Friday 27 November, 2009

ಕ್ಷಮಿಸು ಕನಸಿಗೆ ಬಂದಿದ್ದಕ್ಕೆ...



 ನನ್ನನ್ನು ಪ್ರೀತಿಸುವ ಹುಡುಗಾ...,
     ಕ್ಷಣ ಕ್ಷಣ ಎದೆಯಿಂದ ಹೊಮ್ಮುವ ಉಸಿರಲ್ಲಿ ನಿನ್ನ ನೆನಪು ಮಾತ್ರವಲ್ಲ, ಪಕ್ಕಾ ನಿನ್ನ ಇರುವಿಕೆಯನ್ನೇ ಕಾಣಲಾರಂಭಿಸಿದಾಗ ಮಾತ್ರ ನಿಜಕ್ಕೂ ಭ್ರಮೆ ಅಂತ ಗೊತ್ತಿದ್ದರೂ ಭಯವಾಯಿತು ನನಗೆ. ಪ್ರಯತ್ನಪೂರ್ವಕವಾಗಿ ಕಿತ್ತು ತಂದು ಮನಸ್ಸನ್ನು ನನ್ನ ಬಳಿಯಿಟ್ಟುಕೊಂಡರೂ, ಇರಲು ನಿರಾಕರಿಸತೊಡಗಿದಾಗ ಕೋಪ ಬರತೊಡಗಿತು.ಹೊಸದಾಗಿ ಶಾಲೆಗೆ ಸೇರಿದ ಮಗುವೊಂದು ನಿನ್ನೆ ಮೊನ್ನೆ ಸಿಕ್ಕ ಗೆಳೆಯ ಬಳಗವನ್ನೇ ಪ್ರಪಂಚವಾಗಿಸಿಕೊಂಡು ಅಮ್ಮನ ಮುಂದೆ ವರ್ಣಿಸುವಂತೆ ನನ್ನ ಮನಸ್ಸೇನು ನಿನ್ನನ್ನು ನನ್ನ ಮುಂದೆ ಹೊಗಳಿದ್ದೇ ಹೊಗಳಿದ್ದು. ಅತಿಯಾಯ್ತು ಸಾಕು ಎಂದರೂ ಕೇಳುವುದೇ ಇಲ್ಲವಲ್ಲ. ನನ್ನ ಮನಸ್ಸಿನ ಮೇಲೆ ನನಗೆ ಎಷ್ಟೊಂದು ಹಿಡಿತವಿದೆ ಎಂದುಕೊಂಡೆನಲ್ಲವೇ? ಬಹುಶಃ ಹಿಡಿತದಲ್ಲಿಟ್ಟಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದೆಯೋ ಏನೋ ಎನ್ನಿಸಿತು.ನಿನ್ನ ಕಂಡೊಡನೆ ಮನ ಹಾಗೆ ಕುಣಿಯುವುದೇಕೋ ಗೊತ್ತಾಗಲಿಲ್ಲ ನನಗೆ.ಆಮೇಲೆ ಅರಿವಾಗಿ ಛೇ! ಎನ್ನಿಸುತ್ತಿತ್ತು, ಅಷ್ಟೊತ್ತು ಬಾಲಿಶವಾಗಿ ವರ್ತಿಸಿದ್ದನ್ನು ನೆನೆ ನೆನೆದು ಅವಮಾನಗೊಳ್ಳುತ್ತಿದ್ದೆ.
     ನಿನ್ನ ಮುಗುಳ್ನಗು ನೋಡಿದೊಡನೆ ಅಪ್ರಯತ್ನಪೂರ್ವಕವಾಗಿ ಬಿರಿಯುವ ತುಟಿಗಳನ್ನು ತಡೆಯುವುದಾದರೂ ಹೇಗೆ?ಅದನ್ನಾದರೂ ಕಷ್ಟಪಟ್ಟು ತಡೆದೇನು. ಇಡೀ ಮೈಯ್ಯ ರಕ್ತವೆಲ್ಲ ಮುಖಕ್ಕೆ ನುಗ್ಗಿ ಕೆನ್ನೆ ಕೆಂಪೇರುವಾಗ ಮುಚ್ಚಿಡುವುದಾದರೂ ಹೇಗೆ ಖುಶಿಯನ್ನ? ನಾಚಿಕೆಯನ್ನ? ಆದರೂ ನಿನ್ನ ತುಂಟ ಕಣ್ಸನ್ನೆ, ಸುಂದರ ಮುಗುಳ್ನಗು ನನಗಿಷ್ಟವಿಲ್ಲ ಹುಡುಗಾ... ಅದು ನನ್ನ ಸೋಲಿನ ಕಟ್ಟಡದ ಅಡಿಪಾಯದಂತೆ ತೋರುತ್ತದೆ ನನಗೆ. ನನಗಿಷ್ಟವಿಲ್ಲ, ನಿಜಕ್ಕೂ ನಿನ್ನಂಥ ಗಂಡಸಿನ ಮುಂದೆ ಸೋಲಲು ನನಗಿಷ್ಟವಿಲ್ಲ.ಆದರೆ ಈ ಇಷ್ಟ-ಕಷ್ಟಗಳನ್ನೆಲ್ಲ ಮೀರಿ ನಿಲ್ಲುತ್ತದೆ ’ಇದು’ ಎಂದುಕೊಂಡಿರಲಿಲ್ಲ. ಏನೆನ್ನಲಿ ಇದನ್ನು? ಪ್ರೀತಿಯಾ? ನಿನ್ನ ಮೇಲಿನ ನಿಸರ್ಗ ಸಹಜ ಆಕರ್ಷಣೆಯಾ?ಗೊತ್ತಿಲ್ಲ. ಒಟ್ಟಾರೆ ನನ್ನಲ್ಲಿ ಗೊಂದಲ ಹುಟ್ಟಿಸಿರುವ ಏನೋ ಒಂದು.ಅದನ್ನೆಲ್ಲ ನಿರ್ಧರಿಸಿ, ವ್ಯಾಖ್ಯಾನಿಸಿ, ಪಂಡಿತಳಾಗಲು ನನಗಿಷ್ಟವಿಲ್ಲ.ನನ್ನ ಮನಸ್ಸು ನಾನು ಈ ಖುಷಿಯನ್ನ ಅನುಭವಿಸಲಿ ಅಂತ ಆಸೆಪಡುತ್ತಿದೆಯಾ ಅದನ್ನು ಕೂಡ ನಾನು ನಿರ್ಧರಿಸಲಾರೆ. ಏಕೆಂದರೆ ನಿರ್ಧಾರ ನನ್ನನ್ನು ನಿನ್ನೆದುರು ಸೋಲಿಸುತ್ತದೆ.
     ಏನೇನೋ ನಿರ್ಧರಿಸಿ, ಎಲ್ಲೆಲ್ಲೋ ಸೋತು, ಕೊನೆಗೆ ಎಲ್ಲವೂ ಸುಳ್ಳೆನಿಸಿ, ಇಷ್ಟೆಲ್ಲ ಅನುಭವಕ್ಕೊದಗಿ ಆಗಿದೆ.ಒಂದು ಕಾಲದಲ್ಲಿ ಇವಳ ನೆರಳನ್ನಾದರೂ ಮುಟ್ಟಬೇಕೆಂದು ಬಯಸಿದವರೇ ಇಂದು ಎದುರಿಗೆ ಹೋಗಿ ನಿಂತರೂ 'ಅಯ್ಯೋ ಇವಳಾ..ಇಲ್ಲೇ ಬಿದ್ದಿರ್ತಾಳೆ ಬಿಡು, ಆಮೇಲೆ ನೋಡಿಕೊಂಡರಾಯಿತು’ ಎಂದು ಮನಸ್ಸಿನಲ್ಲಾಡಿಕೊಂಡದ್ದನ್ನ ಕೇಳಿಸಿಕೊಂಡಿದ್ದೇನೆ. ಅದು ಕೂಡ ಸಹಜವೇ ಅಂತ ಗೊತ್ತು.ಒಂದು ವಸ್ತುವಿಗೆ ಸಾಯುವಷ್ಟು ಹಂಬಲಿಸಿ ಪಡೆದ ನಂತರ ಅದು ಅಸಲಿಗೆ ಅಗತ್ಯವಿತ್ತಾ ನಮಗೆ? ಎಂಬ ಪ್ರಶ್ನೆ ತಲೆ ಎತ್ತಿಬಿಡುತ್ತದೆ. ಆದರೆ ಮತ್ತೆ ಅಂಥ ಸಹಜತೆಯ ಸುಳಿಯಲ್ಲಿ ಸಿಲುಕುವ ಮನಸ್ಸಿಲ್ಲ ನನಗೆ. ಪೆಟ್ಟು ತಿಂದ ಮನಸ್ಸು ಭಯಪಡುವುದು ಕೂಡ ಸಹಜವೇ ಅಲ್ಲವೇ! 'ಬಿಸಿ ಹಾಲಲ್ಲಿ ಬಾಯಿ ಸುಟ್ಟುಕೊಂಡವನು ಮಜ್ಜಿಗೆಯನ್ನೂ ಆರಿಸಿಕೊಂಡು ಕುಡಿಯಹೋಗುತ್ತಾನೆ.ಆದರೆ ಅದರ ಅಗತ್ಯವಿಲ್ಲ ಎನಿಸುತ್ತದೆ’ ಎಂದು ಹೇಳಿದೆ ನೀನು. ನಿನ್ನ ಮಾತುಗಳು ಯಾವಾಗಲೂ ಅಷ್ಟೇ ಆ ಕ್ಷಣಕ್ಕೆ ಹೌದೆನಿಸಿಬಿಡುತ್ತವೆ. ಅದು ನನ್ನ ಬಲಹೀನತೆಯೋ ಅಥವಾ ನಿನ್ನ ಸಾಮರ್ಥ್ಯವೋ ನನಗೆ ಗೊತ್ತಿಲ್ಲ. ಆದರೆ ಎದುರಿಗಿರುವುದು ಬಿಸಿ ಹಾಲೋ,ತಂಪು ಮಜ್ಜಿಗೆಯೋ ಎಂದು ಕೂಡ ಅರ್ಥ ಮಾಡಿಕೊಳ್ಳಲು ಸಮರ್ಥವಲ್ಲದ ಮನಸ್ಸನ್ನು ಹೊತ್ತು ಕೂತಿರುವಾಗ, ಖಂಡಿತವಾಗಿಯೂ ನಿರ್ಧರಿಸದೇ ಇರುವುದು ಒಳ್ಳೆಯದಲ್ಲವೇ?
