ಲಿ ಮಧ್ಯಾಹ್ನ ಒಂಟಿಯಾಗಿ ನಿಲ್ಲಲಾರದೇ ನಿಂತ ಹೆಣ್ಣಿನ ದೀನ ಮುಖ ಕಣ್ಣೆದುರು ಬರುತ್ತದೆ. ಆ ಮುಖ ನನ್ನದಾ? ಎನಿಸಿದಾಗ ಭಯ ತಾಳಲಾರದೇ ನಿನ್ನ ಎದೆಯಲ್ಲಿ ಹುದುಗಿಕೊಳ್ಳುತ್ತೇನೆ. ಮತ್ತದೇ ಒಲವು ತುಂಬಿದ ನಿನ್ನ ಕೈಗಳು ಬಲವಾಗಿ ನನ್ನ ಅಪ್ಪಿಕೊಳ್ಳುತ್ತವೆ. ಮತ್ತೆ ಜಗತ್ತು ಸುಂದರವಾಗುತ್ತದೆ.
              ಯಶೋಧರೆಗೂ ಸಿದ್ಧಾರ್ಥನ ಜೊತೆ ಹೀಗೆಲ್ಲ ಆಗಿದ್ದಿರಬಹುದಾ? ಅವನೂ ಅವಳನ್ನು ನೀ ನನ್ನ ಪ್ರೀತಿಸಿದ ಹಾಗೇ ಪ್ರೀತಿಸಿದ್ದನಾ? ಎನ್ನಿಸಿ ತುಂಬ ಅಳು ಬರುತ್ತಿದೆ ಈಗ...

Wednesday 20 April, 2011

ಮದುವೆಗೆ ಎಲ್ಲರೂ ಬನ್ನಿ...



ನನ್ನ ಪ್ರೀತಿಯ ...........

    ನೆನ್ನೆ 'Bhagban' ನೋಡುತ್ತಿದ್ದೆ. ಅಮಿತಾಬ್ - ಹೇಮಾಮಾಲಿನಿ ಪ್ರೀತಿ ನೋಡಿ ಕಣ್ಣು ತುಂಬಿ ತುಂಬಿ ಬರ್ತಾ ಇತ್ತು. ಛೇ !! ಯಾಕಾದ್ರೂ ನಾನಿಷ್ಟು emotional ಅಂತ ಅಂದ್ಕೊಂಡೆ. ಅವಾಗ ಶುರುವಾಯ್ತು, ಧಾರಾವಾಹಿಯ ತರಹ ನಮ್ಮ ಮದುವೆ, ನಮ್ಮ  ಮನೆ, ಜಗಳ, sorryಗಳ ಕನಸು... ಆಹಾ..ಎಷ್ಟು ಚೆಂದ ಅನ್ನಿಸಿತು.. ನಲವತ್ತಲ್ಲ ನಾಲ್ಕು ನೂರು ವರ್ಷವೂ ನಾನು ನಿನ್ನ ಹೆಂಡತಿಯಾಗಿ ನಿನ್ನ ತೊಳನ್ನೇ ದಿಂಬಾಗಿಸಿಕೊಂಡು ಮಲುಗುವಂತಾಗಲಿ ಅಂತ ಕಾಣದ ದೇವರಲ್ಲಿ ಮನಸ್ಸು ಬೇಡಿಕೊಂಡೇಬಿಟ್ಟಿತು. ಬೇಡಿಕೆಗಳಿಗೇನೂ ಕಮ್ಮಿ ಇಲ್ಲದಿದ್ದರೂ, ಆ ದೇವರು ನನ್ನ ಈ ಬೇಡಿಕೆಯನ್ನು ಪೂರೈಸುತ್ತಾನಂತೆ.

