Wednesday 21 October, 2009

ನಾನು ಸಾಯುವ ಮುನ್ನಾ ದಿನ...



    
     ಮುದ್ದಿನ ಮಗಳಾಗಿ,ಅಕ್ಕರೆಯ ಅಕ್ಕನಾಗಿ, ತುಂಟ ತಂಗಿಯಾಗಿ, ಒಲುಮೆಯ  ಪತ್ನಿಯಾಗಿ, ಪ್ರೀತಿಯ ಅಮ್ಮನಾಗಿ ಒಟ್ಟಾರೆ ಎಲ್ಲ ಪಾತ್ರಗಳನ್ನೂ ಚೆನ್ನಾಗಿ ನಿರ್ವಹಿಸಿ, ಆದರೂ 'ನಾನು' ಎಲ್ಲೂ ಕಳೆದು ಹೋಗದಂತೆ ಕಾಪಾಡಿಕೊಂಡು ಬರಬೇಕೆಂಬ ಇರಾದೆಯಿತ್ತು. ಈಗ ಒಮ್ಮೆ ಹಿಂದಿರುಗಿ ನೋಡಿದರೆ... ನಾನು ಏನೇನು ಮಾಡಿದೆ? ಏನೇನಾದೆ? ಛೆ!

   ಬದುಕಿನ ಇಳಿಸಂಜೆಯ ಹೊಸ್ತಿಲಲ್ಲಿ ನಿಂತು ನೋಡಿದರೆ ದೊಡ್ಡ ಸದ್ದು ಗದ್ದಲದೊಂದಿಗೆ ಒಂದು ಸಂತೆಯೇ ಇದೆ ಬೆನ್ನ ಹಿಂದೆ. ತಿರುಗಿ ನೋಡಲು ಮನಸ್ಸೇ ಆಗುತ್ತಿಲ್ಲ. ಇಷ್ಟು ದಿನದಲ್ಲಿ ನಾನು ಸಾಧಿಸಿದ್ದೇನು ಎಂದು ಕೇಳಿಕೊಂಡರೆ ಮನಸ್ಸು ಬಿದ್ದು ಬಿದ್ದು ನಗುತ್ತಿದೆ, ಅಪಹಾಸ್ಯ ಮಾಡುತ್ತಿದೆ. ಬೇರೆ ಯಾರಾದರೂ ಕುಹಕವಾಡಿದಾಗ ಕಾಡುವ ನೋವಿಗೆ ಮನಸ್ಸು ಮದ್ದು ಕೊಟ್ಟು, ಮುದ್ದಿಸಿ, ತನ್ನಲ್ಲಿರುವ positive ಅಂಶಗಳನ್ನೋ, ಮಣ್ಣೋ, ಏನೋ ಒಂದು ಹೇಳಿ ಸಮಾಧಾನ ಮಾಡುತ್ತಿತ್ತು. ಇನ್ನೊಬ್ಬರಾಡಿದ ಅಣಕ ಎಲ್ಲಿಂದಲೋ ತಂದು ನೆಟ್ಟ ಗುಲಾಬಿ ಗಿಡದಂತೆ, ಎಲ್ಲೋ ಒಂದು ಕಡೆ ಮುಳ್ಳಿನಡಿಯಿ೦ದ ಹೂವು ಹುಟ್ಟುವ ಸಂಭವವಿದೆ. ನನ್ನ ಮನಸ್ಸೇ ನನಗಾಡಿದರೆ ಅಲ್ಲೇ ಗಟ್ಟಿ ಬೇರು ಬಿಟ್ಟ ಪಾರ್ಥೇನಿಯಂ ಗಿಡದಂತೆ.