     ಪ್ರತೀ ಸಲ ನೀನು ನನ್ನೊಡನೆ ಮಾತನಾಡಿದಾಗ ನಿನಗೆ ನನ್ನ ಸೂಕ್ಷ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲ ಎಂಬುದು ಧೃಡಪಡುತ್ತಲೇ ಹೋಗುತ್ತದೆ. ಆದರೂ ಮತ್ತೆ ಮತ್ತೆ ನೀನು ಅರ್ಥ ಮಾಡಿಕೊಂಡಂತೆ ಕಲ್ಪಿಸಿಕೊಳ್ಳುತ್ತೇನೆ. ನಿನ್ನ ಪ್ರತಿಯೊಂದು ವರ್ತನೆಯನ್ನು ನಾನು ಅರ್ಥಮಾಡಿಕೊಳ್ಳುವ ರೀತಿಯೇ ಬೇರೆ. ಹೀಗೆ ಹೇಳಿದರೆ ನಿನಗೆ, ಕ್ಷಮಿಸು, ನಿನ್ನ 'ಅಹಂ'ಗೆ ದುಃಖವಾಗಬಹುದೇನೋ. ಆದರೆ ನಿನ್ನ ಅಹಂ ತೃಪ್ತಿಗಾಗಿ ನನ್ನನ್ನು ಪ್ರೀತಿಸುವ ನಿನ್ನನ್ನು ಮೆಚ್ಚಿಸುವ ಅಗತ್ಯ ನನಗಿಲ್ಲ ಗೆಳೆಯ. ಹೇಳಿದರೆ ಹೆಚ್ಚಾಗುತ್ತದೆ, ಹೇಳದಿದ್ದರೆ ಅರ್ಥವಾಗುವುದಿಲ್ಲ ಆದ್ದರಿಂದಲೇ ಹೇಳುತ್ತಿದ್ದೇನೆ. ಖಂಡಿತವಾಗಿಯೂ ನಾನಿದ್ದಂತೆ ನನ್ನನ್ನು ಪ್ರೀತಿಸಲು ನಿನ್ನಿಂದ ಸಾಧ್ಯವಿಲ್ಲವೆಂದು ಮನವರಿಕೆಯಾಗಿದೆ ನನಗೆ. ಸ್ವಲ್ಪ ಸ್ವಲ್ಪವಾಗಿ ಪೂರ್ತಿ ಬದಲಾಯಿಸಿ ನಿನಗೆ ಬೇಕಾದಂತೆ ರೂಪಿಸಿಕೊಂಡು ಒಂದು ಹೆಣ್ಣನ್ನು ಪ್ರೀತಿಸಬಲ್ಲ ಬುದ್ಧಿವಂತ,ಚತುರ ಗಂಡಸು ನೀನು.ಬುದ್ಧಿಗಿಂತ ಹೆಚ್ಚಾಗಿ ನನಗೆ ಹೃದಯದೊಂದಿಗೆ ಬದುಕಬೇಕಿದೆ ಗೆಳೆಯ. ತಾನು ಅರ್ಜುನನಂತವನು ಎಂಬ ಹೆಮ್ಮೆ ನಿನಗಿದೆ ಎಂದು ಗೊತ್ತು, ಆದರೆ ನನಗೆ ನಿನ್ನ ಚತುರತೆ, ತೋಳ್ಬಲ, ರೂಪ ಯಾವುದೂ ಬೇಕಾಗಿಲ್ಲ. ನನಗೆ ನನ್ನತನವನ್ನು ಉಳಿಸಿಕೊಳ್ಳಲು ಬಿಡಬಲ್ಲ ಹೃದಯ ಬೇಕು. ನನ್ನ ವ್ಯಕ್ತಿತ್ವವನ್ನು ಗೌರವಿಸಬಲ್ಲ ವ್ಯಕ್ತಿಗೆ ನನ್ನ ಬದುಕನ್ನು ಪೂರ್ತಿಯಾಗಿ ಒಪ್ಪಿಸಿಕೊಂಡುಬಿಡಬೇಕು ಎಂಬಾಸೆಯಿದೆ.ಖಂಡಿತವಾಗಿಯೂ ನೀನು ಅಂಥವನಲ್ಲ ಅಂತ ಗೊತ್ತು.
      ಆದರೂ ನಾನೇಕೆ ನಿರಾಯಾಸವಾಗಿ ಹಾಗೆ ನಿನ್ನ ಕಾಲ ಬುಡದಲ್ಲಿ ಬಂದು ಬಿದ್ದೆ ಎಂಬುದು ನನಗೆ ಈಗಲೂ ಗೊತ್ತಿಲ್ಲ.ನಾನು ಆಗ ಬಯಸದೇ ದೊರೆತ ಅಗ್ಗದ ವಸ್ತುವಾಗಿದ್ದೆ ನಿನ್ನ ಪಾಲಿಗೆ. ಬಹುಶಃ ಅದಕ್ಕಾಗಿಯೇ ನಿನಗೆ ನನ್ನ ಬೆಲೆ ತಿಳಿದೇ ಇರಲಿಲ್ಲ.ಆದರೆ ಈಗೇಕೆ ಹೀಗೆ? ಬೆಂಬಿಡದೆ ಒಪ್ಪಿಸುವ ಯತ್ನ ನಿನ್ನದು, ನಾನು ಒಪ್ಪಿಯೇ ಒಪ್ಪುತ್ತೇನೆಂಬ ಭರವಸೆಯಿದೆಯಲ್ಲವೇ ನಿನಗೆ? ಈಗ ನಾನು ಒಪ್ಪಿದರೂ ಮತ್ತದೇ ಹಳೇ ದಿನಗಳು ಮರಳಲು ತುಂಬ ಸಮಯ ಹಿಡಿಯುವುದಿಲ್ಲ. ನಾನು ಮತ್ತೆ ನಿನಗೆ 'ಓಹ್..ಇವಳಾ..'ಎನಿಸಿಬಿಡುತ್ತೇನೆ.ಇದು ನನ್ನ ಕಲ್ಪನೆ ಮಾತ್ರವಲ್ಲ, ಅನುಭವಿಸಿದ ಸತ್ಯ. ಆದ್ದರಿಂದಲೇ ಈಗ ನೀ ಕರೆದರೂ ನಾನು ಬರುವುದಿಲ್ಲ.ಬರುವುದೇ ಇಲ್ಲ ನಿನ್ನ ಬಳಿಗೆ, ನಿನ್ನ ಕನಸಿನ ಅರಮನೆಗೆ...
     ಕ್ಷಮಿಸು ಹುಡುಗಾ ನನ್ನನ್ನು, ಒಮ್ಮೆ ನಿನ್ನ ಅಹಂಕಾರವನ್ನುಬ್ಬಿಸಿ ಈಗ ಮತ್ತೆ ದುಃಖ ಕೊಡುತ್ತಿರುವುದಕ್ಕೆ ಕ್ಷಮಿಸು ನನ್ನನ್ನು.ಸತತ ಎರಡು ವರ್ಷಗಳು ನಿನ್ನ ಕನಸಿಗೆ ಬಂದಿದ್ದಕ್ಕೆ ದಯವಿಟ್ಟು ಕ್ಷಮಿಸು ನನ್ನನ್ನು...