ಎಲ್ಲ ವಿಚಿತ್ರವಾಗಿ ತೋರುತ್ತಿದೆ. ನನ್ನದೇ ಸ್ವಂತ ಗೆಳೆಯ ನನಗೆ ತಾಳಿ ಕಟ್ಟುತ್ತಾನೆ ಅಂದರೆ ನಂಬಲಿಕ್ಕೇ ಆಗುತ್ತಿಲ್ಲ.. ಗೆಳೆಯ ಗಂಡನಾಗಿ ಬದಲಾಗುವ ನಡುವೆ ಸುಮಾರು ಸಮಯ ಸಿಕ್ಕಿತ್ತು ನನಗೆ ಅದನ್ನು ಅರಗಿಸಿಕೊಳ್ಳಲು. ಆದರೂ ಈ ಖುಷಿಯನ್ನು ಅರಗಿಸಿಕೊಳ್ಳಳಾಗುತ್ತಿಲ್ಲ. ನಿನ್ನನ್ನ ಎಲ್ಲರೂ 'ನಿಮ್ಮೆಜಮಾನ್ರು' ಅಂತೆಲ್ಲ ಸಂಭೋದಿಸುತ್ತಾರೆ ನನ್ನೊಡನೆ ಮಾತಾಡುವಾಗ.ನನಗೆ ಅದನ್ನು ಕೇಳಿಸಿಕೊಂಡಾಗೆಲ್ಲ ಖುಷಿ ಧುಮ್ಮಿಕ್ಕಿದಂತೆ ಒಮ್ಮೆಲೇ ಪುಳಕ.. ಗೊತ್ತಾ? ಈಗ ನಾನು ಎಲ್ಲದಕ್ಕೂ ಅಮ್ಮನ ಅಥವಾ ಅಪ್ಪನ ಒಪ್ಪಿಗೆಗಿಂತ ನಿನ್ನ ಒಪ್ಪಿಗೆ ಕೇಳುವುದೇ ಮುಖ್ಯವಂತೆ. ಹಾಗಂತ ಅಮ್ಮನೇ ಹೇಳುವಾಗ ನನಗೆಷ್ಟು ಖುಷಿ ಆಯಿತು. ಮಗುವೊಂದು ಮಣ್ಣಿನಲ್ಲಿ ಆಟ ಆಡ  ಬಯಸಿ ಅಮ್ಮನನ್ನು ಕೇಳಲು ಹೋದಾಗ, ಅಮ್ಮ ನಿನ್ನ ಜೊತೆ ಆಡುವ ಗೆಳತಿಯನ್ನೇ ಕೇಳು 'ಆಡಲಾ?' ಎಂದು, ಎಂದು ಹೇಳಿದರೆ ಆ ಮಗುವಿಗೆ ಎಷ್ಟು ಖುಷಿಯಾಗಬಹುದೋ ಅಷ್ಟೇ ಖುಷಿ ನನಗೂ ಆಯಿತು.

ಎಲ್ಲರಿಗೂ ಹೀಗೆ ಆಗಬಹುದೇನೋ, ಏನೋ ಅವರ್ಣನೀಯ ಆನಂದ. ಪ್ರತಿ ದಿನವೂ ೨ ಸಲ ೩ ಸಲ ಎಣಿಸಿದರೂ  ಬೇಗ ಮೇ ೧೧ ಬರುತ್ತಿಲ್ಲ ಎನಿಸುತ್ತಿದೆ. ಇಷ್ಟು ದಿನ ವರ್ಷಗಳು ಕೂಡ ತುಂಬಾ ಬೇಗ ಓಡುತ್ತಿದ್ದವು. ಈಗ ಹಾಗಲ್ಲ..!!!
ಜಗತ್ತೆಲ್ಲ ಪ್ರೀತಿಯಿಂದ, ಸಂಗೀತದಿಂದ ತುಂಬಿ ಹೋದಂತೆ..ಹಗಲು ಕನಸುಗಳೆಲ್ಲ ಇನ್ನಷ್ಟು ಸುಂದರವಾದಂತೆ.. ಆದರೆ ರಾತ್ರಿ ಕನಸುಗಳು ಬೀಳುತ್ತಿಲ್ಲ. ಕನಸು ಬೀಳಲು ನಿದ್ದೆಯೇ ಬರುತ್ತಿಲ್ಲ.. ರಾತ್ರಿಯೆಲ್ಲಾ ನಿನ್ನ ಜೊತೆ ಮಾತನಾಡುತ್ತಾ ಇರಬಹುದಿತ್ತು ಅನ್ನಿಸುತ್ತಿದೆ. ಅನುಭವಿಗಳೆಲ್ಲ ಹೇಳತೊಡಗಿದ್ದಾರೆ, 'ಮೊದಮೊದಲೆಲ್ಲ ಚೆನ್ನಾಗಿರುತ್ತೆ, ಆಮೇಲೆ ನಿಂಗೆ ಗೊತ್ತಾಗುತ್ತೆ ಜೀವನ ಅಂದರೇನು ಅಂತ' ಎಂದು. 'ಇನ್ನು ಗಂಭೀರವಾಗು' ಎಂಬ ಅರ್ಥದಲ್ಲಿ ಅವರೆಲ್ಲ ಹೇಳಿದರೂ, ಅದೆಲ್ಲ ನನಗೆ ಅರ್ಥವಾಗುವಷ್ಟು ದಿನ ಖುಷಿಪಡುವ, ಕುಣಿಯುವ ಅವಕಾಶವಿದೆ ಎಂದು ಹೇಳುತ್ತಿದ್ದಾರೆ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಮತ್ತೆ ಕನಸು ಕಾಣಲು ಶುರು ಮಾಡುತ್ತೇನೆ.

