Sunday 5 August, 2012

ಮೌನ ಉಳಿಯಿತು ಕವಿತೆಯಲ್ಲಿ...













ಆಹಾ! ಕಡಲ ತೀರದಲ್ಲಿ
ಜೊತೆಯಾಗಿ ಕುಳಿತಾಗ
ಮೌನ ಮಾತಾಡಿತು,
ನಿನ್ನ ಕೈಯ ಬಿಸುಪು
ಜಗವ ಮರೆಸಿತು
ಎಂಬುದೆಲ್ಲ ಕವಿತೆಯಲ್ಲಿನ
ಸಾಲಾಗಿ ಉಳಿಯಲಷ್ಟೇ

ಕಡಲ ತೀರವೋ,
ಹಸಿರು ಬೆಟ್ಟವೋ,
ವ್ಯತ್ಯಾಸವೇನಿಲ್ಲ
ಮೌನ ಮಾತನಾಡುವುದಿಲ್ಲ

ಕಂಡಕಂಡವರ ಬಗೆಗೆಲ್ಲ ಮಾತಾಡಿ
ಅವರಿವರ ವಿವರಗಳ ಹಂಚಿಕೊಂಡು
ಮುಂದಿನ ಸುಖಗಳ ಕನಸು ಕಂಡು
ಇರುವ ದುಃಖಕ್ಕೆ ಮತ್ತಷ್ಟು ಸೇರಿಸಿ
ಪರಸ್ಪರ ಕರುಣೆಯನ್ನು ಬೇಡಿ,
ಇಬ್ಬರೂ ಭಿಕ್ಷುಕರು......
ಅಬ್ಬಾ! ಮನಸು ಹಗುರಾಯಿತು ಎನುವಾಗ,

ಮೌನಕ್ಕೆ ಜಾಗವೆಲ್ಲಿ?
ಉಳಿಯಲೇಬೇಕು ಅದು ಕವಿತೆಯಲ್ಲಿ......