Saturday 21 November, 2009

ಅಮ್ಮನಿಗೂ ಒಂದು ಮನಸ್ಸಿತ್ತು




       ಪ್ರತೀಸಲವೂ ಹೀಗೇ ಆಗುತ್ತದೆ.ದಿನಚರಿ ಪುಸ್ತಕದಲ್ಲಿ ೩-೪ ದಿನಗಳ ಹಿಂದೆ ಬರೆದ ಪುಟ ಇಂದು ತೀರ ಕ್ಷುಲ್ಲಕ ಎನಿಸಿಬಿಡುತ್ತದೆ. ಇಂದಿನ ನಾನು ತುಂಬ ದೊಡ್ಡವಳಂತೆ ಭಾವಿಸಿ ನಗುತ್ತೇನೆ ನನ್ನ ನಿನ್ನೆಯನ್ನು ನೋಡಿ! ನನ್ನ ಮಗಳಲ್ಲಿ ನಾನೀಗ ನನ್ನ ನಿನ್ನೆಯನ್ನು ಕಾಣ ಬಯಸುತ್ತೇನೆ. ಅದನ್ನು ಹೇಳಿದರೆ ಅವಳಿಗರ್ಥವಾಗುವುದಿಲ್ಲ. ನನಗೂ ನನ್ನ ಅಮ್ಮ ಹೇಳಿದಾಗ ಅರ್ಥವಾಗಿರಲಿಲ್ಲ. ಆದರೆ ಮಗಳು ಹೀಗೆ ಮಾಡಿದಾಗ ಅದನ್ನು ಆ ಕ್ಷಣಕ್ಕೆ ಅರಗಿಸಿಕೊಳ್ಳಲಾಗುವುದಿಲ್ಲ ನನಗೆ.ಬಹುಶಃ ನನ್ನ ಅಮ್ಮನಿಗೂ ಹೀಗೆ ಆಗಿರಬೇಕು.ಅದೂ ನನಗರ್ಥವಾಗಿರಲಿಲ್ಲ.
          ತುಂಬ ತಲೆ ಕೆಡಿಸಿಕೊಂಡು ಕುಳಿತಿದ್ದಳು ಮಗಳು. ಕೇಳಿದರೆ ಸಿಟ್ಟು, ಮುಜುಗರ ಎಲ್ಲ ಒಟ್ಟೊಟ್ಟಿಗೆ ಬರುತ್ತದೆ. ಮಳೆಗಾಲದಂತವಳು ಇವಳು. ತುಂಬ ಸಮೃದ್ಧ, ಪ್ರಬುದ್ಧ ಎಂದುಕೊಳ್ಳುತ್ತೇನೆ.ಸುರಿದರೆ ಹಾಗೆ ಸುರಿಯುತ್ತಾಳೆ. ಮನೆ ತುಂಬಾ ಕೇಕೆ ಹಾಕಿಕೊಂಡು ತುಂಬಿ ತುಳುಕುತ್ತಾಳೆ. ಇಲ್ಲದಿದ್ದರೆ ಪರ್ಜನ್ಯ ಮಾಡಿ ಬೇಡಿದರೂ ಬರದೇ ಹಠ ಹಿಡಿದು ಮೋಡದಲ್ಲೇ ಕೂರುವ ಮಳೆಯಂತೆಯೇ ಕೂರುತ್ತಾಳೆ ಮುಖ ಬಿಗಿದುಕೊಂಡು. ಇವಳನ್ನು ತಬ್ಬಿ ಮುದ್ದಾಡುವ ಆಸೆಯಾದರೂ ಮುದ್ದಾಡುವಂತಿಲ್ಲ. ಕೆಲವೊಮ್ಮೆ ಮೌನವಾಗಿರಬೇಕೆನಿಸಿದರೂ ಮಾತಾಡಲೇಬೇಕು, ದೂರ ತಳ್ಳುವಂತಿಲ್ಲ. ತೀರ ಅಪ್ಪ-ಅಮ್ಮನ ಹೋಲಿಕೆಯೇ ಇರದಂಥ ವ್ಯಕ್ತಿತ್ವ. ತಾನಾಗಿಯೇ ಬಂತೋ, ಬೆಳೆಸಿಕೊಂಡಳೋ ಗೊತ್ತಾಗಲಿಲ್ಲ. ನನ್ನ ಯೌವ್ವನವನ್ನು ನಾನು ಅವಳಲ್ಲಿ ಕಾಣಲು ಬಯಸಿ ಬಯಸಿ ಸೋಲುತ್ತಿರುವುದಕ್ಕೆ ನನಗೆ ಅವಳು ತುಂಬ ಸ್ವತಂತ್ರ ವ್ಯಕ್ತಿತ್ವದವಳೆಂದು ಭಾಸವಾಗುತ್ತದೋ ಅಥವಾ 'ಜನರೇಶನ್ ಗ್ಯಾಪ್' ಕಾರಣವೋ ಗೊತ್ತಿಲ್ಲ.
ಬಹುಶಃ ಪ್ರತೀ ಮನುಷ್ಯನೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹೀಗೊಂದು ಆಸೆಯ ಮೂಟೆಯನ್ನು ಹೊತ್ತುಕೊಂಡೇ ತಿರುಗುತ್ತಾನೇನೋ ಎನಿಸುತ್ತದೆ. ತನ್ನ ನಂತರವೂ ತಾನು ಉಳಿಯಲಿ ಮಕ್ಕಳ ರೂಪದಲ್ಲಿ ಎಂಬ ಆಸೆ ಏಕೆಂಬುದು ನನಗೂ ಗೊತ್ತಾಗಲಿಲ್ಲ!ಅವಳು ನನ್ನಂತಾಗುವುದಿರಲಿ, ತೀರ ನನ್ನದೇ ಮಗಳೊಂದಿಗೆ ನಾನೇ ಮಾತಾಡಲೋ ಬೇಡವೋ ಎಂದು ಯೋಚಿಸಬೇಕೆಂದಾದಾಗ ನನ್ನ ಮನಸ್ಸು ರೋಧಿಸತೊಡಗುತ್ತದೆ. ಎಲ್ಲರ ಹೃದಯದಲ್ಲೂ ನನಗೊಂದು ವಿಶೇಷ ಸ್ಥಾನವಿರಲೆಂದು ಬಯಸುವ ಮನಸ್ಸು, ಸುಲಭವಾಗಿ, ಜನ್ಮಸಿದ್ಧ ಹಕ್ಕಾಗಿ ದೊರೆಯಲೇಬೇಕಾದ ಮಗಳ ಹೃದಯದಲ್ಲಿನ ವಿಶೇಷ ಸ್ಥಾನವನ್ನು ಬಯಸಿ ಕೊರಗುತ್ತದೆ. ಛೇ! ಈ ಮನಸ್ಸನ್ನು ಮುದ್ದಿಸುವುದೋ, ಗದರಿಸುವುದೋ ಅರ್ಥವೇ ಆಗದೇ ಒದ್ದಾಡಿಬಿಡುತ್ತೇನೆ. ತೀರ ಇನ್ನು ಇದರ ತಾಳಕ್ಕೆ ಕುಣಿಯಲಾರೆನೆಂದು ಗಟ್ಟಿಯಾಗಿ ಕುಳಿತರೆ, ಸ್ವಲ್ಪ ಹೊತ್ತು, ಮತ್ತೆ ಬರುತ್ತದೆ ಲಲ್ಲೆಗರೆಯುತ್ತಾ...ಬಿಟ್ಟು ಹೋದ ಪ್ರೇಯಸಿಯು 'ಮಿಸ್ ಕಾಲ್ 'ಕೊಟ್ಟಂತೆ ಭಾಸವಾಗುತ್ತದೆ.ಮರಳುತ್ತೇನೆ.ಆಮೇಲೆ ಯಥಾಪ್ರಕಾರ ಮತ್ತದೇ ಹಳೇ ರಾಗ.