ಸ್ವಲ್ಪ ಭಯವೂ ಇದೆ ನನಗೆ. ಎರಡು ಕುಟುಂಬಗಳ ಮಧ್ಯೆ ಸೇತುವೆಯಾಗುವ, ಯಾರಿಗೂ ನೋವಾಗದಂತೆ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ನಡೆದುಕೊಳ್ಳುವ ಕೆಲಸ ಕೊಂಚ ಕಷ್ಟವೇ ಎಂಬುದು ನಿಶ್ಚಿತಾರ್ಥವಾದಾಗಿನಿಂದ ಅರ್ಥವಾಗುತ್ತಿದೆ. ಆದರೂ ನಾನು ಎಲ್ಲವನ್ನೂ ನಿಭಾಯಿಸಬಲ್ಲೆ, ಜೊತೆಗೆ ನೀನಿದ್ದೀಯಲ್ಲ ಎಂಬ ಭಂಡ ಧೈರ್ಯವಿದೆ. ಆದರೆ ಸಂಬಂಧಗಳ ಎಳೆ ಸೂಕ್ಷ್ಮ ಎಂಬುದಂತೂ ಸತ್ಯ.

ಎಲ್ಲರೂ ಆಂಟಿ ಆಂಟಿ ಎಂದು ಅಣಕಿಸುವಾಗ, ನಾನೂ ಹೆಚ್ಚಿನ ಆಂಟಿಯರಂತೆ ಡುಮ್ಮು ಹೊಟ್ಟೆಯ ಆಂಟಿಯಾಗಿ, ಅಡಿಗೆ ಮನೆಯಲ್ಲಿ ಕೈ ಒರೆಸಿ ಒರೆಸಿ ಕೊಳಕಾದರೂ ಅದೇ ನೈಟಿ ಹಾಕಿಕೊಂಡು ಮಕ್ಕಳೊಂದಿಗೆ, ಗಂಡನೊಂದಿಗೆ ಕಿರುಚುತ್ತ, ಜಗಳವಾಡುತ್ತಾ, ದುಡಿದು ಹೈರಾಣಾಗಿ, ಜಗತ್ತಿನ ಯಾವ ಸೌಂದರ್ಯವೂ ಕಣ್ಣಿಗೆ ಕಾಣದಂತಾಗಿ, ಮುಂದೊಂದು ದಿನ ಯಾಕೋ ಎಲ್ಲರೂ ನನ್ನನ್ನು ದುಡಿಯುವ ಯಂತ್ರದಂತೆ ನೋಡುತ್ತಿದ್ದಾರೆ ಎಂದುಕೊಂಡು ಅತ್ತು ಕರೆದು, ಕೊನೆಗೆ ಖಿನ್ನಳಾಗಿ....... ಅಬ್ಬ..!! ನಿಜಕ್ಕ್ಕೂ ಸ್ವಲ್ಪ ಜಾಸ್ತಿಯೇ ಭಯವಾಗುತ್ತೆ. ಆದರೂ ನನ್ನ ಜೊತೆ ನೀನಿದ್ದಿಯಲ್ಲ..ನೀನಲ್ಲದೆ ಬೇರೆ ಯಾರೋ ಆಗಿದ್ದರೆ ಅವರನ್ನು ಅರ್ಥ ಮಾಡಿಕೊಳ್ಳುವ, ಅರ್ಥವಾಗದಿರುವ... ಇನ್ನೂ ಏನೇನೋ ಸಮಸ್ಯೆಗಳೂ ಇರುತ್ತಿದ್ದವೇನೋ...

ಜೀವನಪೂರ್ತಿ ಜೊತೆಗಿರುವ ಗೆಳೆಯನಿಗೆ ಕೋಟಿ ವಂದನೆಗಳು...

Wednesday 16 February, 2011

ನನ್ನೊಂದಿಗಿರಲೇಬೇಕು ನೀನು...