   ಕಪ್ಪೆ ಚಿಪ್ಪಿನಲ್ಲಿ ಮುತ್ತಿದೆಯೆಂದು ಇಷ್ಟು ದಿನ ಜೋಪಾನ ಮಾಡಿದೆ, ಈಗ ಚಿಪ್ಪಿನೊಳಗೆ.. ಮುತ್ತಿದೆಯಾ? ಎಂದು ಇಣುಕಿದರೆ ಮುತ್ತಿಲ್ಲ ಹುಳುವಿದೆ ಎಂದು ತಿಳಿಯಿತು. ಎಷ್ಟು ದೊಡ್ಡ ಆಘಾತ! ಇದಕ್ಕೂ ಮನಸ್ಸು ನನ್ನನ್ನೇ ಅಣಕಿಸಿ ನಗುತ್ತದೆ. ಜಗತ್ತಿನಲ್ಲಿ ತುಂಬ ಎಚ್ಚರಿಕೆಯಿಂದ ಬಾಳುವವರು ತುಂಬ ಕಡಿಮೆ ಜನ, ಅಂಥವರಲ್ಲಿ ನಾನೂ ಒಬ್ಬಳು ಎಂದುಕೊಂಡೇ ಬಾಳಿದವಳ ಬಾಳು ಇಂದು ಕೊನೆಯ ಘಟ್ಟ ತಲುಪಿದೆ. ಇಂಥ ಪರಿಸ್ಥಿತಿಯಲ್ಲಿ ನನ್ನ ಮನಸ್ಸು ನಾನು ಯಾವುದಕ್ಕೂ ಕಾರಣವೇ ಅಲ್ಲ, ನಿನಗೆ ಕೊಟ್ಟ ಜೀವನವನ್ನು ನೀನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎನ್ನುತ್ತಾ, ತಪ್ಪುಗಳನ್ನೆಲ್ಲ ಬೊಟ್ಟು ಮಾಡಿ ತೋರಿಸುತ್ತಾ , ವ್ಯಂಗವಾಗಿ ನಗುತ್ತಿದ್ದರೆ, ಆಸರೆಯಿಲ್ಲದೇ ಬದುಕಿನ ಮುಸ್ಸಂಜೆಯ ಕೊನೇ ಕ್ಷಣಗಳನ್ನು ಕಂಬನಿ ತುಂಬಿಕೊಂಡು ಮಸುಕಾದ ಕಣ್ಣುಗಳಿಂದ ನೋಡುತ್ತಾ ನಿಂತವಳಿಗೆ ಹೇಗಾಗಬೇಡ? 

      
      ತೀರ ಅಸಹಾಯಕತೆಯ ಕ್ಷಣದಲ್ಲಿ ನಮ್ಮ ಮನಸ್ಸಾದರೂ ನಮ್ಮ ಜೊತೆಗಿರುತ್ತದೆ ಎಂಬ ಭರವಸೆಯಿಂದಲೇ ಅಲ್ಲವೇ ಜೀವನದುದ್ದಕ್ಕೂ ಮನಸಿನ ತಾಳಕ್ಕೆ ಹೆಜ್ಜೆ ಹಾಕಿದ್ದು. ಒಮ್ಮೆ ಕೊಂಚ ಗದರಿಸಿದರೂ ಮತ್ತೆ ನನ್ನದೇ ಮಗು ಎಂಬಂತೆ ಅದು ಹೇಳಿದ್ದನ್ನೆಲ್ಲ ನಡೆಸಿ ಕೊಟ್ಟಿಲ್ಲವೆ? ಅಷ್ಟಾಗಿಯೂ ಕೊನೇ ಘಳಿಗೆಯಲ್ಲಿ 'ನಿನ್ನ ಪಾಪ ಪುಣ್ಯಗಳಿಗೆ ನಾನು ಜವಾಬ್ದಾರನಲ್ಲ' ಎಂದು ಮನಸ್ಸು ಘೋಷಿಸಿಬಿಟ್ಟರೆ ಅದು ಮರಣ ಘಂಟೆಯ ಸದ್ದಿನಂತೆ ತೋರದೇ ಇರುವುದೇ?