            ಹೇಳಿಕೊಂಡರೆ ತಪ್ಪಾಗುತ್ತದೆಂದು ಗೊತ್ತು. ಆದರೂ ನಾನು ಪೂರ್ತಿ ವ್ಯಕ್ತಿತ್ವವನ್ನು ಕಳೆದುಕೊಂಡು, ಇವರನ್ನ, ಮಗಳನ್ನ ಅವರೆಂದರೆ ನಾನೇ ಎಂಬಂತೆ ಪ್ರೀತಿಸಿಕೊಂಡು ಬಂದಿದ್ದೆಲ್ಲ ಲೆಕ್ಕಕ್ಕಿಲ್ಲವಾ ಹಾಗಾದರೆ? ನೆನೆಸಿಕೊಳ್ಳತೊಡಗಿದರೆ ಕಣ್ತುಂಬಿ ಬರುತ್ತದೆ. ಬೇರೆ ಏನೂ ಉಪಯೋಗವಿಲ್ಲ. ಇವರೆಲ್ಲ ಆಡಿಕೊಂಡು ನಗುತ್ತಾರೆ ಪ್ರವಾಹ ಬರುತ್ತದೆ ಅಳಬೇಡ ಎಂದು. ಮೂರು ಹೊತ್ತು ಕೂಳು ಬೇಯಿಸಿಕೊಂಡು,ಇವರೆಲ್ಲ ನನ್ನನ್ನು ಒಂಟಿ ಮಾಡಿ ಹೊರಟಾಗಿನಿಂದ ಮನೆಗೆ ಮರಳುವವರೆಗೂ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಾಯುದಿಲ್ಲವೇ? ಸೌಖ್ಯವಾಗಿ ಮನೆಗೆ ಮರಳಿದರೆ ಸಾಕು ಎಂದುಕೊಳ್ಳುತ್ತಾ, ನನ್ನ ಪ್ರತೀ ಕೆಲಸದೊಂದಿಗೆ ಇವರ ಒಳಿತನ್ನೇ ತಳುಕು ಹಾಕಿಕೊಂಡು ಕುಳಿತಿರುತ್ತೇನಲ್ಲ ಇದೆಲ್ಲ ಇವರಿಬ್ಬರಿಗೂ ಅರ್ಥವೇ ಆಗುವುದಿಲ್ಲ.
ನಾನೇನೋ ಮಗಳನ್ನು ಸ್ನೇಹಿತೆಯಂತೆ ಕಾಣಬೇಕೆಂದೇ ಬಯಸುತ್ತೇನೆ. ಆದರೆ ಅಮ್ಮ ಕೂಡ ನನ್ನ ವಯಸ್ಸನ್ನು ದಾಟಿ ಬಂದಿದ್ದಾಳೆ ಎಂದು ಅವಳಿಗೆ ಅನಿಸುವುದಿಲ್ಲವೋ ಏನೋ. ಅಥವಾ ಅವಳಿಗೂ ಅನಿಸಿರಬಹುದು, ನಮ್ಮಿಬ್ಬರದು ಹೋಲಿಕೆಯಿಲ್ಲದ ವ್ಯಕ್ತಿತ್ವ ಹೇಳಿಕೊಂಡರೂ ಉಪಯೋಗವಿಲ್ಲವೆಂದು. ಅಸಲಿಗೆ ನನಗೊಂದು ವ್ಯಕ್ತಿತ್ವವಿದೆ ಎಂಬುದೇ ಅವಳಿಗೆ ಆಶ್ಚರ್ಯದಾಯಕ ವಿಷಯವೆನಿಸಬಹುದು.ಇನ್ನು ಅವಳು ನನ್ನನ್ನು ಹೋಲುವುದು ಸಾಧ್ಯವಿದೆಯೇ? ಯಾಕೆ ಹೀಗಾಗುತ್ತದೋ ಗೊತ್ತಿಲ್ಲ. ಅವರಿಗೊಂದು ಸ್ವಂತಿಕೆ ಅಂತ ಬರುವ ಮೊದಲೇ,ಅಥವಾ ಅದು ಬರದೆಯೇ ಇದ್ದರೂ ಪ್ರೀತಿಸಿದ, ಪ್ರೀತಿಸುತ್ತಲೇ ಇರುವ ತಾಯಂದಿರ ವ್ಯಕ್ತಿತ್ವದ ಇರುವಿಕೆ ಅವರ ಅರಿವಿಗೆ ಬರುವುದೇ ಇಲ್ಲವೇಕೆ?! ಅಪ್ಪನ ಬಗ್ಗೆ ಭಯವಾದರೂ ಇದೆ. ಹಿಂದಿನಿಂದ ಬೈದರೂ, ಎದುರೆದುರೇ ಆಡಿ ನೋಯಿಸುವುದಿಲ್ಲ. ನನಗಾದರೆ ಹಾಗಲ್ಲ, ಬಂದವರೆದುರು ಕೂಡ ನನ್ನ ಬಲಹೀನತೆಗಳನ್ನು ಆಡಿಕೊಳ್ಳಬಹುದು.ಅದನ್ನು ಸಲಿಗೆಯೆನ್ನುವುದೋ ಅಥವಾ ನಾನಷ್ಟು ಹಗುರವಾಗಿ ಹೋಗಿಬಿಟ್ಟೆ ಎಂದುಕೊಳ್ಳಲೋ ಗೊತ್ತಾಗುವುದಿಲ್ಲ. ನನಗಂತೂ ಸಕಾರತ್ಮಕವಾಗಿ ಯೋಚಿಸಲು ಪ್ರಯತ್ನಿಸಿ ಸಾಕಾಗಿ ಹೋಯಿತು. ಸ್ವಂತದ್ದು ಅಂತ ಒಂದು ಜೀವನ ಬದುಕದೇ ಕಳೆದುಬಿಟ್ಟೆ ಎನಿಸಿದಾಗೆಲ್ಲಾ ಸಂಕಟವಾಗುತ್ತದೆ. ಆಗೆಲ್ಲ ಇವರಿಗಾಗಿ ಬದುಕುವುದೇ ಒಂದು ಸಂಭ್ರಮವೆನಿಸುತ್ತಿತ್ತು.ಇವರಿಗಾಗಿ ಮಾಡಿದ ಯಾವ ಕೆಲಸವನ್ನೂ ಕರ್ತವ್ಯವೆಂದು ಮಾಡಿಲ್ಲ ನಾನು. ತುಂಬ ಪ್ರೀತಿಯಿಂದ, ಇಷ್ಟಪಟ್ಟುಕೊಂಡೇ ಮಾಡಿದೆ.ಆದರೆ ಈಗೀಗ ಎಲ್ಲರ ದಿವ್ಯ ನಿರ್ಲಕ್ಷ್ಯದ ಮಧ್ಯೆ ಹಾಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ ನನಗೆ.
           ನಾನೂ ಮನುಷ್ಯಳಲ್ಲವೇ ಎಲ್ಲರಂತೆ! ತಾಯಿಯೆಂದರೆ ಎಲ್ಲವನ್ನೂ ಮಕ್ಕಳ ಒಳಿತಿಗಾಗಿ ಮುಡಿಪಿಡಬೇಕು, ಹೆಂಡತಿಯೆಂದರೆ ತನ್ನ ಸುಖವನ್ನು ಗಂಡನ ಸಂತೋಷದಲ್ಲೇ ಕಾಣಬೇಕು ಎಂಬುದೆಲ್ಲ ಸರಿ. ಆದರೆ ಇಷ್ಟೆಲ್ಲ ಮಾಡಿದ ಮೇಲೆಯೂ ಗಂಡನಿಗೆ ಮಕ್ಕಳಿಗೆ ಇಂಥ ಪ್ರೀತಿಯ ಬೆಲೆಯೇ ತಿಳಿಯದೇ ಹೋದರೆ, ನನಗೂ ಒಂದು ಮನಸ್ಸಿದೆ ಎಂಬುದು ಕೂಡ ಅವರ ಊಹೆಗೆ ನಿಲುಕಲಾರದು ಎಂದಾದರೆ ಇನ್ನು ಮೇಲೆಯೂ ನಾನು ಎಲ್ಲವನ್ನೂ ಕರ್ತವ್ಯವೆಂದಲ್ಲದೇ ಪ್ರೀತಿಯಿಂದ ಮಾಡಲಾದೀತೆ ಎನಿಸುತ್ತದೆ.
       ಬಹುಶಃ ನನ್ನ ಮತ್ತು ನನ್ನ ಅಪ್ಪನ ಬಗ್ಗೆ ನನ್ನ ಅಮ್ಮನಿಗೂ ಹೀಗೆಯೇ ಅನಿಸಿದ್ದಿರಬೇಕು. ಅಮ್ಮನಿಗೂ ಒಂದು ಮನಸ್ಸಿತ್ತು ಎನ್ನಿಸಿದಾಗ,ನನ್ನ ದುಃಖಕ್ಕಿಂತ ಅಮ್ಮನಿಗೆ ನಾನು ಕೊಟ್ಟ ದುಃಖವೇ ಹೆಚ್ಚೆಂದು ಅರಿವಾಗಿ ಇನ್ನಷ್ಟು ದುಃಖವಾಗುತ್ತದೆ.

Saturday 14 November, 2009

ಇವರಿಲ್ಲದ ಮೇಲೆ...