ನೀನು ಕಳೆದು ಹೋಗುವ 
ಭಯವಿಲ್ಲದಿದ್ದರೂ,
ನೀನು ನನಗಂಟಿಕೊಂಡೇ ಇರಬೇಕೆಂಬ 
ದುರಾಸೆಯಿಲ್ಲದಿದ್ದರೂ....

ನಿನ್ನ ಮನ ಸೆಳೆಯುವ
ಅಗತ್ಯವಿಲ್ಲದಿದ್ದರೂ,
ಇನ್ಯಾರೋ ನಿನ್ನ ಕದ್ದುಬಿಡಬಹುದೆಂಬ
ಅನುಮಾನವಿಲ್ಲದಿದ್ದರೂ...

ನಿನ್ನೊಡನೆ ಕಳೆದ ಸುಮಧುರ 
ಕ್ಷಣಗಳು ಮರೆತಿಲ್ಲವಾದ್ದರಿಂದ,
ಜೀವನದ ಪ್ರತಿ ಕ್ಷಣವೂ ಮಧುರವಾಗಲೆಂದು 
ಮನ ಬಯಸುತ್ತದಾದ್ದರಿಂದ...

ನೆನೆವ ಪ್ರತಿ ಮಳೆಯಲ್ಲೂ,
ಖುಷಿಯ ಪ್ರತಿ ನಗುವಿನಲ್ಲೂ,
ಕಾಡುವ ಪ್ರತಿ ಏಕಾಂತದಲ್ಲೂ,
ಸಂಭ್ರಮದ ಪ್ರತಿ ಬೆಳಗಿನಲ್ಲೂ, 
ನೀನು ಜೊತೆಗಿರಲೇಬೇಕೆಂದು
ಮನ ಬಯಸಿದರೆ,  ಅದು ತಪ್ಪಾದೀತಾ?

ಜನಜಂಗುಳಿಯ ಮಧ್ಯೆ
ನಿನ್ನ ಕೈ ಹಿಡಿದು ನಡೆವಾಗ
ತಕ್ಷಣ ನಿರ್ಮಿತವಾಗಿಬಿಡುವ
ಸುಂದರ ಏಕಾಂತ
ಮತ್ತೆ ಮತ್ತೆ ಬೇಕೆಂದು 
ಮನ ಬಯಸಿದರೆ, ಅದು ದುರಾಸೆಯಾದೀತಾ?

ತಪ್ಪಾದರೂ ಸರಿ,
ನನ್ನೊಂದಿಗಿರಲೇಬೇಕು ನೀನು
ನಾ ಬಯಸಿದಾಗೆಲ್ಲ..
ನಿನ್ನೆದೆಯಲ್ಲಿ ಅಡಗಿಕೊಂಡು 
ತಪ್ಪಿಸಿಕೊಳ್ಳಬೇಕು ನಾನು 
ನೀ ನನ್ನ ಹಿಡಿಯಲು ಬಂದಾಗೆಲ್ಲ...

Wednesday 29 December, 2010

ಹೊಸ ಕನಸಿನ ನನ್ನ ನಾಳೆಗಳು..

ಬದುಕಿನೆಡೆಗೊಂದಿಷ್ಟು ಪ್ರೀತಿ,
ರಾಶಿ ಕುತೂಹಲ, ಅಚ್ಚರಿ
ಎದೆಯೊಳೆಲ್ಲವ ಮುಚ್ಚಿಟ್ಟುಕೊಂಡು
ಪಿಳಿ ಪಿಳಿ ಎಂದು ಕಣ್ಣು ಬಿಟ್ಟಾಗಿನ ಪರಿ

ಯಾರೋ ಎತ್ತಿಕೊಂಡು
ಪ್ರೀತಿಯಿಂದ ಎದೆಗೊತ್ತಿಕೊಂಡು
ಕಣ್ಣಿಂದ ಪನ್ನೀರು ಸುರಿಸಿ
ಎದೆಯಿಂದ ಅಮೃತವ ಉಣಿಸಿ

ನೋಡನೋಡುತ್ತಿದ್ದಂತೆ
ಕಾಲ್ಗೆಜ್ಜೆ ಘಲ್ಲೆಂದು
ಯಾರದೋ ಹೃದಯದ ಪಿಸುಮಾತಿಗೆ
ಎದೆ ಝಾಲ್ಲೆಂದದ್ದೂ ಆಯಿತು..