     ಇಂದು ಮೊತ್ತ ಮೊದಲ ಬಾರಿಗೆ ಅನಿಸುತ್ತಿದೆ, ತೃಪ್ತಿಯ ಹೊರತಾಗಿ ನನಗೆ ಉಳಿದೆಲ್ಲವೂ ಸಿಕ್ಕಿವೆ ಎಂದು. ಅದೇಕೆ ತೃಪ್ತಿ ಸಿಗಲಿಲ್ಲವೆಂಬುದು ನನಗೂ ಗೊತ್ತಿಲ್ಲ. ಅವನನ್ನು ತುಂಬ ಇಷ್ಟಪಟ್ಟೆ, ಅವನನ್ನೇ ಮದುವೆಯಾದೆ. ನಾವು ಇಷ್ಟಪಟ್ಟವರು ನಮಗೆ ಸಿಗಲೇಬೆಕೆ೦ದೇನಿಲ್ಲ, ಅವರು ನಮ್ಮನ್ನು ಪ್ರೀತಿಸಲೇಬೇಕೆ೦ದೇನಿಲ್ಲ, ಎಂದೆಲ್ಲ ಹೇಳುವುದು ಕೇಳಿದ್ದೇನೆ. 'ಸಿಕ್ಕಿದರೆ ಅದೃಷ್ಟ' ಎನ್ನುತ್ತಾರಲ್ಲ. ಆ ಅದೃಷ್ಟ ನನ್ನದಾಯಿತು. 'ಸಿಗುವುದು' ಎಂದರೇನೆಂದು ನನಗೂ ಗೊತ್ತಿಲ್ಲ. ಆದರೂ ಅವನು ನನಗೆ ಸಿಕ್ಕಿದ್ದಾನೆ ಎಂದುಕೊಂಡೇ ಬದುಕಿಬಿಟ್ಟೆ. 

     
    ಬಹುಶಃ ಹತ್ತಿರವಿದ್ದ ಎನ್ನುವುದು ಸೂಕ್ತವಾದಿತೇನೋ.ಎಲ್ಲಿ ಹತ್ತಿರ? ಮನಸ್ಸಿಗೆ ಹತ್ತಿರವಿದ್ದನಾ? ಅವನ ಬಳಿ ನಾನು ಏನನ್ನೂ ಹೇಳಿಕೊಂಡಿಲ್ಲ. ಹೇಳಿಕೊಂಡದ್ದೂ ಅವನಿಗೆ ಅರ್ಥವೇ ಆಗಲಿಲ್ಲ ಕೊನೆಯವರೆಗೂ... ಕೊನೆಗೂ! ದೇಹಕ್ಕೆ ಹತ್ತಿರವಿದ್ದನಾ? ವರ್ಷದಲ್ಲಿ ೩ ತಿಂಗಳು ಮನೆಯಲ್ಲಿದ್ದರೆ ಹೆಚ್ಚಾಗಿತ್ತು. ಪಾಪ ನನಗೋಸ್ಕರ ತುಂಬ ಕಷ್ಟಪಟ್ಟು ದುಡಿಯುತ್ತಿದ್ದ. ಆದ್ದರಿಂದಲೇ ನನ್ನ ಜೊತೆಗಿರಲು ಅವನಿಗೆ ಎಂದೂ ಸಮಯ ಉಳಿಯಲೇ ಇಲ್ಲ! ಆದರೂ ಅವನು ನನಗೆ ಸಿಕ್ಕಿದ ಎಂದುಕೊಂಡು ನಾನು ಬದುಕಿದೆ!

     ಇಷ್ಟೆಲ್ಲಾ ಆದರೂ ನಾನು ಮಾತ್ರ ನಾನು ಬಯಸಿದವನು ನನಗೆ ಸಿಕ್ಕಿದನೆಂಬ ಖುಷಿಯಲ್ಲಿ ಬದುಕಿದೆನೆಂಬ ಧನ್ಯತೆಯಿತ್ತು ಇಷ್ಟು ದಿನ. ಇಂದೇಕೆ ಮನಸ್ಸು ಅತೃಪ್ತಿಯ ಕಡಲಲ್ಲೇ ಹುಟ್ಟಿ ಬೆಳೆದ ಮೀನಿನಂತೆ ಮಿಡುಕಾಡುತ್ತಿದೆ? ತಿಳಿಯುತ್ತಿಲ್ಲ ನನಗೆ. ಬಹುಶಃ ಇಷ್ಟು ದಿನವೂ ಮುಖವಾಡದ ಹಿಂದೆ ಬೆಚ್ಚಗೆ ಮುಚ್ಚಿಟ್ಟುಕೊ೦ಡಿದ್ದಿರಬೇಕು ನಾನು. ಪ್ರತಿ ದಿನವೂ ನಿನ್ನೆಯ ಮುಂದುವರಿದ ಭಾಗ ತಾನೇ? 'ಇವತ್ತು' ಎಂಬುದು ಯಾವುದೋ ಬೇರೆ ಗ್ರಹದಿಂದ ಉದುರಿ ಬೀಳುವುದಿಲ್ಲವಲ್ಲ. 