     ಬೆಳಗಾದರೆ ಇವರ ಕಾಟ.ಇತ್ತೀಚೆಗೆ ಯಾಕಾದರೂ ಬೆಳಗಾಗುತ್ತದೋ ಎನಿಸುತ್ತಿದ್ದದ್ದು ಸುಳ್ಳಲ್ಲ. ದೇವರ ಮುಖ ನೋಡಬೇಕು ಎಂದೆಲ್ಲ ಹಿರಿಯರು ಹೇಳಿಕೊಟ್ಟಿದ್ದನ್ನ ಎಂದಿಗೂ ಪಾಲಿಸಿಲ್ಲ. ಆದರೂ ನನಗೆ ಇವರ ಮುಖ ನೋಡಲು ಇಷ್ಟವಿರುತ್ತಿರಲಿಲ್ಲ. ಎನೇನೋ ನೆನಿಸಿಕೊಳ್ಳುತ್ತ ಮಜವಾಗಿ ಏಳಬೇಕೆಂದು ಆಸೆ.ನನ್ನಾಸೆ ಬಾಲಿಶ ಎಂದು ತಿಳಿದವರು ಹೇಳಬಹುದೇನೋ,ಆದರೆ ನಾನು ಅದರ ಬಗ್ಗೆಯೆಲ್ಲ ಯೋಚಿಸುವುದೇ ಇಲ್ಲ, ಅಂಥವರನ್ನು ತಿಳಿದವರೆಂದು ಒಪ್ಪಿಕೊಳ್ಳಲು ನನ್ನ ಮನಸ್ಸು ಬಿಡುವುದೂ ಇಲ್ಲ.       
        ನಮ್ಮವರಿಗೆ ಅದರ ಬಗ್ಗೆಯೆಲ್ಲ ಕಾಳಜಿ ಜಾಸ್ತಿ. ಅದೇ ವಿಷಯಕ್ಕೆ ಆಗಾಗ ಒಂದು ಚಿಕ್ಕ ಬೆಂಕಿ ಹತ್ತಿ ಉರಿದು ರಾತ್ರಿಯೊಳಗೆ ಆರಿ ಹೊಗುತ್ತಿದ್ದುದು ನಿಜ. ಆಗೆಲ್ಲ ಬೆಂಕಿ ಆರಿಸುತ್ತಿದ್ದುದು ಇವರೇ ಅಲ್ಲವೆ? ನನಗೆ ತುಂಬ ಅಹಂಕಾರವಿತ್ತು. ಪಾಪ! ಚಿಕ್ಕಂದಿನಿಂದ ಬೆಳೆಸಿಕೊಂಡು ಬಂದ "ನಾನು ಗಂಡಸು" ವನ್ನು ಹೆಂಡತಿಯ ಮುಂದೆ ಬಿಡಬೇಕಾಗಿ ಬಂದಾಗ ಇವರಿಗೆ ಎಷ್ಟು ಅವಮಾನವಾಗಿರಬಹುದು? ನಾನು ಅದನ್ನೆಲ್ಲ ಯೋಚಿಸಲೇ ಇಲ್ಲ. ನಾನಾಯಿತು, ನನ್ನ ಕನಸಾಯಿತು ಎಂದು ಇದ್ದು ಬಿಡುತ್ತಿದ್ದೆ. ನನ್ನ ಉದಾಸೀನವನ್ನು ಇವರು ಪ್ರಶ್ನಿಸುವಂತಿರಲಿಲ್ಲ. ವಾದಕ್ಕೆ ನಿಂತರೆ ಅವರ ಜನ್ಮ ಜಾಲಾಡಿ, ಅವರ ಚಿಕ್ಕ ಚಿಕ್ಕ ಗುಟ್ಟುಗಳನ್ನೆಲ್ಲ ಬಟ್ಟ ಬಯಲು ಮಾಡಿ, ಎಂದೋ ಮಾಡಿದ, ಯಾರಿಗೂ ಹೇಳದ ತಪ್ಪುಗಳನ್ನೆಲ್ಲ ನಿಂತ ನಿಲುವಿನಲ್ಲೇ ಗಾಳಿಗೆ ತೂರಿ ಬಿಡುತ್ತಿದ್ದೆ. ಅದಕ್ಕೆ ಹೆದರುತ್ತಿದ್ದರೋ ಅಥವಾ ’ಸಗಣಿಯವನೊಡನೆ ಗುದ್ದಾಟ....’ ಎಂಬ ನಿಲುವೋ ಗೊತ್ತಾಗಲಿಲ್ಲ ಕೊನೆಗೂ...
     ಅವರು ನನ್ನನ್ನು ಮಗುವಿನಂತೆ ನೋಡಿಕೊಂಡದ್ದೇನೋ ಸತ್ಯ. ನಾನು ಮಾಡಿದ್ದಾದರೂ ಕಮ್ಮಿ ಇತ್ತಾ?ಹಿಂದಿನ ವರ್ಷ ಇವರಿಗೆ ಮಲಗಿದಲ್ಲಿಂದ ಏಳಲೇಬಾರದೆಂದು ಅಧಿಕಾರಯುತ ದನಿಯಲ್ಲಿ ಡಾಕ್ಟರ್ ಹೇಳಿದಾಗ ಇವರೂ ಅಷ್ಟೇ ಅಧಿಕಾರಯುತವಾಗಿ ಅಮೋಘ ೫ ತಿಂಗಳು ನನ್ನಿಂದ ಸೇವೆ ಪಡೆದಿಲ್ಲವೇ? ಆಮೇಲೂ ಅದನ್ನೇ ನನ್ನಿಂದ ಬಯಸಿದಾಗ ಮಾತ್ರ ನಾನು ಸಿಡುಕಾಡತೊಡಗಿದ್ದು. ನಾನು ಹಾಗೆ ಮಾಡಬಾರದಿತ್ತೋ ಎನೋ... ಈಗ ಯೋಚಿಸಿ ಫಲವಿಲ್ಲ. ಅಪರೂಪಕ್ಕೆ ಸಿಗುವ ವಿಶ್ರಾಂತಿ ಖುಶಿ ಕೊಡುತ್ತದೆ. ಆದರೆ ತೀರ ಕೆಲಸವಿಲ್ಲದೇ ೫ ತಿಂಗಳು ಮಲಗುವುದು ಅವಿರತ ದುಡಿಮೆಗಿಂತ ಕಷ್ಟವಲ್ಲವೇ? ಆದರೂ ಇವರು ಮಲಗಿರಲು ಬಯಸುತ್ತಿದ್ದರೆಂದರೆ ಅವರಿಗೆ ಮುರಿದ ಕಾಲು ಅಷ್ಟು ತೊಂದರೆ ಕೊಡುತ್ತಿತ್ತೋ ಏನೋ. ಅದನ್ನೆಲ್ಲ ನಾನು ನಾಟಕ ಎಂದುಕೊಂಡುಬಿಟ್ಟೆ. ತುಂಬ ದುಃಖವಾಗುತ್ತಿದೆ. ಹೇಳಿಕೊಳ್ಳಲು ಇವರಿಲ್ಲ. ದುಃಖವನ್ನೆಲ್ಲ ಸಿಟ್ಟಾಗಿಸಿ ಅಡಿಗೆ ಮನೆಯಲ್ಲಿ ಪಾತ್ರೆಗಳ ಮೇಲೆ ನನ್ನ ಪೌರುಷ ತೋರಿಸಿದರೂ ಸಾಕಿತ್ತು, ಇವರು ಅರ್ಥ ಮಾಡಿಕೊಂಡು ನನ್ನನ್ನು ತಣ್ಣಗಾಗಿಸಲು ಏನೇನು ಮಾಡಬೇಕೊ ಅದನ್ನೆಲ್ಲ ಮಾಡುತ್ತಿದ್ದರು. ನಾನು ""Do the needful" ಎಂದು ಹೇಳುವುದೂ ಬೇಕಿರಲಿಲ್ಲ.
     ಅಸಲಿಗೆ ಇವರು ಈಗ ಮನೆ ಬಿಟ್ಟು ಹೋಗಿದ್ದು ನನ್ನ ಕಾಟ ತಡೆಯಲಾಗದೆಯೆ? ಅಥವಾ ಬೇರೆ ಏನಾದರೂ ಕಾರಣವಿರಬಹುದಾ? ನನಗೇಕೆ ಇಷ್ಟು ಅಪರಾಧಿ ಪ್ರಜ್ಞೆ ಕಾಡಬೇಕು? ಅಷ್ಟಕ್ಕೂ ಸಂಸಾರವೆಂದ ಮೇಲೆ ಒಂದು ಮಾತು ಬರುತ್ತದೆ ಒಂದು ಮಾತು ಹೋಗುತ್ತದೆ. ಅದೆಲ್ಲ ಸಹಜವೆಂದು ಸ್ವೀಕರಿಸಲೇಬೇಕಲ್ಲವೆ? ನನ್ನೊಂದಿಗೆ ೩೬ ವರ್ಷ ಸಂಸಾರ ಮಾಡಿದ ಇವರಿಗೆ ನನ್ನನ್ನು ಅಷ್ಟು ಅರ್ಥ ಮಾಡಿಕೊಳ್ಳಲೂ ಆಗಲಿಲ್ಲವೇ ಹಾಗಾದರೆ? ಒಂದು ಮಾತು ಬಂದು ಒಂದು ಮಾತು ಹೋಗಿದ್ದರೆ ಹೀಗಾಗುತ್ತಿರಲಿಲ್ಲವೇನೋ. ಅವರಿಂದ ಬಂದ ಮಾತಿಗಿಂತ ನನ್ನ ಕಡೆಯಿಂದ ಹೋದ ಮಾತುಗಳೇ ಹೆಚ್ಚಾಗಿದ್ದಕ್ಕೆ ಹೀಗಾಯಿತೋ ಏನೋ... ಮನಸ್ಸು ಚುಚ್ಚುತ್ತಿದೆ. ಕಾರಣ ಏನಾದರೂ ಇರಲಿ. ನನಗೆ ನಮ್ಮವರು ಬಂದರೆ ಸಾಕಾಗಿದೆ. ಇಷ್ಟು ವರ್ಷಗಳಲ್ಲಿ ಇರುತ್ತಿದ್ದ ಅಗತ್ಯಕ್ಕಿಂತ  ಈಗ ಮುಪ್ಪಿನಲ್ಲೇ ಅವರ ಆಸರೆ ತುಂಬ ಅನಿವಾರ್ಯ ಎನಿಸುತ್ತಿದೆ.