ನನ್ನಷ್ಟಕ್ಕೆ ನಾನಿದ್ದೆ,
ಪುಟ್ಟ ಹುಡುಗಿ ನಾನು ಎಂದುಕೊಂಡಿದ್ದೆ
ನಾಳೆ ನಾಳೆ ಮದುವೆಯಂತೆ..
ನಿಶ್ಚಯಿಸಿದ್ದೂ ಆಯಿತು.

ಹೊಸ ಕನಸುಗಳು ಅರಳಿ
ನನ್ನವನ ಸ್ವಾಗತಿಸುವವಂತೆ
ನನ್ನ ನಾಳೆಗಳೆಲ್ಲ ಇನ್ನು
ನನ್ನಿನಿಯನಿಗಂತೆ...

ನನ್ನ ಗೆಳೆಯ ವಿನಾಯಕನೊಂದಿಗೆ ಡಿಸೆಂಬರ್ ೨೦ಕ್ಕೆ ನನ್ನ ನಿಶ್ಚಿತಾರ್ಥವಾಯಿತು. ನಿಮ್ಮೆಲ್ಲರ ಹಾರೈಕೆಗಳನ್ನು ಬಯಸಿ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ..

Tuesday 7 September, 2010

ಎಚ್ಚರಾಗುವೆನೆ ನಾನು?


ಒಂಟಿ ಮರದಲಿ ಉಲಿಯುತಿಹ ಹಕ್ಕಿಯಂತೆ
ಕಡುಗಪ್ಪು ರಾತ್ರಿಯಲಿ ಜೊತೆ ಬಯಸಿ
ಉಕ್ಕುತಿಹ ಕಡಲಿನಂತೆ
ಜಾತ್ರೆಯಲಿ ತಾಯ ಕೈ ಬೆರಳು
ತಪ್ಪಿಹೋಗಿರುವ ಮಗುವಿನಂತೆ
ರಾಗ ಬೆರೆಸುವರಿಲ್ಲ, ದಾರಿ ಹೇಳುವರಿಲ್ಲ
ಬದುಕು ಎಲ್ಲಿಹುದೋ ತೋರುವವರರಿಲ್ಲ

ಸಂಜೆ ಮಳೆಯಲ್ಲಿ ಮನೆಬಿಟ್ಟ
ಮದುವೆಯಿಲ್ಲದ ಬಸುರಿಯಂತೆ
ಹಸಿದ ಎಳೆ ಕರು ಸತ್ತ ತಾಯಿಯ ಬಯಸಿ
ಅಂಬಾ.. ಎಂದು ಕರೆಯುವಂತೆ
ಭಾರವೆಷ್ಟಿಹುದೋ ಇಳಿಸುವವರಾರಿಲ್ಲ
ಭಾವವೆಂತಿಹುದೋ ಕೇಳುವವರಾರಿಲ್ಲ

ಅರಿತಿಲ್ಲ ಏನಿಹುದೋ ನನ್ನ ಒಳಗೆ
ಒಂಟಿತನ ಕಾಡುತಿದೆ ಸಂತೆಯೊಳಗೆ
ನಿದ್ದೆಗಣ್ಣಲೇ ನಿತ್ಯ ವಿಶ್ವ ಪರ್ಯಟನೆ
ಅಮಲಿನಲಿ ನಾ ಸತತ ತೇಲುತಿಹೆನೆ?

ಅಂಟಿಕೊಂಡಿಹುದು ಜಗದ
ಕೊಳೆಯೆಲ್ಲ ನನಗೆ...
ಖಚಿತವಾಗದೆ ಹೋದುದು ಒಳಗಿರುವ ಭಾವ
ಮಸುಕಾದ ಕನ್ನಡಿಯ ಹಾಗೆ

ಕಾದಿರುವೆ ಯಾರೋ ಕನಿಕರಿಸುವಂತೆ
ಮರುಗುತಿಹೆ ನಾನಿಲ್ಲಿ ಜೊತೆ ಬಯಸಿ 
ನಲ್ಲೆ ಇನಿಯನ ಬಳಿಸಾರಿ ಬರುವಂತೆ
ಸಾವು ಬರುತಿದೆ ಸನಿಹ ನನ್ನ ಅರಸಿ 

ಹುಟ್ಟಿದಾಗಲೇ ಶುರುವಾಗಿದೆ ಕ್ಷಣಗಣನೆ...
ನೋಡಬೇಕಿದೆ,
ನಾ ಇನ್ನಾದರೂ ಎಚ್ಚರಾಗುವೆನೆ?