    
       ಇಷ್ಟು ದಿನ ತುಂಬ ಚೆನ್ನಾಗಿ ಬದುಕಿದೆ. ಆದರೂ ಕೊನೆಯೇಕೆ ಇಷ್ಟು ದಾರುಣವಾಗಿದೆ ಎಂದುಕೊಂಡರೆ ನಾನು ಇನ್ನೂ ನನ್ನನ್ನು ಪೂರ್ತಿಯಾಗಿ ತೆರೆದುಕೊಂಡಿಲ್ಲ ಎಂದೇ ಅರ್ಥ ಎ೦ದು ನಿರ್ಧರಿಸಿ ನನ್ನನ್ನು ನಾನು ಪೂರ್ತಿಯಾಗಿ ತೆರೆದಿಟ್ಟ ಪುಸ್ತಕದಂತಾಗಿಸ ಬಯಸಿದೆ. ಏನೂ ಬರೆಯದ ಸು೦ದರ ಪುಟಗಳು, ದೇವರು ನನಗಾಗಿ ಕೊಟ್ಟದ್ದು. ಅದನ್ನು ಅತ್ಯಂತ ಜತನದಿಂದ ಸಿಂಗರಿಸಿ ಮರಳಿಸಬಯಸಿದ್ದೆ. ಸಿಂಗರಿಸಲಂತೂ ಆಗಲಿಲ್ಲ. ಆದರೆ 'ಬದುಕಿನ ಕೊನೆ' ಎಂಬುದು ಅದನ್ನು ಮತ್ತಷ್ಟು ಬರಿದಾಗಿಸುತ್ತದೆ ಎಂದುಕೊಂಡಿರಲಿಲ್ಲ. ಪೂರ್ತಿ ಖಾಲಿಯಾಗಿಬಿಟ್ಟಿದ್ದೇನೆ ಎಂದು ಭಾಸವಾಗುತ್ತಿದೆ.

     ಸಾವಿನ ಭಯವಾ? ಇನ್ನು ಬದುಕಲು ಏನಿದೆ ನನಗೆ? ಜೀವನದಲ್ಲಿ ಒಂದು ಹೆಣ್ಣು ಏನೇನು ಅನುಭವಿಸಿ ಪರಿಪೂರ್ಣಳಾಗಬೇಕು ಎಂದು ಎಲ್ಲರೂ ಹೇಳುತ್ತಾರಲ್ಲ ಅದೆಲ್ಲ ನನಗೆ ಸಿಕ್ಕಿದೆ. ಇನ್ನಿಲ್ಲದಷ್ಟು ಸಂಭ್ರಮದಿ೦ದ ಬದುಕಿದ್ದೇನೆ ಎ೦ದುಕೊಡ್ಡಿದ್ದೆ. ಇನ್ನು ಮುಂದೆ ನಾನು ಬದುಕಿದರೆ ಬದುಕು ತುಂಬ ನೀರಸವಾಗಿ ಕೊನೆಗೊಳ್ಳುತ್ತದೆಯೆಂದೆನಿಸಿಯೇ ದೇವರು ನನ್ನನ್ನು   ತನ್ನ ತೆಕ್ಕೆಗೆ ತೆಗೆದುಕೊಳ್ಳಬಯಸಿದ್ದಿರಬೇಕು. 