      ಮಗಳು ನನ್ನ ಹೊಟ್ಟೆಯಲ್ಲೇ ಹುಟ್ಟಿದವಳು, ಆದರೂ ಅವಳು ಇವರಷ್ಟು ಹತ್ತಿರವೆನಿಸುವುದಿಲ್ಲ. ಅದೂ ಮದುವೆಯಾಗಿ ಹೋದ ಮೇಲಂತೂ ನಮ್ಮದು ಬೇರೆ ಸಂಸಾರ, ಅವಳದು ಬೇರೆ ಎನಿಸಿಬಿಟ್ಟಿದೆ. ಪ್ರೀತಿಯೇನೂ ಕಡಿಮೆಯಾಗಿಲ್ಲ. ಆದರೆ ಮೊದಲಿನಂತೆ ಅವಳನ್ನು ಬೈಯ್ಯಲಾಗುವುದಿಲ್ಲ. ’ಅಪರೂಪಕ್ಕೆ ಬಂದರೂ ಅಮ್ಮ ಬೈಯ್ಯುತ್ತಾಳಲ್ಲ’ ಎಂದುಕೊಂಡಾಳೆಂದು ಸಂಕೋಚವಾಗುತ್ತದೆ. ಮನಸು ಬಿಚ್ಚಿ ಮಾತನಾಡಲಾಗುವುದಿಲ್ಲ. ಅವಳು ತನ್ನ ಗಂಡ ಮಗುವಿನೊಂದಿಗೆ ಬೇರೆಯದೇ ಲೋಕದಲ್ಲೆಂಬಂತೆ ಇರುತ್ತಾಳೆ. ಮೊದಲಿನಿಂದಲೂ ಅವಳಿಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ.ತಡವಾಗಿ ಮನೆಗೆ ಬರಬೇಡ ಎನ್ನುತ್ತೇನಲ್ಲ, ಯಾವಗಲೂ ಫೊನಲ್ಲೇ ಇರಬೇಡ ಎನ್ನುತ್ತೇನಲ್ಲ. ಗೊತ್ತು, ಕಹಿ ಮಾತಿನಿಂದ ಒಳ್ಳೆಯದನ್ನು ಹೇಳುವವರು ಯಾರಿಗೆ ತಾನೆ ಇಷ್ಟವಾಗುತ್ತಾರೆ ಹೇಳಿ? ಅಪ್ಪನೇ ತುಂಬ ಒಳ್ಳೆಯವರು, ಅಮ್ಮ ಎಷ್ಟು ಬೈದರೂ ತಿರುಗಿ ಬೈಯ್ಯುವುದಿಲ್ಲ, ತುಂಬ ಸಹನೆಯಿದೆ ಎಂದೆಲ್ಲ ನನ್ನ ಮುಂದೆ ಹೇಳಿ ನನ್ನಿಂದ ಬೈಯ್ಯಿಸಿಕೊಂಡಿದ್ದಾಳೆ ಕೂಡ! ಅಷ್ಟು ಒಳ್ಳೆಯ ಅಪ್ಪ ಮನೆ ಬಿಟ್ಟು ಹೋಗಿದ್ದಾರೆಂದರೆ ಅವಳು ಬೈಯ್ಯುವುದು ನನ್ನನ್ನೇ.
     ನನಗೇನೋ ಅನುಮಾನವಾಗುತ್ತಿದೆ, ಇವರು ಮಗಳ ಮನೆಯಲ್ಲೇ ಇರಬಹುದಾ ಅಂತ? ಅದನ್ನು ಕೇಳುವುದಾದರೂ ಹೇಗೆ? ಅಹಂ ಬಿಟ್ಟು ಮಗಳನ್ನು ಕೇಳಲೂ ಮನಸ್ಸು ಒಪ್ಪುತ್ತಿಲ್ಲ. ಆಗಲೇ ೩ ದಿನ ಆಗಿದೆ. ಎಂದಿಗೂ ಇವರನ್ನು ಬಿಟ್ಟು ೨ ದಿನ ಕೂಡ ಇದ್ದದ್ದೇ ಇಲ್ಲ ನಾನು. ತವರಿಗೆ ಹೋದರೂ ಇವರಿಗೆ ಅಡಿಗೆ ಊಟಕ್ಕೆ ತೊಂದರೆ ಆಗುತ್ತದೆಯೆಂದು ತವರಿನವರನ್ನೇ ಇಲ್ಲಿಗೆ ಕರೆಯುತ್ತಿದ್ದೆ. ಇಲ್ಲದಿದ್ದರೆ ಇವರನ್ನೂ ಕರೆದುಕೊಂಡೇ ಹೋಗುತ್ತಿದ್ದೆ.ಆಗೆಲ್ಲ ನನ್ನ ಮನಸ್ಸು ಎಷ್ಟು ಖುಷಿಪಡುತ್ತಿತ್ತು.ನಾನು ಒಬ್ಬರಿಗೆ ಅನಿವಾರ್ಯ ಎಂಬ ಭಾವ ಎಷ್ಟು ಹಿತ ಕೊಡುತ್ತದೆ ಅಲ್ಲವೆ? ಎಲ್ಲರ ಬಳಿ ಅದನ್ನೇ ಹೇಳಿಕೊಂಡು ಬೀಗುತ್ತಿದ್ದೆ. ಇವರಿಗೆ ನಾನಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂಬಂತೆ ಮಾತಡುತ್ತಿದ್ದೆ.ಈಗ! ಎಲ್ಲಿ ಹುಡುಕುವುದು ಇವರನ್ನ? ನಾನು ಬುದ್ಧಿ ಕಲಿತಿರುತ್ತೇನೆ ಇಷ್ಟೊತ್ತಿಗೆ ಎಂಬುದು ಇವರ ಮನಸ್ಸಿಗೆ ಹೇಗಾದರೂ ಗೊತ್ತಾಗಿ ಮರಳಿ ಬರಬಾರದೇ? ನನ್ನನ್ನು ಬಿಟ್ಟಿರಲು ಮನಸ್ಸಾದರೂ ಹೇಗೆ ಬಂದೀತು ಇವರಿಗೆ? ಬಹುಶಃ ಮಗಳು ಚೆನ್ನಾಗಿ ಉಪಚರಿಸಿ ನನ್ನನ್ನು ಮರೆಸಿಬಿಟ್ಟಿರಬಹುದೇನೊ? ಛೇ! ಈ ಮುದಿ ಮನಸ್ಸಿಗೆ ಯಾಕದರೂ ಇಷ್ಟು ಅಹಂಕಾರವೋ ಗೊತ್ತಿಲ್ಲ. ಗಂಡ ಮಕ್ಕಳ ಮುಂದೆಯೂ ಸೋಲಲಾರದು.
   ನಾನೇನೂ ಕೇಳದೇಯೇ ಮರಳಿ ಬರುತ್ತಾರಲ್ಲ ನಮ್ಮವರು? ಇವರಿಲ್ಲದ ಮೇಲೆ... ನಾನು ಯಾರೊಡನೆ ಜಗಳವಾಡಬೇಕು? ಇವರಿಲ್ಲದ ಮೇಲೆ... ನಾನು ಯಾರಿಗಾಗಿ ತವರಿಗೆ ಹೋಗದೇ ಉಳಿಯಬೇಕು? ಇವರಿಲ್ಲದ ಮೇಲೆ... ನಾನು ಯಾರಿಗಾಗಿ ಬದುಕಬೇಕು?

Monday 9 November, 2009

ಬಿಟ್ಟು ಹೋದವರ ದುಃಖ




         ಉರಿ ಬಿಸಿಲ ಮಧ್ಯಾಹ್ನ ಸ್ಮಶಾನಕ್ಕೆ ಹೋಗಿ ಹೆಣದ ಖಮಟು ವಾಸನೆ ತಿಳಿಯುತ್ತಲೇ ಇಲ್ಲ ಎಂಬಂತೆ ಕೂತವನ ಮುಖದಲ್ಲಿ ಪೂರ್ತಿ ಬತ್ತಿ ಹೋದ ದುಃಖ ಪ್ರೇತ ಕಳೆಯನ್ನು ತಂದಿತ್ತು. ಇವನು ಹುಟ್ಟಿದ ಮೇಲೆ 'ವಿಷಾದ’ ಹುಟ್ಟಿತೇನೋ ಎಂಬಂತೆ ಭಾಸವಾಗುತ್ತಿತ್ತು. ಅವಳು ನೆನಪಾಗುತ್ತಿದ್ದಳು ಮರೆಯಲೆತ್ನಿಸಿದಷ್ಟೂ ನೆನಪಾಗುವ ಗಾಯದಂತೆ! ಆದರೂ ಇವನು ಅವಳನ್ನು ಹಾಗೆಂದು ದೂರಲಾರ.ಅದು ಪ್ರೀತಿ! ಅವನು ಅವಳನ್ನು ಪ್ರೀತಿಸಿದ...
       ನನ್ನನ್ನು ಜೀವಂತ ಸುಡುತ್ತಿರುವ ದುಃಖಕ್ಕಿಂತ ಇಲ್ಲಿ ಹೆಣಗಳನ್ನು ಸುಡುತ್ತಿರುವ ಬೆಂಕಿಯೇ ಪ್ರಾಣಕ್ಕೆ ಪ್ರಿಯವೇನೋ, ದಹಿಸುವ ಬೆಂಕಿಯನ್ನಾದರೂ ಸಹಿಸಿಯೇನು ಈ ದುಃಖವನ್ನಲ್ಲ ಎಂದುಕೊಂಡವನ ಕರುಳನ್ನ ಯಾರೋ ಕಿವುಚಿದಂತಾಯಿತು. ಮತ್ತೆ ಮತ್ತೆ ಉಕ್ಕಿ ಬರುವ ದುಃಖದ ಬಗ್ಗೆ ಆಶ್ಚರ್ಯವೋ, ಅಸಹ್ಯವೋ ಏನೋ ಗೊತ್ತಾಗದ ಭಾವ ಅವನಿಗೆ... ಎಷ್ಟು ಅತ್ತರೂ ಮುಗಿಯುವುದೇ ಇಲ್ಲವೇಕೆ ಈ ಕಣ್ಣೀರು? ಬಹುಶಃ ಒರತೆಯಿರಬೇಕು ಹೃದಯದಲ್ಲೊಂದು ಎನಿಸಿ ಜೀವವಿಲ್ಲದ ನಗುವೊಂದು ಸುಳಿದಾಡಿತು ಸ್ಮಶಾನದಲ್ಲಿ, ಸ್ಮಶಾನ ಮೌನದ ನಡುವೆ ಆರಲಿರುವ ದೀಪವೊಂದು ಜೋರಾಗಿ ಉರಿದಂತೆ...!
       ಬದುಕೆಂಬುದು ಭ್ರಮೆಯಲ್ಲವೆಂಬುದು ಅವನಿಗೂ ಗೊತ್ತಿತ್ತು. ಒಂದೇ ಕಡೆಯಿಂದ ಹರಿಯುತ್ತಿರುವ ಪ್ರೀತಿಗೆ ಅರ್ಥವಿಲ್ಲವೆಂದಲ್ಲ, ಆದರೂ ಸಾಗರವೇ ಇಲ್ಲದಿದ್ದರೆ ನದಿಯ ಹರಿಯುವಿಕೆಗೆ ಸಾರ್ಥಕತೆ ಇದೆಯೆ? ಆದರೂ ತನ್ನ ಹರಿಯುವಿಕೆಯನ್ನು ತಡೆಯಲು ನದಿಗಾದರೂ ಸಾಧ್ಯವಾದೀತೆ? ಬುದ್ಧಿ ಹೇಳುತ್ತದೆ. ಹೃದಯ ನಿಲ್ಲಬೇಕಲ್ಲ! ಗಟ್ಟಿ ಮನಸ್ಸು ಮಾಡಿಕೋ ಎನ್ನುತ್ತಾರೆ. ಮೃದುತ್ವವೇ ಅದರ ಗುಣ. ಗಟ್ಟಿಯಾಗೆಂದರೆ...? ಅವಳು ಇವನೆಡೆಗೆ ಹರಿವ ನದಿಯಾಗಲೂ ಇಲ್ಲ. ನದಿಯಾಗಿ ಹರಿದು ಹೋದರೂ ಇವನನ್ನು ಸೇರಿಸಿಕೊಳ್ಳುವ ಸಾಗರವಾಗಲೂ ಇಲ್ಲ.ಇವರಿಬ್ಬರ ನಡುವೆಯೇ ಹುಟ್ಟಿದ ಪ್ರೀತಿಗೆ ಇವನು ಹೆತ್ತಮ್ಮ. ಅವಳು ಮಲತಾಯಿ. ಪ್ರೀತಿಯನ್ನು ಇವನು ಪ್ರೀತಿಸಿದಷ್ಟು ಅವಳು ಪ್ರೀತಿಸಲಾಗಲಿಲ್ಲ.ಅದು ಅವಳ ತಪ್ಪಾ? ಹಾಗೆಂದು ಅವನಂತೂ ಎಂದಿಗೂ ಹೇಳಲಾರ.ಅದು ಪ್ರೀತಿ! ಕೊನೆಗೂ ತನ್ನದೇ ತಪ್ಪೇನೋ ಎಂದು ನೊಂದುಕೊಳ್ಳುತ್ತದೆ ಪ್ರೀತಿ.
       ತಾಯಿಯಂಥ ಹೆಣ್ಣೊಂದು ಬಂದು ಇವನನ್ನು ಮಡಿಲಿಗೆ ಹಾಕಿಕೊಂಡು ಮಲಗಿಸುವವರೆಗೆ ಇರಬಹುದು ಇಷ್ಟೊಂದು ದುಃಖ. ಆದರೆ ಹಾಗೆಲ್ಲ ಯೋಚಿಸಲಾದರೂ ಸಾಧ್ಯವೇ ಈಗ?ಗೊತ್ತು, ಕಾಲ ಎಲ್ಲಕ್ಕೂ ಮದ್ದೆಂದು.ಆದರೆ ಈ ಕ್ಷಣ ಹೃದಯ ಒಡೆದು ಹೋಗುತ್ತಿದೆ ಎಂದೆನಿಸುವಾಗ ಏನು ಮಾಡುವುದು?ಅದಕ್ಕೇ ಸ್ಮಶಾನಕ್ಕೆ ಬಂದಿದ್ದು. ದುಃಖವಾದಾಗ ಮರೆಯುವುದಕ್ಕಾಗಿ ವಾಸಸ್ಥಳ ಬದಲಿಸಬಯಸಿ ಪ್ರವಾಸಕ್ಕೆಲ್ಲ ಹೋಗುತ್ತಾರಲ್ಲ ಹಾಗೆ! ಎಲ್ಲಿಗೇ ಹೋದರೂ ಹಿಂಬಾಲಿಸುವ ನಾಯಿಯಂಥಹದು ತನ್ನ ಮನಸ್ಸು ಎನಿಸಿತವನಿಗೆ. ನೆರಳಾದರೂ ಕತ್ತಲಲ್ಲಿ ಬಿಟ್ಟು ಹೋಗುತ್ತದೆ.ಈ ಮನಸ್ಸು? ಊಹುಂ...
       ಅಪರಾಧಿ ಪ್ರಜ್ಞೆ ಇವನಿಗೆ.ಅವಳು ಬಿಟ್ಟು ಕೂಡ ಹೋಗಲಿಲ್ಲ. "ಹೋಗು, ನೀನು ಬೇಡ ನನಗೆ" ಎಂದು ಹೇಳುವಷ್ಟು ಗಮನ ಅವಳಿಗಿದ್ದಿದ್ದರೆ ಇವನು ಅವಳನ್ನು ಕನಸಲ್ಲೂ ಪೂಜಿಸುತ್ತಿದ್ದ.ಅವಳಿಗೆ ಅವನು ತನ್ನ ಜೀವನದ ಎಷ್ಟು ದೊಡ್ಡ ಪಾತ್ರ ಎಂಬುದು ಗೊತ್ತೇ ಆಗಲಿಲ್ಲ. ಎಲ್ಲರಿಗೂ ಆಗಿ ಉಳಿದರೆ ಅವಳ ಸಮಯದಲ್ಲಿ ಇವನಿಗೆ ಕೊಂಚ ಪಾಲು.ಅವಳ ಪ್ರಪಂಚದಿಂದ ಎಲ್ಲರೂ ಎದ್ದು ಹೋಗಿ ”ಬಿಕೋ’ ಎನಿಸತೊಡಗಿದಾಗ ಇವನಿಗೆ ಸ್ವಾಗತ. ಇವನ ಜಗತ್ತು ಅವಳಿಲ್ಲದೇ ಯವಾಗಲೂ”ಬಿಕೋ’ ಎನ್ನುತ್ತದೆ ಅವಳಿಗೆ ಅದೆಂದಿಗೂ ಅರ್ಥವಾಗುವುದೇ ಇಲ್ಲ. ಅರ್ಥವಾಗುವುದು ಇವನಿಗೂ ಬೇಕಿಲ್ಲ. ಏಕೆಂದರೆ ಅದು ಅರ್ಥವಾದ ದಿನ ಅವಳಿಗೆ ಖಂಡಿತ ನೋವಾಗುತ್ತದೆ ಎಂಬುದು ಇವನಿಗೆ ಗೊತ್ತು. ಅದೆಲ್ಲ ಅರ್ಥವಾಗದೆಯೇ, ಅವಳಿಗೆ ನೋವಾಗದೆಯೇ ಜೀವನ ಮುಗಿದು ಹೋಗಲೆಂದು ಆಶಿಸುತ್ತದೆ ಪ್ರೀತಿ.