      ಬದುಕಿನ ಪ್ರತಿಯೊ೦ದು ತಿರುವಿನಲ್ಲೂ, ಎ೦ಥ ಘೋರ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿಯೇ ಯೋಚಿಸುತ್ತ ಬಂದವಳು, ಸಾವೆಂಬ ಸುಂದರ ಘಟನೆಯನ್ನು ಅಲ್ಲಗಳೆಯುತ್ತೇನಾ? ಖಂಡಿತ ಇಲ್ಲ ಎಂದುಕೊಂಡಿದ್ದೆ. ನಾನು ನನ್ನ ಬಗ್ಗೆ ಅಂದುಕೊಂಡಿದ್ದೇ ಸುಳ್ಳಾಗಬಹುದಾದರೆ ಇನ್ನೊಬ್ಬರಿಂದ ನಿರೀಕ್ಷಿಸಿದ್ದು ಸುಳ್ಳಾಗುವುದರಲ್ಲಿ ಆಶ್ಚರ್ಯವೇನಿದೆ? ಜೀವನವೆಂಬುದು ಎಷ್ಟು ದೊಡ್ಡ ಪಾಠ ಕಲಿಸುತ್ತದೆ. ಕೊನೇ ಪಕ್ಷ ಅಷ್ಟೊಂದು ಕಲಿತೆ ಎಂಬ ತೃಪ್ತಿಯಾದರೂ ಉಳಿಯುತ್ತದೆಂದುಕೊಂಡಿದ್ದೆ. ಅದೂ ಉಳಿಯಲಿಲ್ಲ. ಆದರೂ ನಾನು ಇಷ್ಟು ಅತೃಪ್ತಿಯಿಂದ ನನ್ನ ಬದುಕನ್ನು ಮುಗಿಸುತ್ತೇನೆಂದು ಯಾವತ್ತೂ ಭಾವಿಸಿರಲಿಲ್ಲ. 

    ಬದುಕನ್ನು ಮುಗಿಸಿದವರೆಲ್ಲ ಎಲ್ಲಿ ಹೋಗುತ್ತಾರೆಂದು ಗೊತ್ತಿಲ್ಲ ನನಗೆ. ಎಲ್ಲೆಲ್ಲೋ ಹೋಗುತ್ತಾರೆಂದು ಕೇಳಿದ್ದೇನೆ. ಅಲ್ಲಿಗೆ ಹೋಗಿ ನೋಡುತ್ತೇನೆ, ಅಲ್ಲಾದರೂ ಅವನು ನನಗೆ ಸಿಗುತ್ತಾನಾ?(ಸಿಗಬೇಕಾ?) ತೃಪ್ತಿ ಸಿಗುತ್ತದಾ? ನೋಡಿ ನಿಮಗೆ ಹೇಳುತ್ತೇನೆ ಸಾಧ್ಯವಾದರೆ!

7 comments:

ravindra mavakhanda said...

hi,
Eshtu Chennaagi bareeteera......
abhinandanegalu
- Ravindra Maavakhanda
Vijaya Karnataka
Bangalore

ಕಾಣದ ಲೋಕದತ್ತ said...

aparichita sakhi jyothige!!!!
anantha abhinandanegalu....
mugila mohada hakki 'MAHESH' ninda,,
ninna manada maathugalige
kanda kalpanegalige
sundara kanasugalige
madhura bhavanegalige
irali nannadondu hats off...
heege hora hommuthirali battada oratheyanthe....

ದೀಪಸ್ಮಿತಾ said...

ನಿಮ್ಮ ಬ್ಲಾಗ್‍ಗೆ ಈಗ ಬಂದೆ. ತುಂಬಾ ಚೆನ್ನಾಗಿ ಬರೆಯುತ್ತೀರಿ. ಸಮಯ ಮಾಡಿಕೊಂಡು ನಿಮ್ಥಿಂದಿನ ಲೇಖನಗಳನ್ನೂ ಓದುತ್ತೇನೆ.

ವಿನಾಯಕ ಹೆಬ್ಬಾರ said...

ಹೊಟ್ಟೆಕಿಚ್ಚು ಬರುವಂತೆ ಬರೆದಿದ್ದೀರಾ....
ಈ ಅದ್ಭುತ ಬರಹಕ್ಕೆ ಅಭಿನಂದನೆಗಳು....

Jyoti Hebbar said...

ಅಭಿನಂದನೆಗಳ ಮಳೆಯಲ್ಲಿ ಕೊಚ್ಚಿ ಹೋದೆ ತರಗೆಲೆಯಂತೆ...
ಧನ್ಯವಾದಗಳು.

Anonymous said...

ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ಬಹುಶಃ ವ್ರದ್ಧಾಪ್ಯ ದಲ್ಲಿ ಮಾತ್ರ ಸಮಯ ಸಿಗುತ್ತದೆಯೇನೂ ಅಲ್ವೇ ಗೆಳತಿ?

Anonymous said...

houdu thumba chennagi barediddira.