        ಇವನು ಅವಳ ಜೀವನದಿಂದ ಎದ್ದು ಹೋದಾಗ ಅವಳಿಗೆ ಎಷ್ಟು ನೋವಾಗಬಹುದೆಂದು ಊಹಿಸಿಕೊಂಡು ಕರುಳು ಕಿತ್ತು ಬರುವಂತೆ, ನೆನೆ ನೆನೆದು ಅತ್ತಿದ್ದೆಲ್ಲ ಅವಳಿಗೆ ಎಂದಿಗೂ ಅರ್ಥವಾಗಲೇ ಇಲ್ಲ. ಯಾರು ಎಷ್ಟೇ ಸಲಹೆ ಕೊಟ್ಟರೂ, ನಾನೇ ಅವಳೆಂದುಕೊಂಡು ಪ್ರೀತಿಸಿದವನಿಗೆ ಅವಳನ್ನು ಬೇರೆಯಾಗಿ ನೋಡುವುದು ಒಂದು ಹಂತದಲ್ಲಿ ಸತ್ತೇ ಹೋಗುವಷ್ಟು ಸಂಕಟ ಕೊಟ್ಟಿತ್ತು. ಅದೆಲ್ಲ ಅವಳಿಗೆ ಎಂದಿಗೂ ತಿಳಿಯುವುದಿಲ್ಲ.ಅವಳಿಗೆ ತಾಯಾಗಿ, ಮಗುವಾಗಿ , ಪ್ರತಿಯಾಗಿ ಏನನ್ನೂ ಬಯಸದೇ ಪ್ರೀತಿಸಿದವನ ಪ್ರೀತಿಯ ಅಗಲುವಿಕೆ ಕೂಡ ಅವಳನ್ನು ಬದಲಾಯಿಸಲಾರದೆಂದರೆ, ಅವಳ ಬದುಕಿನಲ್ಲಿ ಇವನಿಗೆ ಇದ್ದ ಸ್ಥಾನವಾದರೂ ಎಷ್ಟಾಗಿತ್ತು? ಅವನು ಸತ್ತಾಗ ಅವಳಿಗೆ ನೋವಾಗುವುದಿಲ್ಲವೆಂದರೆ, ಬದುಕಿದ್ದಾಗ ಖುಷಿಯೂ ಆಗುವುದಿಲ್ಲವೆಂದು ತಾನೇ ಅರ್ಥ?! ಆದರೂ ಒಪ್ಪಲಾರದು ಪ್ರೀತಿ. ಇಲ್ಲ, ಅವಳಿಗೆ ನೋವಾಗುತ್ತದೆ ಎಂದೇ ಸುಳ್ಳಾಡುತ್ತದೆ ಮನಸು. ’ಪ್ರೇಮ ಕುರುಡು’ ತುಂಬ ಸತ್ಯವೆನಿಸಿತು ಮೊತ್ತ ಮೊದಲ ಬಾರಿಗೆ!
        ಆದರೂ ತನ್ನದೇ ತಪ್ಪಿರಬಹುದೆಂದು ಕೊರಗಿ ಮುದುಡಿಕೊಳ್ಳುತ್ತದೆ ಮನಸ್ಸು ಪದೇ ಪದೇ. ಅವಳು ತನ್ನ ಭಾವನೆಗಳು ಹೇಳದೆಯೇ ಅರ್ಥವಾದೀತೆಂದು ಭಾವಿಸಿರಬಹುದೆಂದು ಅವಳನ್ನು ಸಮರ್ಥಿಸುತ್ತದೆ ಮನಸ್ಸು. ಹೆತ್ತ ತಾಯಿ ತಂದೆಯ ಸಮಾಧಿಯ ಮೇಲಾದರೂ ಸರಿ, ಇವಳೊಡನೆ ಸಂಸಾರ ಕಟ್ಟಲೇಬೇಕೆಂದು ಹಾತೊರೆಯುತ್ತಿದ್ದ ಮನಸ್ಸು, ಕರುಳ ನಂಟಿಗೆ ದ್ರೋಹವೆಸಗಿದ್ದಕ್ಕೆ ಕೊರಗುತ್ತಿರಲೇ ಇಲ್ಲ. ಈಗ...ಅವಳಿಗೆ ನೋವಾದೀತೆಂದು,ಅವಳಿಗೆ ಆಗದಿರುವ ನೋವನ್ನು ತಾನೇ ಕಲ್ಪಿಸಿಕೊಂಡು ಸುಟ್ಟು ಸುಟ್ಟು ಸುಣ್ಣವಾಗುತ್ತಿದೆ ಹುಚ್ಚು ಮನಸ್ಸು. ಏನೆನ್ನುವುದು ಇದನ್ನ? ಪ್ರೀತಿಯಾ? ಅದನ್ನೇ ಏಕೆ ತಾಯ್ತಂದೆಗೆ ಕೊಡಲಾರೆಯೆಂದರೆ ಉತ್ತರ ಕೊಡಲಾರದೇ ಕಣ್ಣೀರಾಗುವ ಅಸಹಾಯಕ ಮನಸ್ಸನ್ನು ಬೈಯ್ಯುವುದಾದರೂ ಹೇಗೆ? ಆಕರ್ಷಣೆಯೆಂದರೆ ದೇವರು ಮೆಚ್ಚಲಾರನೇನೋ? ಅದು ದೇವರಿಗೆ ಬಿಟ್ಟ ವಿಷಯ. ಆದರೆ ಇವನ ಮನಸ್ಸಂತೂ ಒಪ್ಪಲಾರದು. ಆ ಪರಿ ಮೊಗೆಮೊಗೆದು ಕೊಟ್ಟ ಪ್ರೀತಿಗೆ ಇಟ್ಟ ಹೆಸರು ಯೌವ್ವನದ ಆಕರ್ಷಣೆಯೆಂದೇ? ಎಂದಿಗೂ ಸಹಿಸಲಾರದು ಮನಸ್ಸು. ಅದು ನಿಜವೋ ಸುಳ್ಳೋ ಯಾರಿಗೆ ಗೊತ್ತು? ಯಾರಿಗೆ ಬೇಕು?
       ಪ್ರೀತಿಯನ್ನು ಕಳೆದುಕೊಂಡವರಿಗೆ ಎಲ್ಲರಿಂದಲೂ ಒಂದು ಸಾಂತ್ವನವಾದರೂ ಸಿಗುತ್ತದೆ. ತೀರ ಅಸಹಾಯಕವಾಗಿ, ಅನಿವಾರ್ಯವಾಗಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರೀತಿಯನ್ನು ಬಿಟ್ಟು ಹೋದವರ ಸಂಕಟ ಯಾರಿಗೆ ಅರ್ಥವಾಗುತ್ತದೆ? ಜೊತೆಗೆ ಕಾಡುವ ಅಪರಾಧಿ ಪ್ರಜ್ಞೆ ಬೇರೆ. ನಾವು ಬಿಟ್ಟು ಬಂದವರ ಬದುಕನ್ನು ಯೋಚಿಸಿ ಮನಸ್ಸೆಷ್ಟು ಕೊರಗುತ್ತದೆಂಬುದು, ’ದ್ರೋಹಿ’ ಎಂದು ಕೈ ತೋರಿಸಿ ಚುಚ್ಚುವ ಗೆಳೆಯ ಬಳಗಕ್ಕೆ ತಿಳಿಯುವುದಾದರೂ ಹೇಗೆ?
      ಮಿಡಿವ ತಂತಿ ಹರಿದಾಗ ವೈಣಿಕನಿಗೆ ಮಾತ್ರ ನೋವಾಗುತ್ತದೆಯೇ?ನುಡಿವ ವೀಣೆಯ ನೋವು ಏಕೆ ಯಾರಿಗೂ ತಿಳಿಯುವುದೇ ಇಲ್ಲ?